ಬಳ್ಳಾರಿ,ಜೂ.೩೦: ನಾಗರಿಕ ಹೋರಾಟ ಸಮಿತಿಯಿಂದ ಮೂಲ ಸೌಕರ್ಯಗಾಗಿ ಆಗ್ರಹಿಸಿ ಸಹಿ ಸಂಗ್ರಹಣಾ ಅಭಿಯಾನವನ್ನು ರಾಯಲ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜುಲೈ ೨೭ರಂದು ನಡೆಯುವ ಬೃಹತ್ ಜನತೆಯ ಸಮಾವೇಶದ ಪೂರಕವಾಗಿ ಈ ಸಹಿ ಸಂಗ್ರಹಣಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಇಂದು ಸಾವಿರಾರು ಸಹಿಗಳನ್ನು ಸಂಗ್ರಹಿಸಲಾಯಿತು.
ಸಹಿ ಸಂಗ್ರಹ ಅಭಿಯಾನವನ್ನು ಉದ್ಘಾಟಿಸಿದ ಸಲಹೆಗಾರರಾದ ಮುರ್ತುಜಾ ಸಾಬ್ ಅವರು ಮಾತನಾಡುತ್ತಾ “ಕಳೆದ ೨-೩ ತಿಂಗಳುಗಳಿAದ ಸಮರ್ಪಕ ನಾಗರಿಕ ಸೌಲಭ್ಯಗಳಿಗಾಗಿ ಆಗ್ರಹಿಸಿ ಸಂಬAಧಪಟ್ಟವರಿಗೆ ಅನೇಕ ಮನವಿ ಪತ್ರಗಳನ್ನು ಸಲ್ಲಿಸಿದೆ, ಪ್ರತಿಭಟನೆಗಳನ್ನು ಸಂಘಟಿಸಿದೆ. ಮಹಾನಗರಪಾಲಿಕೆಯಿಂದ, ಜಿಲ್ಲಾಡಳಿತದಿಂದ ಸರಿಯಾದ ಸ್ಪಂದನೆ ಇಲ್ಲ. ನಗರದ ಪರಿಸ್ಥಿತಿಯನ್ನು ಗಮನಿಸಿದರೆ, ಮಹಾನಗರಪಾಲಿಕೆ, ಜಿಲ್ಲಾಡಳಿತ ಹಾಗೂ ಸರ್ಕಾರ ಮೂಲ ಸೌಕರ್ಯದ ಸಮಸ್ಯೆಗಳ ಪರಿಹಾರಕ್ಕೆ ಒಂದು ಹೆಜ್ಜೆಯೂ ಸಹ ಮುಂದಕ್ಕೆ ಹೋಗಿಲ್ಲ ಎನ್ನುವುದು ಮನದಟ್ಟಾಗುತ್ತದೆ. ಬದಲಿಗೆ ನಗರದ ಪರಿಸ್ಥಿತಿ ದಿನದಿನಕ್ಕೆ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಬಲಿಷ್ಠ ಜನತೆ ಹೋರಾಟ ರೂಪಿಸಬೇಕು. ಸಹಿ ಸಂಗ್ರಹಣಾ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿ” ಮನವಿ ಮಾಡಿದರು.
ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಸಂಚಾಲಕರಾದ ಸೋಮಶೇಖರ ಗೌಡ ಮಾತನಾಡುತ್ತಾ, “ಕುಡಿಯುವ ನೀರಲ್ಲಿ ಚರಂಡಿ ನೀರು ಮಿಶ್ರಣವಾಗದಂತೆ ತಡೆಯುವುದು, ರಿಂಗ್ ರಸ್ತೆ ನಿರ್ಮಿಸುವುದು, ಮೋತಿ ಬ್ರಿಡ್ಜ್ ಅಗಲೀಕರಣ, ಮಹಾನಗರಪಾಲಿಕೆಯ ಸಿಬ್ಬಂದಿ ಹಾಗೂ ಪೌರಕಾಮಿಕರ ಸಂಖ್ಯೆಯನ್ನು ಹೆಚ್ಚಿಸುವುದು, ಸುಧಾಕ್ರಾಸ್ ಮೇಲ್ಸೇತುವೆ ಪೂರ್ಣಗೊಳಿಸುವುದು ತುರ್ತಾಗಿ ಆಗಬೇಕಾದ ಇಂತಹ ಕೆಲಸಗಳ ಬಗ್ಗೆ ಸರಿಯಾದ ಕ್ರಮಗಳಿಲ್ಲ. ಬದಲಿಗೆ ಅವೈಜ್ಞಾನಿಕ, ಅನಾವಶ್ಯಕ ಕಾಮಗಾರಿಗಳಲ್ಲಿ ಜನರ ತೆರಿಗೆ ಹಣ ಪೋಲಾಗುತ್ತಿದೆ. ಜನರ ಆದ್ಯತೆ ಕೈಬಿಟ್ಟು, ಇರುವ ರಸ್ತೆ ಹಾಗೂ ಫುಟ್ಪಾತ್ನ್ನು ಅಗೆದು ಇನ್ನೊಂದು ರಸ್ತೆ ಹಾಗೂ ಫುಟ್ಪಾತ್ ನಿರ್ಮಿಸುವುದು, ಇರುವ ಸರ್ಕಲ್ಗಳನ್ನು ಹೊಡೆದು ಹಾಕಿ ಅವೈಜ್ಞಾನಿಕ ಸರ್ಕಲ್ಗಳನ್ನು ನಿರ್ಮಿಸುವುದು, ಇವೇ ಬಳ್ಳಾರಿಯಲ್ಲಿ ‘ಅಭಿವೃದ್ಧಿ’ ಕೆಲಸವಾಗಿಬಿಟ್ಟಿವೆ. ಈ ಹಿನ್ನಲೆಯಲ್ಲಿ ನಾಗರಿಕರ ಹೋರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ ೧ ಲಕ್ಷ ಸಹಿ ಸಂಗ್ರಹ ಅಭಿಯಾನ ಹಾಗೂ ಜುಲೈ ೨೭, ೨೦೨೫ರಂದು ನಗರದ ಗಾಂಧಿಭವನದಲ್ಲಿ ಬೃಹತ್ ಸಮಾವೇಶ ಸಂಘಟಿಸಲು ನಿರ್ಧರಿಸಲಾಗಿದೆ. ಈ ಸಮಾವೇಶದಲ್ಲಿ ಇತರೆ ಜನಪರ ಸಂಘ ಸಂಸ್ಥೆಗಳನ್ನು ತೊಡಗಿಸಿಕೊಂಡು, ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ರೂಪರೇಷೆಗಳನ್ನು ರಚಿಸಲಾಗುವುದು” ಎಂದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಡಾ.ಪ್ರಮೋದ್, ಶಾಂತಾ, ನಾಗರತ್ನ, ಗೋವಿಂದ್, ಈಶ್ವರಿ, ರಾಜಾ, ಪಂಪಾಪತಿ ಮುಂತಾದವರು ಉಪಸ್ಥಿತರಿದ್ದರು.