ವಿಜಯನಗರ(ಹೊಸಪೇಟೆ), : ಮಕ್ಕಳ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಗಳು ಸಹಕಾರಿಯಾಗಲಿವೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಪಿ.ಮಂಜುನಾಥ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶ್ರೀ ಸಪ್ತಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಿದ್ದ ನೂತನ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದಿಂದ ಮಕ್ಕಳಲ್ಲಿ ಶಿಸ್ತು, ಕೌಶಲ್ಯ, ಜ್ಞಾನ ವೃದ್ಧಿಯ ಜತೆಗೆ ಸ್ವಾವಲಂಬನೆಯಿಂದ ಬದುಕುವ ಆತ್ಮ ಸ್ಥೈರ್ಯ ಹೆಚ್ಚಾಗಲಿದೆ. ಶಾಲಾ ಹಂತದಲ್ಲಿ ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿಸುತ್ತದೆ. ಘಟಕದಿಂದ ವಿಶೇಷ ತರಬೇತಿಗಳಲ್ಲಿ ಅಪಾಯದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದನ್ನು ಕಲಿಸುತ್ತದೆ. ಮಕ್ಕಳಲ್ಲಿ ಸೇವಾ ಮನೋಭಾವನೆ ಬೆಳೆಸುತ್ತದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಮುಧುಜೈನ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನಮ್ಮ ಶಾಲೆಯಲ್ಲಿ ಆರಂಭಿಸಿರುವುದು ಮಕ್ಕಳಿಗೆ ಸಂತಸ ತಂದಿದೆ. ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಹೆಚ್ಚು ಪರಿಣಾಮಕಾರಿ ಶಿಕ್ಷಣ ನೀಡಲಿದೆ ಎಂದರು.
ಸ್ಕೌಟ್ಸ್ ಮತ್ತು ಗೌಡ್ಸ್ ಜಿಲ್ಲಾ ಸಂಘಟಕರಾದ ಜಿ.ಬಿ.ಸಿ ಪಾಟೀಲ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯಲ್ಲಿ ಅಗ್ನಿ ಅವಘಡಗಳು ಜರುಗಿದ ವೇಳೆ ವ್ಯಕ್ತಿಯ ರಕ್ಷಣೆ ಮತ್ತು ಪ್ರಕೃತಿ ವಿಕೋಪಗಳು, ಮಾನವ ನಿರ್ಮಿತ ಅವಘಡಗಳಲ್ಲಿ ಜೀವ ರಕ್ಷಣೆ ಮಾಡುವುದರ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಲಾಗುತ್ತದೆ ಎಂದರು.
ಈ ವೇಳೆ ಶಾಲಾ ಆಡಳಿತಾಧಿಕಾರಿ ಎಸ್.ಜಿ.ಸತೀಶ್, ಸ್ಕೌಟ್ಸ್ ಮಾಸ್ಟರ್ ಶ್ರೀನಿವಾಸ್ ಜಿ ಜೋಷಿ, ಗೈಡ್ಸ್ ಕ್ಯಾಪ್ಟನ್ ಕನಕಲಕ್ಷ್ಮೀ, ಜಿಲ್ಲಾ ಅಭಿವೃದ್ದಿ ಸಂಘಟಕ ಎನ್.ಐ.ಸಾಂಗ್ಲಿ, ಶಿಕ್ಷಕಿ ಪಿ. ಗಾಯತ್ರಿ ಕುಲಕರ್ಣಿ ಸೇರಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.