ಕಿರು ಪ್ರವಾಸ ಕಥನ: ಸಕ್ರೆಬೈಲು – ಆನೆಗಳ ಬಿಡಾರ

Ravi Talawar
ಕಿರು ಪ್ರವಾಸ ಕಥನ: ಸಕ್ರೆಬೈಲು – ಆನೆಗಳ ಬಿಡಾರ
WhatsApp Group Join Now
Telegram Group Join Now

ಸಕ್ರೆಬೈಲಿನಲ್ಲಿ ಗಜಗೆಳೆಯರ ಬದುಕನ್ನು ಹತ್ತಿರದಿಂದ ನೋಡುವ ಅವಕಾಶ

ರಾಜ್ಯದ ಎರಡನೇ ಅತಿ ದೊಡ್ಡ ಆನೆ ಬಿಡಾರವಾದ ಸಕ್ರೆಬೈಲಿಗೆ ಭೇಟಿ ನೀಡಿದ ಪ್ರಯುಕ್ತ 

“ಅಲೆದಾಡುವವರೆಲ್ಲರೂ ದಾರಿ ತಪ್ಪುವುದಿಲ್ಲ” ಎಂದು ಜೆ ಆರ್ ಟೋಲ್ಕಿನ್ ಹೇಳಿದಂತೆ ಪ್ರವಾಸಕ್ಕೆಂದು ಅಲೆದಾಡುವ ಜನರು ತಾವು ಸಂಚರಿಸಿ ಗಳಿಸಿದ ಜ್ಞಾನವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಹಾಗೆಯೇ ಸ್ನೇಹಿತರೊಂದಿಗೆ ಪ್ರಯಾಣಿಸಿ, ಇತರರೊಂದಿಗೆ ಆ ಮಾಹಿತಿ ಹಂಚಿಕೊಂಡಾಗ ಜಗತ್ತು ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು  ನೆನಪಿಸುತ್ತದೆ.


ದೇಶ ಸುತ್ತಿ ನೋಡು, ಕೋಶ ಓದಿ ನೋಡು. ಇದು ಹಳೆಯ ಗಾದೆ ಮಾತು. ಜೀವನದಲ್ಲಿ ಅನುಭವ ಮುಖ್ಯ. ಒಂದೊಂದು ಅನುಭವ ಒಂದೊಂದು ಪಾಠವನ್ನು ಕಲಿಸುತ್ತದೆ.ದೇಶವನ್ನು ಸುತ್ತಿ ನೋಡಿದಷ್ಟು ಜಾಸ್ತಿ ಅನುಭವವಾಗುತ್ತದೆ. ಸಂಸ್ಕೃತಿ, ಭಾಷೆ, ಅಭಿರುಚಿ ಬಗ್ಗೆ ಮತ್ತಷ್ಟು ತಿಳಿಯುತ್ತದೆ.

ಹಾಗಾಗಿ ನನಗೆ ತಿಳಿದಾಗಿನಿಂದ ಅಂದರೆ ಪಿ. ಯು ಸಿ ಕಲಿಯುವ ವರ್ಷಗಳಿಂದ ನನಗೊಂದು ಮಹಾದಾಸೆ ಇತ್ತು.ಅದೇನೆಂದರೆ ಶಿವಮೊಗ್ಗ ಸಮೀಪದ ಗಾಜನೂರು ಬಳಿಯ ಸಕ್ರೆಬೈಲಿನ ಆನೆ ಬಿಡಾರಕ್ಕೆ ಭೇಟಿ ನೀಡಿ ಬರಬೇಕು ಅಂತ. ಎಷ್ಟೋ ಸಾರಿ ಆ ಪ್ರದೇಶದಕ್ಕೆ ಹೊಗೋದಕ್ಕೆ ತಯಾರಿ ಮಾಡಿಕೊಂಡರೂ, ಕೊನೆಯಲ್ಲಿ ವೈಯಕ್ತಿಕ ಕಾರಣಗಳಿಂದ ಪ್ರವಾಸ ರದ್ದಾಗುತ್ತಿತ್ತು.ಕೊನೆಗೆ ನಾನು ನನ್ನ  ಸ್ನೇಹಿತ ಶಿಕ್ಷಕವರ್ಗ, ಏನಾದರೂ ಆಗಲಿ ಈ ಮೇ 18,19 & 20 ರಂದು ನಮಗೆ ಶಿವಮೊಗ್ಗ ಸಮೀಪದ ಪ್ರವಾಸಿ ತಾಣಗಳಿಗೆ ಹೋಗಲೇಬೇಕು ಎಂದುಕೊಂಡು, ಎರಡು ದಿನದ ಮಟ್ಟಿಗೆ ಶಿವಮೊಗ್ಗದಲ್ಲಿ ನಡೆಯಲಿರುವ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ, ಮೊದಲನೇ ದಿನ ಉದ್ಘಾಟನೆ ಕಾರ್ಯಕ್ರಮ ವೀಕ್ಷಿಸಿ, ಮರುದಿನ  ನಾವು ಭಾಗವಹಿಸಿದ ಆಟಗಳನ್ನಾಡಿ,ಸುತ್ತಮುತ್ತಲಿನ  ಪ್ರವಾಸಿ ತಾಣಗಳ ನಕಾಶೆ ತಯಾರು ಮಾಡಿ, ಅದರಲ್ಲಿ ಸಕ್ರೆಬೈಲಿನ ಆನೆ ಬಿಡಾರಕ್ಕೆ ಮುಕ್ಕಾಲು ದಿನ ಮೀಸಲಿಟ್ಟು ಪ್ರವಾಸಕ್ಕೆ ಹೊರಟೆವು.


ನಾವು ಹಿಂದಿನ ದಿನ ರಾತ್ರಿ ಶಿವಮೊಗ್ಗದ ಡಾ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಸತಿ ಇದ್ದು,ಎರಡು ದಿನ ನಮ್ಮ ಆಟ ಮುಗಿದ ನಂತರ ಮರುದಿನವೇ ಬೆಳಿಗ್ಗೆ ಶಿವಮೊಗ್ಗದಿಂದ 14 ಕೀ ಮೀ ಸಮೀಪದಲ್ಲಿರುವ ಸಕ್ರೆಬೈಲು ಆನೆ ಬಿಡಾರಕ್ಕೆ ಹೊರಟೆವು.

#ಸಕ್ರೆಬೈಲು ರಾಜ್ಯದ ಎರಡನೇ ಡೊಡ್ಡ ಆನೆ ಬಿಡಾರ:
ಈ ಬಿಡಾರ ಶಿವಮೊಗ್ಗದಿಂದ ಸುಮಾರು 14 ಕಿಮೀ ದೂರದ ಗಾಜನೂರ ಬಳಿಯ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯ ಮಾರ್ಗವಾಗಿ ಬಸ್ ಮೂಲಕ ಪ್ರಯಾಣ ಪ್ರಾರಂಭಿಸಲಾಯಿತು.ಇಲ್ಲಿ ಬಂದು ನೋಡಿದ ತಕ್ಷಣ ಬಹಳಷ್ಟು ಆನೆಗಳನ್ನು ಇರುವುದನ್ನು ಕಂಡು ಖುಷಿಯಾಯಿತು. ಇದು ಆನೆಗಳ ಆಶ್ರಯ ತಾಣ. ಗಾಜನೂರು ಬಳಿ ಇರುವ ಇದು ರಾಜ್ಯದ ಎರಡನೇ ಅತೀ ದೊಡ್ಡ ಆನೆ ಶಿಬಿರ ಕೂಡಾ ಹೌದು. ಇಲ್ಲಿ ಸಾಕಷ್ಟು ಆನೆಗಳು ಆಶ್ರಯ ಪಡೆದಿವೆ. ತುಂಗಾ ನದಿಯ ಗಾಜನೂರ ಡ್ಯಾಮ್ ಹಿನ್ನೀರಿನಲ್ಲಿದೆ.ಸಂಕಷ್ಟದಲ್ಲಿರುವ, ಪೌಷ್ಠಿಕಾಂಶಗಳ ಕೊರತೆಯಿಂದ ಬಳಲುತ್ತಿರುವ ಆನೆಗಳಿಗೆ ಇದು ಬದುಕಿನ ನೆಲೆಯಾಗಿದೆ. ಅರಣ್ಯ ಇಲಾಖೆ ಈ ಶಿಬಿರವನ್ನು ನಿರ್ವಹಿಸುತ್ತಿದೆ. ಇಲ್ಲಿ ತರಬೇತಿ ಪಡೆದ ಮಾವುತರು ಇಲ್ಲಿನ ಆನೆಗಳನ್ನು ನೋಡಿಕೊಳ್ಳುತ್ತಾರೆ. ಆನೆಗಳ ಸುಂದರ ಬದುಕನ್ನು ಹತ್ತಿರದಿಂದ ನೋಡಲು ಇಲ್ಲಿ ಒಳ್ಳೆಯ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಬಹುದು.

#ಪ್ರವಾಸಿಗರ ಆಕರ್ಷಣೀಯ ತಾಣ:
ಸಕ್ರೆಬೈಲು ಬರೀ ಆನೆಗಳಿಗೆ ಮಾತ್ರ ನೆಚ್ಚಿನ ತಾಣವಲ್ಲ. ಪ್ರವಾಸಿಗರಿಗೂ ಬಹಳ ಇಷ್ಟವಾಗುವಂತಹ ಸ್ಥಳವಿದು.ಸದ್ಯ ಈ ಶಿಬಿರದಲ್ಲಿ ಅನೇಕ ರೀತಿಯ ಕುಮ್ಕಿ ಆನೆಗಳಿವೆ. ಆನೆಗಳ ಬಗ್ಗೆ ಅಧ್ಯಯನ ಮಾಡಬೇಕೆಂಬ ಉತ್ಸಾಹಿಗಳಿಗೂ, ಕುತೂಹಲಿಗಳಿಗೂ ಇದು ಇಷ್ಟವಾಗುವಂತಹ ತಾಣ ಕೂಡಾ ಹೌದು. ಇಲ್ಲಿ ಆನೆಗಳ ನಡವಳಿಕೆ, ಅವುಗಳ ಬದುಕು, ವರ್ತನೆ, ಬುದ್ಧಿವಂತಿಕೆ ಎಲ್ಲವನ್ನೂ ಹತ್ತಿರದಿಂದ ನೋಡಬಹುದು.ಈ ದೃಶ್ಯವನ್ನು ನೋಡುವುದು ಕೂಡಾ ಒಂದು ಖುಷಿಯ ಅನುಭವ ಎಂದು ಹೇಳಿದರೆ ತಪ್ಪಾಗಲಾರದು.ಬೆಳಗ್ಗಿನ ಸಮಯದಲ್ಲಿ ಆನೆಗಳಿಗೆ ಆಹಾರ ಕೊಡುವ ಕ್ಷಣವನ್ನೂ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಶಿಬಿರದಲ್ಲಿಯೇ ಆನೆಗಳಿಗೆ ಆಹಾರ ತಯಾರಿಸಲಾಗುತ್ತದೆ. ಮಾವುತರು ಮತ್ತು ಅವರ ಸಹಾಯಕರು ಪ್ರತಿದಿನ ಆನೆಗಳಿಗೆ ಆಹಾರ ನೀಡುತ್ತಾರೆ. ಈ ಕ್ಷಣವನ್ನೂ ನೋಡುವ ಅವಕಾಶ ಪ್ರವಾಸಿಗರಿಗಿದೆ.

ಈ ಶಿಬಿರದಲ್ಲಿ ಆನೆಗಳ ತರಬೇತಿ ಹಾಗೂ ಪ್ರವಾಸಿಗಳಿಗೆ ಆನೆ ಸವಾರಿ ಮೊದಲಾದ ಚಟುವಟಿಕೆಗಳು ನಡೆಯುತ್ತವೆ. ಪ್ರತಿ ದಿನ ಬೆಳಿಗ್ಗೆ 8:30 ರಿಂದ 1:00ರವರೆಗೆ ಪ್ರವಾಸಿಗಳಿಗೆ ಈ ಶಿಬಿರ ತೆರೆದಿರುತ್ತದೆ. ಈ ಸಮಯದ ನಂತರ ಆನೆಗಳನ್ನು ಕಾಡಿನಲ್ಲಿ ಬಿಡಲಾಗುತ್ತದೆ. ರಾತ್ರಿಯಿಡಿ ಕಾಡಿನಲ್ಲಿಯೇ ಇರುವ ಆನೆಗಳನ್ನು ಮತ್ತೆ ಮುಂಜಾನೆ ಶಿಬಿರಕ್ಕೆ ಕರೆತರಲಾಗುತ್ತದೆ ಎಂದು ಅವುಗಳ ತರಬೇತುದಾರರು ಹೇಳುತ್ತಾರೆ.ನುರಿತ ಮಾವುತರು, ಕವಾಡಿಗಳ ಆರೈಕೆಯಲ್ಲಿ ಇಲ್ಲಿ ದೈತ್ಯದೇಹಿ ಆನೆಗಳು ಮಾನವರ ಒಡನಾಟಕ್ಕೆ ಒಗ್ಗಿ ಕೊಂಡು ಶಿಸ್ತುಬದ್ಧ ಜೀವನ ನಡೆಸುತ್ತಿರುವುದನ್ನು ಕಾಣಬಹುದಾಗಿದೆ.
ಇಲ್ಲಿನ ಪರಿಸರದ ಸ್ವಚ್ಛಂದ ಜೀವನಕ್ಕೆ ಹೆಸರಾದ ಆನೆಗಳು, ಸಕ್ರೆಬೈಲಿನಲ್ಲಿ ಸ್ನೇಹಜೀವಿಗಳಾಗಿ ವಿಹರಿಸುವುದನ್ನು ನೋಡಲೆಂದೇ ನಿತ್ಯವೂ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆನೆಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ.ಅದರಂತೆ ನಾನು ಆತ್ಮೀಯ ಸ್ನೇಹಿತ ಶಿಕ್ಷಕರಾದ ಸತೀಶ ಬೊಮಲೆ,ಮಂಜುನಾಥ ಚಾಕಲಬ್ಬಿ, ನಿಂಗಪ್ಪ ಬಂಕಾಪೂರ  ಮತ್ತು ಫಕ್ಕೀರೇಶ ಡಂಬಳ ಎಲ್ಲರೂ ಸೇರಿ ಪೋಟೋ ತೆಗೆಸಿಕೊಂಡೆವು. ಇನ್ನೆರಡು ಕಾರುಗಳಲ್ಲಿ ನಮ್ಮ ತಾಲೂಕಿನ ನೌಕರರು ಸಹ ನಮ್ಮ ಮತ್ತು ಆನೆಗಳ ಮುಂದೆ ನಿಂತು ಭಾವಚಿತ್ರ ತೆಗೆಸಿಕೊಂಡಿದ್ದು  ಮರೆಯಲಾರದ ಒಂದು ಅವಿಸ್ಮರಣೀಯ ಅನುಭವ ಹೇಳಬಹುದು.

#ನಿಸರ್ಗದೊಂದಿಗೆ ವಿರಮಿಸುವ ಅವಕಾಶ:
ಇನ್ನು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಶಿಬಿರದಲ್ಲಿ ಸಾಕಾನೆಗಳ ದಿನಚರಿ ನೋಡಲು ಅವಕಾಶವಿದೆ. ಸಾಕಾನೆಗಳನ್ನು ಕಟ್ಟಿ ಹಾಕುವ ಸ್ಥಳದಿಂದ ತುಂಗಾ ನದಿಗೆ(ಗಾಜನೂರಿ ಡ್ಯಾಮ್ ಹಿನ್ನೀರು) ಕರೆದೊಯ್ದು ಅಲ್ಲಿ ಸ್ನಾನ ಮಾಡಿಸಿದ ನಂತರ, ಅವುಗಳಿಗೆ ಆಹಾರವನ್ನು ಹೇಗೇಗೆ ತಯಾರಿಸಿ ಕೊಡಲಾಗುತ್ತದೆ? ಅವು ಮಾವುತ ಮತ್ತು ಕಾವಾಡಿಗಳ ಆಜ್ಞೆಯನ್ನು ಹೇಗೆ ಪಾಲಿಸುತ್ತವೆ ಎಂಬಿತ್ಯಾದಿಗಳನ್ನು ನೋಡಲು ಮತ್ತು ಅವುಗಳೊಂದಿಗೆ ಒಂದಷ್ಟು ಸಮಯವನ್ನು ಕಳೆಯಲು ಅವಕಾಶವೂ ದೊರೆಯಲಿದೆ.
ಹೀಗೆ ಅಲ್ಲಿನ ಎಲ್ಲಾ ಪ್ರದೇಶಗಳನ್ನು ನೋಡಿಕೊಂಡು ಸಾಯಂಕಾಲ ನಾವು ಶಿವಮೊಗ್ಗ ಮೂಲಕ ಹರಿಹರ ತಲುಪಿ, ರೈಲ್ವೆ ಮೂಲಕ ಯಲವಿಗೆ ಊರಿಗೆ ಬಂದಿಳಿದು, ಲಕ್ಷೇಶ್ವರದ ಕಡೆಗೆ ಪ್ರಯಾಣ ಬೆಳೆಸಿದೇವು.

#ಯಾವ ಸಮಯದಲ್ಲಿ  ಈ ಬಿಡಾರಕ್ಕೆ ಹೋಗಬಹುದು?
ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗದ ಆಹ್ಲಾದಕರವಾದ ತಾಣದಲ್ಲಿ ನೆಲೆಸಿರುವ ಈ ಸಕ್ರೆಬೈಲು ಆನೆ ಬಿಡಾರವು ಜನಪ್ರಿಯವಾದ ಪ್ರವಾಸಿ ಆಕರ್ಷಣೆಯಾಗಿದೆ. ಮಳೆಗಾಲದಲ್ಲಿ ಆದಷ್ಟು ಇಲ್ಲಿಗೆ ಭೇಟಿ ನೀಡುವುದನ್ನು ಕಡಿತಗೊಳಿಸಿರಿ. ಬದಲಾಗಿ ಸೆಪ್ಟೆಂಬರ್‌ನಿಂದ ಮೇ ತಿಂಗಳ ನಡುವೆ ಭೇಟಿ ನೀಡಲು ಪ್ಲಾನ್‌ ಮಾಡಿ ಫ್ರೆಂಡ್ಸ.

#ಆನೆ ಶಿಬಿರಕ್ಕೆ ಪ್ರವೇಶ ಸಮಯ:
ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 01:00 ಗಂಟೆಯವರೆಗೆ ಆನೆಗಳ ಚಟುವಟಿಕೆಗಳನ್ನು ಆನಂದಿಸಲು ಹಾಗೂ ಬಿಡಾರದ ಒಳಗಡೆ ಖಾಸಗಿ ಬೋಟ್ ವ್ಯವಸ್ಥೆಗೆ ಪ್ರತ್ಯೇಕವಾದ ಪ್ರವೇಶ ಶುಲ್ಕವನ್ನು ನೀಡಿ ಆನಂದಿಸಬಹುದು.

ಒಟ್ಟಾರೆಯಾಗಿ ಪ್ರವಾಸವು ಉತ್ಸಾಹ, ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಮಾರ್ಗ. ಆಯಾ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಇಂತಹ ಯಾತ್ರೆಗಳು ನಮ್ಮಲ್ಲಿ ಜ್ಞಾನದ ದೀವಿಗೆಯನ್ನು ಉದ್ದೀಪನಗೊಳಿಸುವ ಶಕ್ತಿಯನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಆರೋಗ್ಯದಲ್ಲೂ ಚೇತರಿಕೆ ತಂದುಕೊಟ್ಟು, ಒತ್ತಡ ಕಡಿಮೆ ಮಾಡುವ ಸುಂದರ ಚಟುವಟಿಕೆಯೂ ಹೌದೆನ್ನಬಹುದು.ಹಾಗಾದರೆ ಗೆಳೆಯರೆ ನೀವು ಒಂದು ಸಲ ಪ್ರವಾಸದ ಅನುಭವ ಪಡೆದುಕೊಂಡು ನಿಮ್ಮ ಅನಿಸಿಕೆ ಹಂಚಿಕೊಳ್ಳಲು ಬಯಸುತ್ತೇನೆ.

ಲೇಖನ:
ಬಸವರಾಜ ಎಮ್ ಯರಗುಪ್ಪಿ
ಸಾ ಪೊ ರಾಮಗೇರಿ.ತಾಲ್ಲೂಕು ಲಕ್ಷ್ಮೇಶ್ವರ. ಜಿಲ್ಲಾ ಗದಗ.
ಮಿಂಚಂಚೆ [email protected]
ದೂರವಾಣಿ 9742193758

WhatsApp Group Join Now
Telegram Group Join Now
Share This Article