ಧಾರವಾಡ : ಸ್ವಾತಂತ್ರ್ಯ ದಿನವು ಕೇವಲ ರಜಾದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಧನ್ಯವಾದ ಹೇಳಲು ಮತ್ತು ಅವರ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶ. ನಮ್ಮ ಧ್ವಜವನ್ನು ಹಾರಿಸುವುದು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವುದು ಮತ್ತು ಏಕತೆಯ ಮನೋಭಾವವನ್ನು ರೂಢಿಸಿಕೊಳ್ಳುವ ದಿನವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಹೇಳಿದರು.
ಧಾರವಾಡ ಜಿಲ್ಲಾಡಳಿತವು ಆರ್ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೇರವೆರಿಸಿ, ಸಂದೇಶ ನೀಡಿ, ಮಾತನಾಡಿದರು.
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ಮಹನೀಯರ ನೆನಪಿನಲ್ಲಿ ಮತ್ತು ಅವರುಗಳಿಗೆ ಗೌರವ ಸಲ್ಲಿಸುವುದಕ್ಕಾಗಿ ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಏಕತೆ, ಸತ್ಯಾಗ್ರಹ, ಅಹಿಂಸೆ ಹಾಗೂ ಶಾಂತಿ ಮಾರ್ಗವನ್ನು ಅನುಸರಿಸಿ ಸ್ವಾತಂತ್ರ್ಯ ಗಳಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಭಾರತದ ಸ್ವಾತಂತ್ರ್ಯದ ಚಳುವಳಿಯನ್ನು ರೂಪಿಸಿದ ನಮ್ಮ ಹಿರಿಯ ಹೋರಾಟಗಾರರಾದ ರಾಜಾರಾಮ್ ಮೋಹನ್ ರಾಯ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ದಾದಾಬಾಯಿ ನವರೋಜಿ, ಬಾಲ ಗಂಗಾಧರ ತಿಲಕ್, ಗೋಖಲೆ, ಲಾಲಾ ಲಜಪತರಾಯ್, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ನೇತಾಜಿ ಸುಭಾಷ್ಚಂದ್ರ ಬೋಸ್, ಭಗತ್ಸಿಂಗ್, ಮೌಲಾನಾ ಅಬುಲ್ ಕಲಾಂ ಆಜಾದ್ ಮೊದಲಾದ ಮಹನೀಯರುಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.
ಧಾರವಾಡ ಜಿಲ್ಲೆಯ ಮೈಲಾರ ಮಹದೇವಪ್ಪ, ಆರ್.ಆರ್.ದಿವಾಕರ್, ಉಮಾಬಾಯಿ ಕುಂದಾಪುರ, ಎನ್. ಎಸ್. ಹರಡೀಕರ್, ಕೆ.ಎಫ್.ಪಾಟೀಲ, ಗೋವಿಂದಾಚಾರ್ಯ ಅಗ್ನಿಹೋತ್ರಿ, ನರಸಿಂಹ ದಾಬಡೆ, ಡೆಪ್ಯೂಟಿ ಚನ್ನಬಸಪ್ಪ, ಸರ್. ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು ಸೇರಿದಂತೆ ಮೊದಲಾದ ನೇತಾರರು ಸ್ವಾತಂತ್ರ್ಯ ಹೋರಾಟದಲ್ಲಿ ಕೈ ಜೋಡಿಸಿದ್ದರು.
ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿರುವ ರಾಷ್ಟ್ರಧ್ವಜವನ್ನು ಧಾರವಾಡದ ಗರಗ ಹಾಗೂ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸಿದ್ಧಪಡಿಸಿ, ಇಡೀ ದೇಶಕ್ಕೆ ಒದಗಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವ ಸಂತೋಷ ಲಾಡ್ ಹೆಮ್ಮೆ ವ್ಯಕ್ತಪಡಿಸಿದರು.
ಈ ಸ್ವಾತಂತ್ರ್ಯ ದಿನದಂದು ಮಹಾತ್ಮ ಗಾಂಧೀಜಿಯವರ “ಮನುಷ್ಯರಾಗಿ ನಮ್ಮ ದೊಡ್ಡ ಸಾಮಥ್ರ್ಯವೆಂದರೆ, ಜಗತ್ತನ್ನು ಬದಲಾಯಿಸುವುದು ಅಲ್ಲ, ಬದಲಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು” ಎಂಬ ಮಾತುಗಳನ್ನು ಪಾಲಿಸೋಣ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ರವರು ರಚಿಸಿರುವ ಸಂವಿಧಾನದ ಪೂರ್ವ ಪೀಠಿಕೆಯು ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಒಳಗೊಂಡಿದೆ. ಉತ್ತಮ ನಾಗರಿಕರಾಗಲು, ಕಷ್ಟಪಟ್ಟು ಕೆಲಸ ಮಾಡಲು ಮತ್ತು ನಮ್ಮ ದೇಶದ ಪ್ರಗತಿಗೆ ಕೊಡುಗೆ ನೀಡಲು ನಾವು ಪಣ ತೊಡೋಣ ಹಾಗೂ ಬಲಿಷ್ಠ ಭಾರತದ ಕನಸನ್ನು ಜೀವಂತವಾಗಿರಿಸೋಣ ಎಂದು ಸಚಿವರು ಸಂಕಲ್ಪಿಸಿದರು.
ರಾಜ್ಯ ಸರಕಾರವು ನುಡಿದಂತೆ ನಡೆದಿದ್ದು, ಜನಪರ ಯೋಜನೆಗಳಾದ ಶಕ್ತಿ ಯೋಜನೆ ,ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಶಕ್ತಿ ಯೋಜನೆಯಡಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಜುಲೈವರೆಗೆ 2633.85 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ರೂ.564 ಕೋಟಿ ಮೊತ್ತದ ಸೇವೆಯನ್ನು ಪಡೆದಿರುತ್ತಾರೆ.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಒಟ್ಟು 3,77,367 ಮಹಿಳೆಯರಿಗೆ ರೂ.1,499 ಕೋಟಿಗಳ ಅನುದಾನವನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆ ಅಡಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಒಟ್ಟು 5,04,142 ಕುಟುಂಬಗಳಿಗೆ ರೂ.526 ಕೋಟಿಗಳನ್ನು ವೆಚ್ಚ ಮಾಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿ 3,84,630 ಬಿ.ಪಿ.ಎಲ್. ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸಲಾಗಿದೆ ಹಾಗೂ ಹೆಚ್ಚುವರಿಯಾಗಿ ಬಿ.ಪಿ.ಎಲ್. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ರೂ.170/- ಗಳಂತೆ ರೂ. 358 ಕೋಟಿಗಳನ್ನು ವಿತರಿಸಲಾಗಿದೆ.
ಯುವನಿಧಿ ಯೋಜನೆಗೆ ಧಾರವಾಡ ಜಿಲ್ಲೆಯಲ್ಲಿ 6951 ಫಲಾನುಭವಿಗಳಿಗೆ ನೇರ ನಗದು (ಡಿಬಿಟಿ) ಹಣವನ್ನು ವರ್ಗಾವಣೆ ಮಾಡಲಾಗಿದೆ.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2.81 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈ ವರೆಗೆ 2.91 ಲಕ್ಷ ಹೆಕ್ಟೇರ್ಗಳಷ್ಟು ಬಿತ್ತನೆಯಾಗಿದೆ.
ಮುಂಗಾರು ಹಂಗಾಮಿನಲ್ಲಿ ಒಟ್ಟು 13,143 ಕ್ವಿಂಟಾಲ್ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ ಹಾಗೂ 56,660 ಮೆಟ್ರಿಕ್ ಟನ್ಗಳಷ್ಟು ರಸಗೊಬ್ಬರವನ್ನು ವಿತರಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ರೂ.23.08 ಕೋಟಿಗಳ ಅನುದಾನ ಲಭ್ಯವಿರುತ್ತದೆ ಎಂದು ಚಿವ ಸಂತೋಷ ಲಾಡ್ ತಿಳಿಸಿದರು.
ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಸರ್ಕಾರವು ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ತಾವು ಮಂಡಿಸಿರುವ ಈ ಸಾಲಿನ ಬಜೆಟ್ ಮುಖಾಂತರ ನಾಡಿನ ಜನತೆಗೆ ತಿಳಿಸಿ, ಅವರ ಪ್ರೀತಿ ಗಳಿಸಿರುತ್ತಾರೆ.
ರೈತರು, ಕಾರ್ಮಿಕರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಬಡ ಜನತೆಗೆ ಭದ್ರತೆಯನ್ನು ಒದಗಿಸಲು ಸರ್ಕಾರ ಸದಾ ಬದ್ಧವಾಗಿದೆ.
ಒಟ್ಟಾರೆ ನಮ್ಮ ಸರ್ಕಾರದ ಮೂಲ ಉದ್ದೇಶ ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದಾಗಿದೆ. ಸರ್ಕಾರ ರೂಪಿಸುವ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಎಲ್ಲರ ಸಹಕಾರ ಮತ್ತು ಬದ್ಧತೆ ಅಗತ್ಯವಾಗಿದೆ. ಎಲ್ಲರ ಒಳಿತಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ವಿಶೇಷವಾಗಿ ಈ ಒಂದು ಕಾರ್ಯಕ್ರಮದಲ್ಲಿ ಬಹಳಷ್ಟು ಯುವಕ ಜನರು ಸೇರಿದ್ದೀರಿ ಈ ದೇಶದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಇದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಅಳವಡಿಸಿಕೊಂಡು ಈ ದೇಶವನ್ನು ಬಲಿಷ್ಠವನ್ನಾಗಿ ಮಾಡಿ ಮುಂದೆ ನಡೆಸಿಕೊಂಡು ಹೊಗೋಣ ಎಂದು ಅವರು ಹೇಳಿದರು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಅಪ್ಪಾಸಿ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಹುಬ್ಬಳ್ಳಿ ಧಾರವಾಡ ಮಹಾನಗರ ಪೆÇಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಟೀಲ ಭುವನೇಶ ದೇವಿದಾಸ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ಕರ್ನಾಟಕ ಕೈಮಗ್ಗ ಅಭಿವೃಧ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪವಾರ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಗಳು, ಜನಪ್ರತಿನಿದಿಗಳು, ಮುಖಂಡರು ವೇದಿಕೆಯಲ್ಲಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂಧಿಗಳು, ಸಾರ್ವಜನಿಕರು ಉಪಸ್ಥತರಿದ್ದರು.
*ಪಥ ಸಂಚಲನ :* ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತವು ಆಯೋಜಿಸಿದ್ದ 79ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆಕರ್ಷಕವಾದ ಪಥ ಸಂಚಲನವನ್ನು ಪ್ರಸ್ತುತ ಪಡಿಸಿದರು.
ಆರ್.ಎಸ್.ಐ. ವಾಸು ರಕ್ಷೇದ ನಾಯಕತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪಿಎಸ್ಐ ಅಭಿಜೀತ್ ನಾಯಕತ್ವದಲ್ಲಿ ನಾಗರೀಕ ಪೋಲೀಸ್ ತುಕಡಿ, ಪಿ.ಎಸ್.ಐ ಸ್ವಾತಿ ಮುರಾರಿ ನಾಯಕತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಪೋಲೀಸ್ ಆಯುಕ್ತರ ಮಹಿಳಾ ತಂಡ, ಭೀಮಪ್ಪ ಬೆನ್ನಪ್ಪನವರ ನಾಯಕತ್ವದಲ್ಲಿ ಗೃಹ ರಕ್ಷಕ ದಳ, ವಿಠೋಬಾ ಢವಳೆ ನಾಯಕತ್ವದಲ್ಲಿ ಅಗ್ನಿ ಶಾಮಕ ಇಲಾಖೆ, ಲಕ್ಷ್ಮಿ ಕಾಂಬಳೆ ನಾಯಕತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಕೇಸರಿ ತಂಡ, ಕವನಾ ಭಜಂತ್ರಿ ನಾಯಕತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಬಿಳಿ ತಂಡ, ಎಸ್. ನಾಗರತ್ನ ನಾಯಕತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಹಸಿರು ತಂಡ, ವಿಷ್ಣು ಚವ್ಹಾಣ ನಾಯಕತ್ವದಲ್ಲಿ ಅರಣ್ಯ ಇಲಾಖೆ, ಅಜಯ ಪಟ್ಟೋಜಿ ನಾಯಕತ್ವದಲ್ಲಿ ಸೀನಿಯರ್ ಎನ್.ಸಿ.ಸಿ. 24 ಬಟಾಲಿಯನ್, ನಾನಪ್ಪ ಲಮಾಣಿ ನಾಯಕತ್ವದಲ್ಲಿ ಎನ್.ಡಬ್ಲೂ. ಕೆ.ಎಸ್.ಆರ್.ಟಿ.ಸಿ. ತುಕಡಿ, ಹರೀಶ ರಾಥೋಡ್ ನಾಯಕತ್ವದಲ್ಲಿ ಶ್ರೀ ಎನ್.ಎ.ಮುತ್ತಣ್ಣ ಸ್ಮಾಕರ ಪೋಲೀಸ್ ಮಕ್ಕಳ ವಸತಿ ಶಾಲೆಯ ತಂಡ, ಚೈತ್ರಾ ದೇಗಾವಿ ನಾಯಕತ್ವದಲ್ಲಿ ಸೀನಿಯರ್ ಗಲ್ರ್ಸ ಎನ್.ಸಿ.ಸಿ. ತಂಡ, ಕಿಶೋರ ಹುರಳಿಕುಪ್ಪಿ ನಾಯಕತ್ವದಲ್ಲಿ ಜೂನಿಯರ್ ಎನ್.ಸಿ.ಸಿ. 24 ಬಟಾಲಿಯನ್ ತಂಡ, ಸಹನಾ ಬಟಕುರ್ಕಿ ನಾಯಕತ್ವದಲ್ಲಿ ಜೂನಿಯರ್ ಗಲ್ರ್ಸ ಎನ್.ಸಿ.ಸಿ. ತಂಡ, ಪ್ರಣವಿ ಕನ್ನೂರ ನಾಯಕತ್ವದಲ್ಲಿ ಪ್ರಸೆಂಟೇಷನ್ ಸ್ಕೂಲ್ ಗೈಡ್ಸ್ ತುಕಡಿ, ಮಲ್ಲಿಕಾರ್ಜುನ ಬಂಕಾಪೂರ ನಾಯಕತ್ವದಲ್ಲಿ ಸೆಂಟ್ ಜೋಸೆಪ್ಸ್ ಹೈಸ್ಕೂಲ್ ತಂಡ, ವೀರೇಶ ಅಂಗಡಿ ನಾಯಕತ್ವದಲ್ಲಿ ಕರ್ನಾಟಕ ಹೈಸ್ಕೂಲ್ ತಂಡ, ಗೌಥಮಿ ಭಟ್ ನಾಯಕತ್ವದಲ್ಲಿ ಕೆ.ಎನ್.ಕೆ. ಬಾಲಕೀಯರ ಪ್ರೌಢ ಶಾಲೆಯ ತಂಡ ಭಾಗವಹಿಸಿದ್ದವು.
ಪಥಸಂಚಲನಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎ.ಆರ್.ಎಸ್.ಐ ವೈ.ಎಫ್.ಭಜಂತ್ರಿ ಮತ್ತು ಸ್ಟಿಕ್ ಮೇಜರ್ ಸಾಗರ ಬಸರಕೋಡಿ ಅವರ. ನೇತೃತ್ವದಲ್ಲಿ ಧಾರವಾಡ ಜಿಲ್ಲಾ ಪೆÇಲೀಸ್ ಬ್ಯಾಂಡ್ ಹಾಗೂ ಎನ್.ಡಬ್ಲೂ ಕೆ.ಎಸ್.ಆರ್.ಟಿ.ಸಿ. ತಂಡಗಳು ವಾಧ್ಯ ವೃಂದ ನುಡಿಸಿದವು.
ಪಥಸಂಚಲನದಲ್ಲಿ ಪ್ರಥಮ ಸ್ಥಾನವನ್ನು ಸೀನಿಯರ್ ಎನ್.ಸಿ.ಸಿ. 24 ಬಟಾಲಿಯನ್ ಪ್ಲಟೂನ್ ಕಮಾಂಡರ್ ಅಜಯ ಪಟ್ಟೋಜಿ, ದ್ವಿತೀಯ ಸ್ಥಾನವನ್ನು ಶ್ರೀ.ಎನ್.ಎ.ಮುತ್ತಣ್ಣ ಸ್ಮಾಕರ ಪೋಲೀಸ್ ಮಕ್ಕಳ ವಸತಿ ಶಾಲೆ ಪ್ಲಟೂನ್ ಕಮಾಂಡರ್ ಹರೀಶ ರಾಥೋಡ್ ಹಾಗೂ ತೃತೀಯ ಸ್ನಾನವನ್ನು ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಕೇಸರಿ ತಂಡದ ಪ್ಲಟೂನ್ ಕಮಾಂಡರ್ ಲಕ್ಷ್ಮಿ ಕಾಂಬಳೆ ಅವರು ಪಡೆದುಕೊಂಡರು.
*ಸಾಧಕರಿಗೆ ಸನ್ಮಾನ:* ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಧಾರವಾಡ ಜಿಲ್ಲಾಡಳಿತದಿಂದ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಹಿರಿಯರನ್ನು ಗೌರವಿಸಿ, ಸನ್ಮಾನಿಸಿದರು.
ಪ್ರೇಕ್ಷಕರ ಮನ ಗೆದ್ದ ಸಾಂಸ್ಕøತಿಕ ಕಾರ್ಯಕ್ರಮಗಳು:
ಜಿಲ್ಲಾಡಳಿತವು 79 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗದಲ್ಲಿ ಇಂದು ಆಯೋಜಿಸಿದ್ದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಗೆದ್ದವು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಕ್ಯಾಟೋ ಬ್ಯಾಂಡ ತಂಡದವರಿಂದ ಜರುಗಿದ ಸಂಗೀತ ಕಾರ್ಯಕ್ರಮವು ಆಕರ್ಷಕವಾಗಿತ್ತು. ಜಿಲ್ಲೆಯ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿನಿಲಯಗಳ ವಿದ್ಯಾರ್ಥಿನಿಯರಿಂದ ಸಮೂಹನೃತ್ಯವನ್ನು ಪ್ರದರ್ಶಿಸಿದರು. ಡಾನ್ಸ್ ಕರ್ನಾಟಕ ಡಾನ್ನ ತಂಡದಿಂದ ಸಮೂಹ ನೃತ್ಯ, ಹೈಸ್ಕೂಲು ವಿದ್ಯಾರ್ಥಿಗಳಿಂದ ಜರುಗಿದ ದೇಶಭಕ್ತಿಗೀತೆ, ಸಮೂಹ ನೃತ್ಯ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಕುಂದಗೋಳ ತಾಲೂಕಿನ ವಿದ್ಯಾರ್ಥಿಗಳಿಂದ ಮಲ್ಲಕಂಬ ಪ್ರದರ್ಶನ ಜರುಗಿತು. ಮತ್ತು ಖ್ಯಾತ ಕೊರಿಯೋಗ್ರಾಫರ್ ರುದ್ರಾ ಮಾಸ್ವರ ತಂಡದವರಿಂದ ಆಕರ್ಷಕ ಸಮೂಹ ನೃತ್ಯ ಜರುಗಿತು.