ಮಣ್ಣು ಪರೀಕ್ಷೆ ಮಾಡಿಸಿ ಇಳುವರಿ ಹೆಚ್ಚಿಸಿ: ಎಸ್. ಎಮ್. ವಾರದ

Ravi Talawar
ಮಣ್ಣು ಪರೀಕ್ಷೆ ಮಾಡಿಸಿ ಇಳುವರಿ ಹೆಚ್ಚಿಸಿ: ಎಸ್. ಎಮ್. ವಾರದ
WhatsApp Group Join Now
Telegram Group Join Now

ನೇಸರಗಿ: ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ  ಎಸ್. ಎಮ್. ವಾರದ ಇವರು ರೈತರನ್ನು ಉದ್ಧೇಶಿಸಿ ಮಾತನಾಡುತ್ತಾ, ಪ್ರತಿಯೊಬ್ಬ ರೈತರು ತಮ್ಮ ಹೊಲದ ಮಣ್ಣನ್ನು ಪರೀಕ್ಷೆಗೊಳಪಡಿಸಿ ಲಭ್ಯವಿರುವ ಪೋಷಕಾಂಶಗಳನ್ನು ಅರಿತುಕೊಂಡು ಬಿತ್ತನೆ ಮಾಡಿ ಅಧಿಕ ಇಳುವರಿ ಪಡೆಯಲು ಪ್ರಯತ್ನಿಸಲು ಕೋರಿದರು. ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ವಿಕಸಿತ ಸಂಕಲ್ಪ ಕೃಷಿ ಅಭಿಯಾನದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣಿನ ಮಾದರಿಗಳನ್ನು ನೀಡಿ, ಪರೀಕ್ಷೆ ಮಾಡಿಸಬೇಕು. ಒಂದು ವೇಳೆ ರೈತರು ಬೋರ್‌ವೆಲ್ ಕೊರಸಿದ್ದರೆ ಆ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಈ ಸೌಲಭ್ಯವು ನಿಮ್ಮ ಸಮೀಪದ ಕೆಎಲ್‌ಇ ಸಂಸ್ಥೆಯ ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿರುವುದಾಗಿ ತಿಳಿಸಿದರು. ಅವರು ರಾಮದುರ್ಗ ತಾಲೂಕಿನ ಸಾಲಹಳ್ಳಿ, ಚಿಕ್ಕೊಪ್ಪ, ಹುಲಕುಂದ, ಕಟಕೋಳ, ಗೊಡಚಿ, ಬನ್ನೂರ ಗ್ರಾಮಗಳಲ್ಲಿ ಜರುಗಿದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ರೈತರನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು. ನಿಮ್ಮ ಹೊಲದ ಮಣ್ಣು ಹಾಗೂ ನೀರು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಲ್ಲಿ ಸಮತೋಲಿತ ಗೊಬ್ಬರ ಪ್ರಮಾಣ ಬಳಕೆಯಿಂದಾಗಿ ಕೃಷಿಯಲ್ಲಿ ರಸಗೊಬ್ಬರ ಬಳಕೆಗೆ ಬೇಕಾದ ಮೊತ್ತವನ್ನು ಕಡಿಮೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಬೇಸಾಯ ತಜ್ಞ ಜಿ. ಬಿ. ವಿಶ್ವನಾಥ ಮಾತನಾಡಿ, ಸೋಯಾಬಿನ್, ಹೆಸರು, ಉದ್ದು, ಮಡಿಕೆ ಹಾಗೂ ಗೋವಿನ ಜೋಳ ಬೆಳೆಯ ಬಿತ್ತನೆಗೆ ಈಗ ಸಕಾಲವಾಗಿದ್ದು, ರೈತರು ಬೀಜಗಳನ್ನು ಸಂಬಂಧಪಟ್ಟ ಗ್ರಾಮಗಳ ಅಧೀಕೃತ ಬೀಜ ವಿತರಕರಿಂದ ಖರೀದಿಸಬೇಕು. ಇದಲ್ಲದೆ ಬಿತ್ತನೆಯ ನಂತರ ಖರೀದಿಸಿದ ರಸೀದಿ, ಬೀಜದ ಚೀಲ ಹಾಗೂ ಸ್ವಲ್ಪ ಪ್ರಮಾಣದ ಬೀಜವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಏನಾದರೂ ಸಮಸ್ಯೆಯಾದಲ್ಲಿ ಈ ಕ್ರಮಗಳು ರೈತರ ನೆರವಿಗೆ ಬರುತ್ತವೆ ಎಂದರು. ಒಂದು ವೇಳೆ ನಿಮ್ಮ ಮನೆಯ ಬೀಜಗಳನ್ನು ಬಳಸುವುದಾದಲ್ಲಿ ಮೊಳಕೆ ಪ್ರಮಾಣವನ್ನು ಪರೀಕ್ಷಿಸಿ ನಂತರವೇ, ಬಿತ್ತನೆ ಮಾಡಬೇಕು ಎಂದರು. ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ಎಸ್. ಎಸ್. ಹಿರೇಮಠ ಇವರು ಪ್ರಾತ್ಯಕ್ಷಿಕೆ ಮೂಲಕ ಸಾರಜನಕ ಸ್ಥಿರೀಕರಿಸುವ ರೈಜೋಬಿಯಂ, ಅಜೋಸ್ಪಿರಿಲಂ, ರಂಜಕ ಕರಗಿಸುವ ಜೈವಿಕ ಗೊಬ್ಬರ ಹಾಗೂ ಜೈವಿಕ ಶಿಲೀಂದ್ರನಾಶಕವಾದ ಟ್ರೈಕೋಡರ್ಮಾ ಜೀವಾಣುವನ್ನು ಬಳಸಲು ಕರೆ ನೀಡಿ ಪ್ರಾತ್ಯಕ್ಷಿಕೆ ಮೂಲಕ ಬೀಜೋಪಚಾರ ಮಾಡಿ ತೋರಿಸಿದರು. ಇದರಿಂದ, ನಿಸರ್ಗದಲ್ಲಿ ಸಿಗುವ ಸಾರಜನಕವನ್ನು ಬೇರಿನಲ್ಲಿರುವ ಗಂಟುಗಳ ಮೂಲಕ ಸ್ಥಿರೀಕರಿಸುವ ಮೂಲಕ ರೈತರಿಗೆ ಸಾರಜನಕ ಒದಗಿಸುವ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದರು. ಇದೇ ಸಂದರ್ಭದಲ್ಲಿ ಇಫ್ಕೋ ಸಂಸ್ಥೆಯ ನವೀನ ಪಾಟೀಲ ಪದಾಧಿಕಾರಿಗಳು ಎಲೆಗಳ ಮೂಲಕ ಸಿಂಪಡಿಸಬಹುದಾದ ಡಿಎಪಿ ಮತ್ತು ಯೂರಿಯಾ ರಸಗೊಬ್ಬರದ ಪ್ರಾತ್ಯಕ್ಷಿಕೆಯನ್ನು ನೀಡಿದರು. ರಾಮದುರ್ಗ ತಾಲೂಕಿನಲ್ಲಿ ಹಲವಾರು ರೈತರು ಈರುಳ್ಳಿ ಬೆಳೆಯನ್ನು ಬೆಳೆಯುತ್ತಿದ್ದು, ಗುಣಮಟ್ಟದ ಭೀಮಾ ಸೂಪರ್ ತಳಿಯ ಈರುಳ್ಳಿ ಬೀಜಗಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿದ್ದು ಇವುಗಳನ್ನು ರೈತರು ಬಿತ್ತನೆಗೆ ಬಳಸಬಹುದೆಂದು ಕೇಂದ್ರದ ತೋಟಗಾರಿಕಾ ವಿಜ್ಞಾನಿ ಪ್ರವೀಣ ಯಡಹಳ್ಳಿ ಅಭಿಪ್ರಾಯ ಪಟ್ಟರು. ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಬೆಂಗಳೂರು ಕಚೇರಿಯಿಂದ ಬಂದಿರುವ ಡಾ. ವಿನಯ್ ಟಿ. ಎನ್. ಹಾಗೂ ಡಾ. ಮುರಳೀಧರ್ ಬಿ. ಎಮ್. ಇವರು ರೈತರೊಂದಿಗೆ ಸಂವಾದ ನಡೆಸಿ ಕೃಷಿ ತಾಂತ್ರಿಕತೆಗಳ ಕುರಿತು ಮಾಹಿತಿ ದಾಖಲಿಸಿಕೊಂಡರು.ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯ ಸಿಬ್ಬಂದಿ, ಕೃಷಿ ಸಂಜಿವೀನಿ ಕಾರ್ಯಕ್ರಮದ ತಾಂತ್ರಿಕ ಸಹಾಯಕರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ಒಟ್ಟು ೧೨೮ ಕ್ಕೂ ಅಧಿಕ ರೈತರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು.
ಡಾ. ಮಂಜುನಾಥ ಚೌರಡ್ಡಿ
ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು

WhatsApp Group Join Now
Telegram Group Join Now
Share This Article