ಬಳ್ಳಾರಿ. ಮಾ. 31: ಪ್ರಪಂಚದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಕಲೆ ತೊಗಲುಗೊಂಬೆ ಮನುಷ್ಯ ಜೀವನದ ಒತ್ತಡಗಳನ್ನು ನಿವಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ ಮಧುಸೂಧನ ಕಾರಿಗನೂರು ಅಭಿಪ್ರಾಯ ಪಟ್ಟರು.
ಅವರು ತೊಗಲುಗೊಂಬೆ ಕಲಾವಿದ ದಿ.ಶ್ರೀ ಹುಲೆಪ್ಪನವರ ಸ್ಮರಣಾರ್ಥವಾಗಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ಟ್ರಸ್ಟ್ ವತಿಯಿಂದ ನಗರದ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹುಲಿಕುಂಟೆ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಸಂಡೂರಿನ ಪ್ರಭುದೇವರ ಮಠದ ಶ್ರೀ ಶ್ರೀ ಶ್ರೀ ಮಾ. ನೀ. ಪ್ರ. ಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿ ಜೀವನದ ಮೌಲ್ಯಗಳನ್ನು ನಾವು ರಂಗದಲ್ಲಿ ಕಲಿಯುತ್ತೇವೆ ಪ್ರಶಸ್ತಿಯನ್ನು ಸ್ವೀಕರಿಸಿದ ಎಲ್ಲಾ ಗಣ್ಯರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ತೊಗಲುಗೊಂಬೆ ಆಟ ರಾಜರ ಆಶ್ರಯಕ್ಕಿಂತ ಜನರ ಆಶ್ರಯದಲ್ಲಿ ಬೆಳೆಯಿತು. ಬಳ್ಳಾರಿಯಲ್ಲಿ ನುರಿತ ಕಲಾವಿದರನ್ನು ಗುರುತಿಸುವ ಕೆಲಸ ಈ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜೆ ಟಿ ಫೌಂಡೇಶನ್ ಅಧ್ಯಕ್ಷ ತಿಮ್ಮಪ್ಪ ಜೋಳದ ರಾಶಿ ಮಾತನಾಡಿ ದೇಶ ವಿದೇಶದಲ್ಲಿ ತೊಗಲುಗೊಂಬೆ ನಾಟಕ ಪ್ರದರ್ಶನಕ್ಕೆ ತುಂಬಾ ಬೇಡಿಕೆ ಇದೆ ಎಲೆ ಮರ ಕಾಯಿಯಂತಿರುವ ಕಲಾವಿದರನ್ನು ಹುಡುಕಿ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿಯನ್ನು ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ದೊಡ್ಡ ಕೇಶವ ರೆಡ್ಡಿ ಅವರ ಪುತ್ರರಾದ ರಾಘವ ರೆಡ್ಡಿ ವಹಿಸಿಕೊಂಡಿದ್ದರು.
ವೇದಿಕೆಯ ಮೇಲೆ ಡಾ. ರಾಮ್ ಕಿರಣ್, ಜಿಲಾನಿ ಭಾಷಾ, ದೊಡ್ಡಬಸಪ್ಪ ಯಾಟಿ ಉಪಸ್ಥಿತರಿದ್ದರು.
ನಂತರ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡ ಇವರು ಈ ವರ್ಷದ ಹುಲಿಕುಂಟೆ ಶ್ರೀ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ 27 ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ತುರನೂರ್ ಅವರಿಂದ ಸುಗಮ ಸಂಗೀತ, ಎಸ್ ಕೆ ಆರ್ ಜಿಲಾನಿ ಭಾಷಾ ಅವರಿಂದ ಸಮೂಹ ನೃತ್ಯ ಮಲ್ಲಿಕಾರ್ಜುನ ಸ್ವಾಮಿ ಮತ್ತು ತಂಡದಿಂದ ರೇಣುಕಾ ಮಹಾತ್ಮೆ ಬೈಲಾಟ ಪ್ರದರ್ಶನ ನಡೆಸಲಾಯಿತು.
ಸಂಸ್ಥೆಯ ಅಧ್ಯಕ್ಷ ಕೆ. ಹೊನ್ನೂರಸ್ವಾಮಿ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು ಪ್ರಾರ್ಥನೆ ಜಡೆೆಶ ಎಮ್ಮಿಗನೂರು ವಂದನಾರ್ಪಣೆ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಲಕ್ಷ್ಮಿದೇವಿ ಕಾರ್ಯಕ್ರಮದ ನಿರೂಪಣೆ ಬಸವರಾಜ ಅಮಾತಿ ಮತ್ತು ವಿಷ್ಣು ಹಡಪದ ನೆರವೇರಿಸಿಕೊಟ್ಟರು.


