ಬಳ್ಳಾರಿ,ಮಾ.28
ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಹಾಗೂ ‘ಪ್ಯಾನ್-ಇಂಡಿಯಾ ರೆಸ್ಕೂö್ಯ ಮತ್ತು ರಿಹ್ಯಾಬಿಲಿಟೇಶನ್’ ಅಭಿಯಾನದ ಅಂಗವಾಗಿ, ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಶುಕ್ರವಾರ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ತಾಲೂಕು ಟಾಸ್ಕ್ ಫೋರ್ಸ್ ಸಮಿತಿಯು ದಿಢೀರ್ ದಾಳಿ ನಡೆಸಿ ನಾಲ್ವರು ಮಕ್ಕಳನ್ನು ರಕ್ಷಿಸಿದೆ.
ಸಂಡೂರು ಗ್ರೇಡ್-2 ತಹಶೀಲ್ದಾರ್ ಸುಧಾರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ತೋರಣಗಲ್ಲು ವ್ಯಾಪ್ತಿಯ ಹೊಸಪೇಟೆ ಮುಖ್ಯ ರಸ್ತೆ, ಬೈಪಾಸ್ ರಸ್ತೆ ಹಾಗೂ ರೈಲ್ವೇ ನಿಲ್ದಾಣದ ಸುತ್ತಮುತ್ತಲಿನ ವಿವಿಧ ಉದ್ದಿಮೆಗಳಾದ ಗ್ಯಾರೇಜ್, ಮೆಕ್ಯಾನಿಕ್ ಶಾಪ್, ಬೇಕರಿ, ಫಾಸ್ಟ್ ಫುಡ್ ಸೆಂಟರ್ ಗಳು ಸೇರಿದಂತೆ ಮನೆ ನಿರ್ಮಾಣ ನಡೆಯುತ್ತಿದ್ದ ಸ್ಥಳಗಳಲ್ಲಿ ದಾಳಿ ನಡೆಸಿ ತಪಾಸಣೆ ಕೈಗೊಳ್ಳಲಾಯಿತು.
ಈ ವೇಳೆ ಕೆಲಸ ಮಾಡುತ್ತಿರುವುದು ಕಂಡುಬAದ 04 ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಸಮಿತಿಯು ವಶಕ್ಕೆ ಪಡೆದು, ಅಧಿಕಾರಿಗಳು ಸ್ಥಳದಲ್ಲಿಯೇ ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಂಡು ನಂತರ ಅವರನ್ನು ಸುರಕ್ಷಿತವಾಗಿ ಪೋಷಕರ ವಶಕ್ಕೆ ಒಪ್ಪಿಸಲಾಯಿತು.
ದಾಳಿಯ ಸಂದರ್ಭದಲ್ಲಿ ಉದ್ದಿಮೆಗಳ ಮಾಲೀಕರಿಗೆ ಬಾಲಕಾರ್ಮಿಕ ಪದ್ಧತಿಯ ದುಷ್ಟರಿಣಾಮ ಹಾಗೂ ಕಾನೂನು ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಲಾಯಿತು. ಬಳಿಕ ಕರಪತ್ರ ಮತ್ತು ಪೋಸ್ಟರ್ಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಸಂಡೂರು ಕಾರ್ಮಿಕ ನಿರೀಕ್ಷಕ ಮಂಜುನಾಥ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ತೋರಣಗಲ್ಲು ಕಂದಾಯ ನಿರೀಕ್ಷಕರು, ಮಕ್ಕಳ ರಕ್ಷಣಾ ಘಟಕದ ಅರುಳ್, ಸಹಾಯವಾಣಿ ಸಿಬ್ಬಂದಿ ಕಾರ್ತಿಕ್, ರೀಚ್ ಸಂಸ್ಥೆಯ ಹನುಮಂತಪ್ಪ, ರೀಡ್ಸ್ ಸಂಸ್ಥೆಯ ಸಂಯೋಜಕ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ತೋರಣಗಲ್ಲು: ನಾಲ್ವರು ಬಾಲಕಾರ್ಮಿಕ ಮಕ್ಕಳ ರಕ್ಷಣೆ


