ಧಾರವಾಡ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ನಡೆದ ಧಾರವಾಡ ನಗರ ಘಟಕವು ವಿಜಯದಶಮಿ ನಿಮಿತ್ತ ನಗರದಲ್ಲಿ ಭಾನುವಾರ ಬೃಹತ್ ನಡೆದ ಪಥಸಂಚಲನ ಜನರಲ್ಲಿ ದೇಶದ ಬಗ್ಗೆ ಸಮರ್ಪಣಾ ಭಾವ ಬಿತ್ತುವಲ್ಲಿ ಸಫಲಗೊಂಡಿತು.
ಸವದತ್ತಿ ರಸ್ತೆಯ ಕೆ.ಇ.ಬೋರ್ಡ್ಸ್ ಶಾಲಾ ಮೈದಾನ ದಲ್ಲಿ ಸೇರಿದ 7 ಸಾವಿರಕ್ಕೂ ಹೆಚ್ಚು ಗಣವೇಷಧಾರಿಗಳು ನಗರದಲ್ಲಿ ಮೂರು ಮಾರ್ಗಗಳಲ್ಲಿ ಪಥಸಂಚಲನ ನಡೆಸಿದರು. ವಿವಿಧ ವಾದ್ಯಮೇಳದೊಂದಿಗೆ ಗಣವೇಷಧಾರಿಗಳು ಸಾಗುತ್ತಿದ್ದರೆ ರಸ್ತೆ ಬದಿ ನಿಂತ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದು ಜೈಶ್ರೀರಾಮ, ಭಾರತ ಮಾತಾಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸಿದರು. ಪಥಸಂಚಲನ ಬರುವ ಮಾರ್ಗಗಳಲ್ಲಿ ನಡುರಸ್ತೆಯಲ್ಲಿಯೇ ಮಹಿಳೆಯರು ರಂಗೋಲಿ ಬಿಡಿಸಿದ್ದರು. ಭಾರತಮಾತೆ, ಶ್ರೀರಾಮನ ವೇಷ ಧರಿಸಿದ ಪುಟ್ಟಮಕ್ಕಳು ಪಥಸಂಚಲನಕ್ಕೆ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.
ಆರ್ ಎಸ್ ಎಸ್ ಪಥಸಂಚನದ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ ಕಲ್ಪಿಸಲಾಗಿತ್ತು. ಗಣವೇಷಧಾರಿಗಳು ಸಾಗಿದ ಮಾರ್ಗದುದ್ದಕ್ಕೂ ಸ್ವತಃ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.ಗುಂಜನ್ ಆರ್ಯ, ಡಿಸಿಪಿ ಮಹಾನಿಂಗ ನಂದಗಾವಿ. ಡಿಸಿಪಿ ಆರ್ ರವಿಶ್. ಸೇರಿದಂತೆ ಹಿರಿಯ ಪೋಲೀಸ್ ಅಧಿಕಾರಿಗಳು ನಡೆದುಕೊಂಡೇ ಹೋದರು. ಪಥಸಂಚನದ ಹಿನ್ನೆಲೆಯಲ್ಲಿ ವಿವಿಧೆಡೆ ಮಾರ್ಗಬದಲಾವಣೆ ಮಾಡಲಾಗಿತ್ತು.