ಧಾರವಾಡ ಅ. 12- ಮನುಷ್ಯ ಸಾರ್ಥಕವಾದ ಬದುಕನ್ನು ಬದುಕ ಬೇಕಾದರೆ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಕೋಡಿಮಠದ ಶ್ರೀಗಳು ಇಂದಿಲ್ಲಿ ಕರೆ ನೀಡಿದರು.
ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಾಂತಿ ನಿಕೇತನ ನಗರದ ಕರಿಯಮ್ಮ ದೇವಸ್ಥಾನಕ್ಕೆ ಆಗಮಿಸಿದ್ದ ಅವರು ಭಕ್ತರಿಗೆ ಆಶೀರ್ವದಿಸಿ ಮಾತನಾಡಿದರು.
ಮನುಷ್ಯ ತನ್ನ ಜೀವನದಲ್ಲಿ ಗುರು ಹಿರಿಯರ ಬಗ್ಗೆ ಗೌರವ ಹೊಂದಿರಬೇಕು. ನಿಷ್ಠೆ, ಪ್ರಾಮಾಣಿಕತೆ, ಮತ್ತು ಸತ್ಯಕ್ಕೆ ಬದ್ದನಾಗಿರ ಬೇಕು. ಅಂದಾಗ ಸಾರ್ಥಕ ಬದುಕನ್ನು ಬದುಕಲು ಸಾಧ್ಯ. ಮನುಷ್ಯ ಮರಣ ಹೊಂದಿದಾಗ ತಾನು ಮಾಡಿದ ಜನೋಪಕಾರಿ ಕೆಲಸಗಳನ್ನು ಸ್ಮರಿಸಿ ಜನ ಅಳುವಂತೆ ಬದಕಬೇಕೆಂದು ಹೇಳಿದರು.
ದೇವಸ್ಥಾನದ ಚೇರ್ಮನ್ನರು ಮತ್ತು ಶಾಸಕರಾದ ಶ್ರೀ ಎನ್.ಎಚ್. ಕೋನರೆಡ್ಡಿ ದಂಪತಿಗಳು ಶ್ರೀಗಳ ಪಾದಪೂಜೆ ನೆರವೇರಿಸಿದರು. ದೇವಸ್ಥಾನದ ಟ್ರಸ್ಟ್ ವತಿಯಿಂದ ಶ್ರೀಗಳನ್ನು ಗೌರವಿಸಲಾಯಿತು.