ಬಳ್ಳಾರಿ, ಜೂ. 10.: ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ, ಶ್ರದ್ಧೆ, ಶಿಸ್ತು, ಸ್ಪರ್ಧಾತ್ಮಕ ಮನೋಭಾವದಿಂದ ಓದಿದವರು ಯಶಸ್ಸು ಪಡೆಯಲು ಸಾಧ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಚೆಲುವರಾಜು ಅವರು ಹೇಳಿದರು.
ಸೋಮವಾರ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮದರ್ಜೆ ಕಾಲೇಜು ಆಯೋಜಿಸಿದ್ದ 2024-25ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರತಿಭೆಗಳು ಗುಡಿಸಲುಗಳಲ್ಲಿ ಹುಟ್ಟಿ ಅರಮನೆಯಲ್ಲಿ ಅರಳುತ್ತವೆ ಎನ್ನುವ ಮಾತು ಸುಳ್ಳಲ್ಲ. ಬಡತನದಿಂದ ಬಂದ ಪ್ರತಿಭಾವಂತರು ಯಶಸ್ವಿಯಾದ ಸಾವಿರಾರು ಉದಾಹರಣೆಗಳಲ್ಲಿ ತಮ್ಮದು ಒಂದು ಎಂದರು.
ಪದವಿ ಓದುವಾಗ ಮೈಸೂರು ಮಹಾರಾಣಿ ಕಾಲೇಜು ವಾರ್ಷಿಕೋತ್ಸವಕ್ಕೆ ತೆರಳಲು ಬಸ್ ಚಾರ್ಜಿಗೆ ದುಡ್ಡಿಲ್ಲದ ತಾವು ಇಂದು ತಮ್ಮ ಮುಂದೆನಿಂತು ವಿಶೇಷ ಭಾಷಣ ಮಾಡಲು ಸಾಧ್ಯವಾಗಿದೆ. ಇದಕ್ಕೆ ಕಾರಣ ಪದವಿ ಹಂತದಲ್ಲಿ ಶ್ರಮವಹಿಸಿ ಆಂಗ್ಲಭಾಷೆಯಲ್ಲಿ ಪ್ರಭುತ್ವ ಸಾಧಿಸಿದೆ.ಮುಂದೆ ಜರ್ಮನಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕನಾಗಿಯೂ ಕರ್ತವ್ಯನಿರ್ವಹಿಸಿದ್ದನ್ನು ಸ್ಮರಿಸಿದರು.
ಕಾಲೇಜು ಗ್ರಂಥಾಲಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕ ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಭಾರತ ರತ್ನ ಡಾ. ಬಿ ಆರ್ ಅವರು ಶಿಕ್ಷಣದ ಮೂಲಕವೇ ಜಗತ್ತನ್ನು ಗೆದ್ದರು. ಜ್ಞಾನಾರ್ಜನೆ ಮೂಲಕ ಯಾವ ಹಂತವನ್ನು ತಲುಪಬಹುದು ಎಂದರು.ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜ್ಞಾನ, ಸಂವೇದನೆ, ಕಾಳಜಿ ಹುಟ್ಟುತ್ತಲೇ ಇರುತ್ತದೆ. ಈ ಹಿನ್ನಲೆಯಲ್ಲಿ ಐಎಎಸ್, ಐಪಿಎಸ್, ಐಎಫ್ಎಸ್ ಪರೀಕ್ಷೆ ಗಳನ್ನು ಉತ್ತೀರ್ಣರಾಗುತ್ತಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಂದೆ ತಾಯಿಗಳು ಕಂಡ ಕನಸನ್ನು ನಮಸು ಮಾಡಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರೊ.ಮರೇಗೌಡ ಅವರು ಮಾತನಾಡಿ ಖಾಸಗಿ ಶಾಲಾ ಕಾಲೇಜುಗಳಿಗಿಂತ ಸರಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸಂಸ್ಕಾರ, ಶಿಕ್ಷಣ ದೊರೆಯುತ್ತದೆ ಎಂದು ಹೇಳಿದರು.
ಮತ್ತೋರ್ವ ಸದಸ್ಯ, ನ್ಯಾಯವಾದಿ ಬಿ.ಜಯರಾಂ ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಸಾಧನೆಗಳ ಮೂಲಕ ಹೆತ್ತವರು ಹಾಗೂ ಕಾಲೇಜಿಗೆ ಹೆಸರು ತರಬೇಕು ಎಂದರು.
ಕಾಲೇಜು ಹಳೇ ವಿದ್ಯಾರ್ಥಿಗಳಸಂಘದ ಅಧ್ಯಕ್ಷ ವೆಂಕಟೇಶ್ ಹೆಗಡೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಸಿ. ಎಚ್ ಸೋಮನಾಥ ಅವರು ಗಣ್ಯರನ್ನು ಸತ್ಕರಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಹಿರಿಯ ಸದಸ್ಯ ಪ್ರೊ.ಎಸ್ ಎಸ್ ಪಾಟೀಲ್, ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ, ನ್ಯಾಯವಾದಿ ಹನುಮಂತರೆಡ್ಡಿ, ಕಾಲೇಜಿನ ಪರೀಕ್ಷಾ ನಿಯಂತ್ರಕಿ ಡಾ.ಶೋಭ ರಾಣಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ
ಮೋನಿಕ ರಂಜನ್, ಡಾ.ದಸ್ತಗಿರಿ ಸಾಬ್ ದಿನ್ನಿ, ಡಾ.ಎಸ್. ಮಂಜುನಾಥ್, ಕಚೇರಿ ವ್ಯವಸ್ಥಾಪಕ ಯುವರಾಜ ನಾಯ್ಕ್, ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷ ಡಾ.ಟಿ
ದುರುಗಪ್ಪ, ಕಚೇರಿ ಅಧೀಕ್ಷಕಿ ರತ್ನಮ್ಮ ಸೇರಿದಂತೆ ಹಿರಿಯ ಪ್ರಾಧ್ಯಾಪಕರು, ಉಪನ್ಯಾಸಕರು ಉಪಸ್ಥಿತರಿದ್ದರು.
ಹಿರಿಯ ಗಾಯಕಿ ಹೊಸಪೇಟೆಯ ಸವಿತಾ ಅಮರೇಶ ನುಗಡೋಣಿ ಮತ್ತು ತಂಡದ ವಚನ ಸಂಗೀತ ಗಮನ ಸೆಳೆಯಿತು. ರಾಘವೇಂದ್ರ ಗುಡದೂರು ಮತ್ತುಹರ್ಷ ಆಚಾರ್ ಅವರು ಹಾರ್ಮೋನಿಯಂ, ತಬಲಸಾಥ್ ನೀಡಿದರು.
ಡಾ. ದಸ್ತಗಿರಿ ಸಾಬ್ ದಿನ್ನಿ ಸ್ವಾಗತಿಸಿದರು. ಡಾ. ಜ್ಯೋತಿ ಅಣ್ಣಾರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು..
ಸಹಾಯಕ ಪ್ರಾಧ್ಯಾಪಕಿ ಡಾ.ಪಲ್ಲವಿ ನಿರೂಪಿಸಿ, ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನಗೆದ್ದವು.