ಬಳ್ಳಾರಿ: 12 ನಗರದ ಸತ್ಯನಾರಾಯಣ ಪೇಟೆ 1ನೇ ಮುಖ್ಯ ರಸ್ತೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರೀಮಠದಲ್ಲಿ, ಶ್ರೀ ರಾಘವೇಂದ್ರ ತೀರ್ಥ ಗುರುಸರ್ವಭೌಮರ 354ನೇ ಆರಾಧನೆ ಮಹೋತ್ಸವ ನಿಮಿತ್ತ ಬುಧವಾರ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಆರಾಧನೆ ಮಹೋತ್ಸವ ಹಿನ್ನೆಲೆ ಮೂರು ದಿನಗಳ ಕಾಲ ಶ್ರೀ ಮಠದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು, ಶ್ರೀ ಮಠದ ಆಡಳಿತಾಧಿಕಾರಿ ಪಂ.ಪ್ರಸನ್ನಾಚಾರ್ ಅವರ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದವು. ಶ್ರೀ ಗುರುರಾಯರ ಉತ್ತರಾರಾಧನೆ ನಿಮಿತ್ತ ಬೆಳಿಗ್ಗೆ ನೂರಾರು ಭಕ್ತರ ಮಧ್ಯೆ ರಥೋತ್ಸ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಭಜನೆ, ಡೊಳ್ಳು ಕುಣಿತ ಗಮನಸೆಳೆಯಿತು. ನೆರೆದ ನೂರಾರು ಭಕ್ತರು, ಯುವಕರು, ಒಬ್ಬರಿಗೊಬ್ಬರು ಕೇಸರಿ ಬಣ್ಣವನ್ನು ಎರಚಿ ಶ್ರಿಗುರುರಾಯರ ನಾಮ ಸ್ಮರಣೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ಶ್ರೀಮಠದಲ್ಲಿ ಆಡಳಿತಾಧಿಕಾರಿ ಪಂ.ಪ್ರಸನ್ನಾಚಾರ್ ಹಾಗೂ ಜ್ಯೋತಿಷಿ ಪಂ.ಗುರುರಾಜ ಆಚಾರ ಅವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ, ಶ್ರೀ ಹರಿವಾಯುಸ್ತುತಿ ಮಂತ್ರ ಪಠಣ, ಸೇರಿದಂತೆ ವಿವಿಧ ಪೂಜೆಗಳು ನಡೆದವು. ಆರಾಧನೆ ಮಹೋತ್ಸವ ನಿಮಿತ್ತ ಬೆಳಿಗ್ಗೆ ವಿಶೇಷ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಹಸ್ತೊದಕ, ಮಹಾಮಂಗಳಾರತಿ, ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಗುರುರಾಯರ ದರ್ಶನ ಪಡೆದು, ಭಕ್ತಿ ಸಮರ್ಪಿಸಿದರು. ಆಗಮಿಸಿದ ಎಲ್ಲರಿಗೂ ತೀರ್ಥ, ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಗೌರವ ವಿಚಾರಣಾಕರ್ತರು, ಸಿಬ್ಬಂದಿಗಳು, ವಿವಿಧ ಗಣ್ಯರು, ಭಕ್ತರು ಭಾಗವಹಿಸಿ ಭಕ್ತಿ ಸಮರ್ಪಿಸಿದರು.