ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರು ನಿತ್ಯ, ಸತ್ಯ, ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದವರು. ಪರಂಪರೆ, ಸಂಸ್ಕೃತಿ, ಜಾಗೃತಿ ಹಾಗೂ ಸಮಾಜದಲ್ಲಿರುವ ಬಡ ಜನರ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಏಳ್ಗೆಗೆ ಶ್ರಮಿಸಿದ ಕೀರ್ತಿ ಹಾನಗಲ್ ಕುಮಾರಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಸಾಹಿತಿ ಜಂಬುನಾಥ ಕಂಚ್ಯಾಣಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಏರ್ಪಡಿಸಿದ ಶಿವಾನುಭವ ಗೋಷ್ಠಿಯಲ್ಲಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳ ಅನುಭಾವ ಕುರಿತು ಮಾತನಾಡುತ್ತ ಶರಣರ ವಿಚಾರಗಳೇ ನಮಗೆ ಆದರ್ಶ ನಿತ್ಯ ಸ್ಪೂರ್ತಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಸಂಸ್ಥೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಂದಿನ ಹಿರಿಯರು ಸಂಸ್ಥೆಯ ಏಳ್ಗೆಗಾಗಿ ಸಾಮಾನ್ಯ ಜನರಿಗೆ ಶೈಕ್ಷಣಿಕ ಸೌಲಭ್ಯ ಉಚಿತ ಪ್ರಸಾದ ನಿಲಯಗಳನ್ನು ತೆರೆದು ಸಮಾಜದ ಒಳತಿಗಾಗಿ ಶ್ರಮಿಸಿದವರು. ಪೂಜ್ಯರ ಸ್ಮರಣೆ ವೀರಶೈವ ಲಿಂಗಾಯತ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದ ಮಹಾಪುರುಷರು ಎಂದರು.
ಮಹಾಸಭೆ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಶರಣರ ಚಿಂತನೆಗಳನ್ನು ಕೇಳುವುದರಿಂದ ಆದರ್ಶಗಳ ಪರಿಚಯವಾಗುತ್ತದೆ. ಆಚಾರ, ವಿಚಾರ ಪ್ರಚಾರ ಮಾಡಿ ಒಂದಾಗುವದಕ್ಕೆ ಹೇಳಿದವರು ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಅವರು ಒಬ್ಬ ಅವಧೂತ ಪುರುಷರು ಎಂದರು.
ಮಹಾಸಭೆ ನಿರ್ದೇಶಕ ವಿಠ್ಠಲ ತೇಲಿ ಮಾತನಾಡಿದರು. ಅಪ್ಪಾಸಾಹೇಬ ಕೋರಿ, ಡಾ. ವಿ.ಡಿ.ಐಹೊಳ್ಳಿ, ಮ.ಗು. ಯಾದವಾಡ, ಶಿವಲೀಲಾ ಮಠಪತಿ, ಸಹದೇವ ನಾಡಗೌಡರ, ಬಸವರಾಜ ಒಂಟಗೋಡಿ, ಡಾ. ರಮೇಶ ತೇಲಿ, ಕಾಶಿನಾಥ ಅಣೆಪ್ಪನವರ, ಈರಣ್ಣ ತೊಂಡಿಕಟ್ಟಿ, ಓಂಕಾರ ಅಥರ್ಗಾ, ದೊಡ್ಡಣ್ಣ ಭಜಂತ್ರಿ, ಮಲ್ಲಿಕಾರ್ಜುನ ಅಮರಣ್ಣವರ, ಸುಭಾಸ ಬೇಟಗೇರಿ ಉಪಸ್ಥಿತರಿದ್ದರು.
ಮಹಾಸಭೆಯ ಪ್ರದಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎನ್. ಶಿವಣಗಿ ವಂದಿಸಿದರು. ಶರಣರು, ಶರಣೆಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.