ಮುದ್ದೇಬಿಹಾಳ: ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಐದು ದಿನಗಳ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಭವ್ಯ ಚಾಲನೆ ನೀಡಲಾಯಿತು. ಬೆಳಿಗ್ಗೆ ಕಿಲ್ಲಾದ ಹೊಸಮಠ ಆವರಣದಲ್ಲಿರುವ ದ್ಯಾಮವ್ವದೇವಿಯ ಹಳೇಯ ಗುಡಿಯ ಹತ್ತಿರ ಚಕ್ಕಡಿಯಲ್ಲಿ ದೇವಿಯ ಸರ್ವಾಲಂಕೃತ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಾಂಪ್ರದಾಯಿಕ ಪೂಜೆ ನಂತರ ಮೆರವಣಿಗೆ ಪ್ರಾರಂಭಿಸಲಾಯಿತು. ಸರಾಫ ಬಜಾರ ಮಾರ್ಗವಾಗಿ ಮುಖ್ಯ ಬಜಾರ್ನಲ್ಲಿರುವ ಗ್ರಾಮದೇವತೆ ಕಟ್ಟೆಯ ಹತ್ತಿರ ಬಂದ ಮೆರವಣಿಗೆಯ ಜೊತೆಗೆ ಚಕ್ಕಡಿಯಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದ್ಯಾಮವ್ವಳ ಸಹೋದರಿ ಶ್ರೀ ಶಾರದಾದೇವಿಯ ಮೂರ್ತಿಯೂ ಮೆರವಣಿಗೆಯೊಂದಿಗೆ ಆಗಮಿಸಿ ಮುಖ್ಯ ಮೆರವಣಿಗೆಯಲ್ಲಿ ಸೇರ್ಪಡೆಯಾಯಿತು. ದ್ಯಾಮವ್ವದೇವಿಯ ಚಕ್ಕಡಿಯಲ್ಲಿ ಊರಗೌಡರಾದ ಪುಟ್ಟುಗೌಡ ಪಾಟೀಲ, ಅರ್ಚಕ ಗುಂಡಪ್ಪ ಬಡಿಗೇರಿ, ಶಾರದಾದೇವಿಯ ಚಕ್ಕಡಿಯಲ್ಲಿ ಅರ್ಚಕ ಯಮನಪ್ಪ ಪೂಜಾರಿ ಇನ್ನಿತರರು ಉಪಸ್ಥಿತರಾಗಿ ಭಕ್ತರ ಕಾಣಿಕೆಯನ್ನು ದೇವಿಗೆ ಅರ್ಪಿಸುವಲ್ಲಿ ನಿರತರಾಗಿದ್ದರು. ಅಲ್ಲಿಂದ ಹೊರಟ ಅಕ್ಕ-ತಂಗಿಯರ ಭವ್ಯ ಮೆರವಣಿಗೆ ಕುಂಭ ಕಳಸ, ವಿವಿಧ ಮನಮೋಹಕ ಕಲಾ ತಂಡಗಳ ಪ್ರದರ್ಶನದೊಂದಿಗೆ ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಬಸವೇಶ್ವರ, ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ರಾಘವೇಂದ್ರರಾಯರ ಬೃಂದಾವನ ರಸ್ತೆ, ಹಳೇ ಸರ್ಕಾರಿ ಆಸ್ಪತ್ರೆ ರಸ್ತೆ, ಭಗತ್ಸಿಂಗ್ ವೃತ್ತ, ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಮಾರ್ಗವಾಗಿ ಸಂಚರಿಸಿ ಗ್ರಾಮದೇವತೆ ಕಟ್ಟೆಗೆ ಆಗಮಿಸಿತು. ಅಲ್ಲಿ ಈರ್ವರೂ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದೇವತೆ ಕಟ್ಟೆಯಲ್ಲಿ ತಯಾರಿಸಿದ್ದ ಅಲಂಕೃತ ಪ್ರತ್ಯೇಕ ಮಂಟಪಗಳಲ್ಲಿ ಶ್ರದ್ಧಾಭಕ್ತಿಯೊಂದಿಗೆ ಪ್ರತಿಷ್ಠಾಪನೆಗೊಳಿಸಲಾಯಿತು. ಬೆಳಿಗ್ಗೆ ೧೧ ಗಂಟೆಗೆ ಪ್ರಾರಂಭಗೊಂಡ ಮೆರವಣಿಗೆ ಅಂದಾಜು ಎರಡು ಕಿಮಿ ಅಂತರದವರೆಗೂ ಕ್ರಮಿಸಿ ಸಂಜೆ ಗ್ರಾಮದೇವತೆ ಕಟ್ಟೆಗೆ ಆಗಮಿಸಿದ್ದು ಮೆರವಣಿಗೆಯ ಭವ್ಯತೆ ಎತ್ತಿ ತೋರಿಸುವಂತಿತ್ತು. ವಾಲಿಕಾರರು, ದಳವಾಯಿಗಳು ತಮ್ಮ ಸಾಂಪ್ರದಾಯಿಕ ಖಡ್ಗ, ಬಂದೂಕು, ಕೊಡಲಿ ಇನ್ನಿತರ ಆಯುಧಗಳೊಂದಿಗೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಾರ್ಗಮಧ್ಯೆ ಭಕ್ತರು ಹರಕೆ ತೀರಿಸುವ, ಹೂಮಳೆ ಸುರಿಸುವ, ಗುಲಾಲು ಎರಚಿ ಸಂಭ್ರಮಿಸುವ, ಡಿಜೆ ಸೌಂಡ್ನ ಹಾಡುಗಳಿಗೆ ಕುಣಿಯುವ, ವಿವಿಧೆಡೆಯಿಂದ ಕರೆಸಲಾಗಿದ್ದ ಕಲಾತಂಡದವರ ಪ್ರದರ್ಶನ, ಕುಂಭ ಕಳಸ ಹೊತ್ತ ಮಹಿಳೆಯರ ಸಾಲು, ಛದ್ಮವೇಷಧಾರಿ ಚಿಲಿಪಿಲಿ ಗೊಂಬೆಗಳ ಕಲರವ, ಹಲಗೆವಾದನ, ಡೊಳ್ಳುವಾದನ, ನಾಸಿಕ್ಡೋಲು, ವೀರಗಾಸೆ, ನಂದಿಕೋಲು, ಕರಡಿ ಮಜಲು, ಕುದುರೆ ಕುಣಿತ ಮುಂತಾದವು ಮೆರವಣಿಗೆಯನ್ನು ಶ್ರೀಮಂತಗೊಳಿಸಿದ್ದವು. ಜಾತ್ರಾ ಕಮೀಟಿ ಅಧ್ಯಕ್ಷರೂ ಆಗಿರುವ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಮೀಟಿಯ ಪ್ರಮುಖರಾದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುದೇವ ಕಲಬುರ್ಗಿ, ಸುನೀಲ ಇಲ್ಲೂರ, ಶರಣು ಸಜ್ಜನ, ಅಶೋಕ ನಾಡಗೌಡ, ಸತೀಶಕುಮಾರ ಓಸ್ವಾಲ, ಸುಧೀರ ನಾವದಗಿ, ಸುರೇಶಗೌಡ ಪಾಟೀಲ ಇಂಗಳಗೇರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ಉದ್ಯಮಿ ಎ.ಗಣೇಶ, ಚಂದ್ರಶೇಖರ ಕಲಾಲ, ರಾಜುಗೌಡ ರಾಯಗೊಂಡ, ಸಿದ್ದರಾಜ ಹೊಳಿ, ರಾಜಶೇಖರ ಹೊಳಿ, ಸಂಗಮೇಶ ನಾಲತವಾಡ, ಮಹಾಂತೇಶ ಬೂದಿಹಾಳಮಠ, ನಾಗಭೂಷಣ ನಾವದಗಿ, ಸೇರಿ ಅನೇಕರು ಮೆರವಣಿಗೆಯನ್ನು ಅಂದಗೊಳಿಸಲು ಸಾಕಷ್ಟು ಶ್ರಮವಹಿಸಿದ್ದರ ಸಾರ್ಥಕತೆ ಮೆರವಣಿಗೆಯ ಅದ್ದೂರಿತನದಲ್ಲಿ ಕಂಡುಬಂತು. ಊರಗೌಡರಾದ ಬಸನಗೌಡ ರಾಯನಗೌಡ ಪಾಟೀಲ, ಊರಿನ ಹಿರಿಯರಾದ ಎಂ.ಬಿ.ನಾವದಗಿ, ಬಸವರಾಜ ಮೋಟಗಿ, ದಾನಪ್ಪ ನಾಗಠಾಣ, ಬಸನಗೌಡ ಪಾಟೀಲ(ಸಕ್ರಿಗೌಡ್ರು), ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಅಬ್ದುಲ್ಗಫೂರ ಮಕಾನದಾರ ಸೇರಿ ಹಲವರ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದರು.
ಹಬ್ಬದ ವಾತಾವರಣ:
ನಗರದ ಎಲ್ಲ ವೃತ್ತ, ರಸ್ತೆಗಳನ್ನು ಅಲಂಕಾರಿಕ ವಿದ್ಯುತ್ ಬಲ್ಬ್ಗಳಿಂದ ಸಿಂಗರಿಸಿದ್ದು ರಾತ್ರಿಯಲ್ಲೂ ಹಗಲು ಸೃಷ್ಟಿಸಿದಂತಾಗಿದೆ. ವಿಬಿಸಿ ಪ್ರೌಢಶಾಲೆಯ ವಿಶಾಲವಾದ ಮೈದಾನದಲ್ಲಿ ಮನರಂಜನೆಯ ಮಹಾಪೂರವನ್ನೇ ಸೃಷ್ಟಿಸಲಾಗಿದೆ. ಬಸವೇಶ್ವರ ವೃತ್ತದ ಹತ್ತಿರ ತಂಗಡಗಿ ರಸ್ತೆ ಪಕ್ಕದಲ್ಲಿರುವ ನಿರುಪಯುಕ್ತ ಬಿಡಿಓ ಕ್ವಾಟ್ರಸ್ ಆವರಣವನ್ನು ಸ್ವಚ್ಛಗೊಳಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭವ್ಯ ವೇದಿಕೆ ಸಜ್ಜುಗೊಳಿಸಲಾಗಿದೆ. ಹಳೇ ಪೊಲೀಸ್ ಕ್ವಾಟ್ರಸ್ ಆವರಣದಲ್ಲಿ ಭಕ್ತರಿಗೆ ಐದೂ ದಿನಗಳವರೆಗೆ ನಿರಂತರ ಅನ್ನದಾಸೋಹ ಏರ್ಪಡಿಸಲಾಗಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ವಿವಿಧ ಶಕ್ತಿ ಪ್ರದರ್ಶನ, ಮನರಂಜನಾ ಚಟುವಟಿಕೆ, ಹಾಸ್ಯಸಹಿತ ಕಲಾತಂಡಗಳ ಪ್ರದರ್ಶನ, ನಾಟಕ, ಜಾನಪದ ಕಲೆ ಅನಾವರಣ ಸೇರಿ ಅನೇಕ ಚಟುವಟಿಕೆಗಳು ದಿನವೂ ನಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಚಿತ್ತಾರ್ಷಕ ಮದ್ದು ಸುಡುವಿಕೆ ಜಾತ್ರೆಯ ಕಳೆ ಹೆಚ್ಚಿಸಲಿದೆ. ಎಲ್ಲೆಡೆ ಭಗವಾಧ್ವಜ, ನಗರಪ್ರವೇಶ ಸ್ಥಳಗಳಲ್ಲಿ ಸ್ವಾಗತ ಕಮಾನು ರಾರಾಜಿಸುತ್ತಿವೆ. ನಗರದ ಸರ್ವಾಲಂಕಾರಕ್ಕೆ ಕಪ್ಪು ಚುಕ್ಕೆ ಇಟ್ಟಂತೆ ಫ್ಲೆಕ್ಸ್ಗಳ ಹಾವಳಿ ಸಾರ್ವಜನಿಕರ ಟೀಕೆಗೊಳಗಾಗಿದೆ.
ಜಾತ್ರೆಯಲ್ಲಿ ಇಂದು:
ಬೆಳಿಗ್ಗೆ ೯ ರಿಂದ ಸಂಜೆ ೫ರವರೆಗೆ ಸೈನಿಕ ಮೈದಾನದಲ್ಲಿ ವಾದಿ ಪ್ರತಿವಾದಿ ಗೀಗೀಪದ, ೧೦ಕ್ಕೆ ನಾಲತವಾಡ ರಸ್ತೆಯಲ್ಲಿ ಪುಟ್ಟಿಗಾಡಿ ಸ್ಪರ್ಧೆ, ಮದ್ಯಾಹ್ನ ೨ಕ್ಕೆ ರಸ್ತೆ ಮೇಲೆ ಕೂಡುಗಾಡಿಗಳ ಓಟದ ಸ್ಪರ್ಧೆ, ರಾತ್ರಿ ೮ಕ್ಕೆ ಬಿಡಿಓ ಕ್ವಾಟ್ರಸ್ ಮೈದಾನದಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮಗಳು ನಡೆಯುತ್ತವೆ. ಹಳೇ ಪೊಲೀಸ್ ಕ್ವಾಟ್ರಸ್ ಆವರಣದಲ್ಲಿ ನಿರಂತರ ಅನ್ನದಾಸೋಹ ಇರಲಿದೆ.