ಜಮಖಂಡಿ,ಜು.೨೧: ವಿದ್ಯಾರ್ಥಿಗಳು ಸಾಕ್ಷಾತ್ ಸರಸ್ವತಿ ಆರಾಧಕರಾಗಬೇಕು. ಆ ನಿಟ್ಟಿನಲ್ಲಿ ಅಧ್ಯಯನವೇ ಜೀವನದ ಪಥವಾಗಬೇಕು. ಶಿಕ್ಷಕರ ಮಾತುಗಳನ್ನು ಹೀರಿಕೊಂಡು ಬುದ್ದಿಯನ್ನು ಅರಳಿಸಿಕೊಳ್ಳಬೇಕು ಎಂದು ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಹೇಳಿದರು.
ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಶನಿವಾರ ನಡೆದ ಸರಸ್ವತಿ ಪೂಜೆ, ೨೦೨೫-೨೬ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ೨೦೨೪-೨೫ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬಾಹ್ಯ ಆಕರ್ಷಣೆಗಳನ್ನು ಮೀರಿ ನಿಲ್ಲಬೇಕು. ವೇಗದ ಜಗತ್ತಿನಲ್ಲಿ?ಕಾಲಕ್ಕೆ?ತಕ್ಕಂತೆ?ಬದುಕನ್ನು ಬದಲಿಸಿಕೊಳ್ಳಬೇಕು. ಕೇಳಿದ್ದನ್ನು ಮನನ ಮಾಡಿಕೊಂಡ ಸ್ಮರಣದಲ್ಲಿ ಇಟ್ಟುಕೊಳ್ಳಬೇಕು. ತಂದೆ-ತಾಯಿಗಳಿಗೆ, ಕಲಿತ ಶಿಕ್ಷಣ ಸಂಸ್ಥೆಗೆ, ನಾಡಿಗೆ ಕೀರ್ತಿ ತರುವ ಹಾಗೂ ಸಂಸ್ಥೆಯ ಗೌರವ ಹೆಚ್ಚಿಸುವ ವಿದ್ಯಾರ್ಥಿಗಳಾಗಬೇಕು ಎಂದರು.ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೇನುನೊಣಗಳು ಹೂವಿನ ಬಣ್ಣ ಮತ್ತು ವಾಸನೆ ಕಿತ್ತುಕೊಳ್ಳದೆ ಕೇವಲ ತಮಗೆ ಬೇಕಾದ ಮಕರಂದವನ್ನು ಮಾತ್ರ ಹೀರಿಕೊಳ್ಳುವ ಹಾಗೆ ವಿದ್ಯಾರ್ಥಿಗಳು ತಮ್ಮ ವ್ಯಾಸಂಗಕ್ಕೆ ಪೂರಕವಾದುದನ್ನು ಮಾತ್ರ ಕಾಲೇಜಿನಿಂದ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಪ್ರತಿಭಾ ಪುರಸ್ಕಾರದಿಂದ ಪ್ರತಿಭೆಗೆ ಮನ್ನಣೆ ದೊರೆಯುತ್ತದೆ. ಪ್ರತಿಭಾ ಪುರಸ್ಕೃತರ ಜವಾಬ್ದಾರಿ ಹೆಚ್ಚುತ್ತದೆ. ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಸ್ಪೂರ್ತಿ ಸಿಗುತ್ತದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಸಚಿನ ಕಕಮರಿ(ವಿಜ್ಞಾನ ವಿಭಾಗಕ್ಕೆ ಪ್ರಥಮ, ಭೌತಶಾಸ್ತ್ರಕ್ಕೆ ಅತಿಹೆಚ್ಚು ಅಂಕ), ಶೋಭಾ ಕಣಬೂರ (ವಾಣಿಜ್ಯ ವಿಭಾಗಕ್ಕೆ ಪ್ರಥಮ, ಕನ್ನಡ ಮತ್ತು ವ್ಯವಹಾರ ಅಧ್ಯಯನಕ್ಕೆ ೧೦೦ಕ್ಕೆ ೧೦೦), ವೈಷ್ಣವಿ ಸಾಳುಂಕೆ(ಐಚ್ಛಿಕ ವಿಷಯಗಳಿಗೆ ಅತಿ ಹೆಚ್ಚು ಅಂಕ), ಸಾವಿತ್ರಿ ನಾವಿ, ರೂಪಾ ಕೊಟಗಿ(ಅರ್ಥಶಾಸ್ತ್ರ ವಿಷಯಕ್ಕೆ ಹೆಚ್ಚು ಅಂಕ), ಸಂದೀಪ ಲಿಗಾಡೆ (ಗಣಿತಕ್ಕೆ ೧೦೦ಕ್ಕೆ ೧೦೦), ಅಕ್ಷರಾ ತೇಲಿ(ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ) ಅವರುಗಳ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.ಉಪನ್ಯಾಸಕ ಪಿ.ಎನ್. ವಜ್ರಮಟ್ಟಿ, ಉಪಪ್ರಾಚಾರ್ಯ ಶ್ರೀಕಾಂತ ಬೆಳ್ಳಿಹಾಳ, ವಿದ್ಯಾರ್ಥಿಗಳಾದ ಅಕ್ಷರಾ?ತೇಲಿ, ಸಚಿನ ಕಕಮರಿ, ಶೋಭಾ ಕಣಬೂರ, ರೂಪಾ ಕೊಟಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳಿಗೆ ಅಧ್ಯಯನವೇ ಜೀವನದ ಪಥವಾಗಬೇಕು : ಹರ್ಷಾನಂದ ಶ್ರೀಗಳು
