ಕಾಗವಾಡ: ತಾಲ್ಲೂಕಿನ ಮೋಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ ಎಂದು ಗ್ರಾಮದ ಮುಖಂಡ ಪಿಂಟು ಮುಂಜೆ ಆರೋಪಿಸಿದ್ದಾರೆ.
ಮೋಳೆ-ಮಂಗಸೂಳಿ ಲಾಂಡಗೆ ತೋಟದ ರಸ್ತೆ ಮುರಮೀಕರಣ ಕಾಮಗಾರಿ ಮಾಡದೇ ಅನುದಾನ ಬಿಡುಗಡೆಗೊಳಿಸಿ, ಅವ್ಯವಹಾರ ಮಾಡಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ ಕಳೆದ ಎರಡೂ ವರ್ಷಗಳ ಹಿಂದೆ ಅನುಮೋದನೆ ದೊರೆತಿದ್ದು, ಈ ಅವಧಿಯಲ್ಲಿ ಮುರಮೀಕರಣ ಮಾಡದೇ ಹಣ ಬಿಡುಗಡೆಯಾಗಿದ್ದು, ರಸ್ತೆ ಕೇವಲ ಕಾಗದದಲ್ಲಿ ಮಾತ್ರ ಅಭಿವೃದ್ಧಿಗೊಂಡಿದ್ದು, ಈಗ ನಾನು ಅದೇ ರಸ್ತೆ ಮೇಲೆ ನಿಂತು ರಸ್ತೆಯ ದುರ್ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು. ಈ ಅವ್ಯವಹಾರದಲ್ಲಿ ತಾಲ್ಲೂಕಾ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರ ತನಿಖಾಧಿಕಾರಿಗಳ ಮುಖಾಂತರ ಸಣ್ಣ ಪುಟ್ಟ ತಪ್ಪುಗಳನ್ನು ಹಿಡಿದು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿ, ಶೋಕಿ ನೀಡುತ್ತಿರುವದು ಒಂದೆಡೆಯಾದರೆ, ಲಕ್ಷಾಂತರ ರೂಪಾಯಿಗಳ ದೊಡ್ಡ ದೊಡ್ಡ ಅವ್ಯವಹಾರಗಳಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದರೆ ಬೇಲಿಯೇ ಎದ್ದು ಹೊಲ ಮೇಯ್ದದಂತಾಗಿದೆ. ಅಧಿಕಾರಿಗಳು ಸಣ್ಣ ಸಣ್ಣ ಅವ್ಯವಹಾರಗಳಲ್ಲಿ ತೋರುವ ಕರ್ತವ್ಯ ನಿಷ್ಠೆಯನ್ನು ದೊಡ್ಡ ದೊಡ್ಡ ಗಾತ್ರದ ಅವ್ಯವಹಾರಗಳಲ್ಲಿ ತೋರಿಸಲಿ ಎಂಬುದೇ ಸಾರ್ವಜನಿಕರ ಆಗ್ರಹವಾಗಿದೆ.