ಮೂಡಲಗಿ : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುತ್ತಾ, “ಕುರಾನ್ನಲ್ಲಿ ಬರೆದಂತೆ ನಮಾಜ್ ಮಾಡುವ ಸಂದರ್ಭದಲ್ಲಿ ವಿಷ ಸರ್ಪ ಕಂಡರೆ ಅದನ್ನು ಕೊಲ್ಲಬೇಕು. ಬಿಜೆಪಿ ಮತ್ತು ಆರೆಸ್ಸೆಸ್ ಅದೇ ರೀತಿಯ ವಿಷಸರ್ಪಗಳು, ನೀವು ಅದನ್ನು ಕೊಲ್ಲದಿದ್ದರೆ ಬದುಕುವುದಿಲ್ಲ” ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರನ್ನು ಕೊಲ್ಲಬೇಕು ಎಂದು ಪ್ರಚೋದಿಸಿದ್ದಾರೆ. ಇಂತಹ ವ್ಯಕ್ತಿಯು ಮಾಡಿರುವ ಬೇಜವಾಬ್ದಾರಿ ಪ್ರಚೋದನೆಯು ದೇಶದಲ್ಲಿರುವ ಲಕ್ಷಾಂತರ ಬಿಜೆಪಿ ಮತ್ತು ಆರೆಸ್ಸೆಸ್ ಸದಸ್ಯರ ಜೀವಕ್ಕೆ ಅಪಾಯವೊಡ್ಡಿದೆ ಎಂದು ಆರೋಪಿಸಿ ಶನಿವಾರದಂದು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಮಾನ್ಯ ಪಿ.ಎಸ್.ಐ. ಅವರಿಗೆ ಬಿಜೆಪಿ ಅರಭಾವಿ ಮಂಡಲದ ಯುವ ಮೋರ್ಚಾ ವತಿಯಿಂದ ಮನವಿ ಸಲ್ಲಿಸಲಾಯಿತು.
ಪೊಲೀಸ ಇಲಾಖೆ ಯಾವುದೇ ಔಪಚಾರಿಕ ದೂರುಗಳಿಗಾಗಿ ಕಾಯದೆ, ಇಂತಹ ಪ್ರಕರಣಗಳಲ್ಲಿ ತಾವಾಗಿಯೇ (ಸುಮೋಟೋ) ಕ್ರಮ ಕೈಗೊಳ್ಳಬೇಕು. ಈ ಪ್ರಚೋದನೆಯ ಪರಿಣಾಮ ಪ್ರಸಕ್ತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಕ್ಷಾಂತರ ಬಿಜೆಪಿ ಕಾರ್ಯಕರ್ತರನ್ನು ಕೊಲ್ಲಲು ಹೇಳಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಕೂಡಲೇ ಬಂಧಿಸಬೇಕು ಎಂದು ಮನವಿಯಲ್ಲಿ ಕೋರಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಗುರು ಹಿರೇಮಠ, ಮಂಡಲ ಅಧ್ಯಕ್ಷ ಮಹಾದೇವ ಶೇಕ್ಕಿ, ಉಪಾಧ್ಯಕ್ಷ ಪಾಂಡು ಮಹೇಂದ್ರಕರ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲಾಧ್ಯಕ್ಷ ಕಲ್ಮೇಶ್ ಗೋಕಾಕ್, ಮದನ ದಾನನ್ನವವರ, ಕೇದಾರಿ ಭಸ್ಮೆ, ಜಗದೀಶ್ ತೇಲಿ, ಚಂದ್ರಶೇಖರ್ ಪತ್ತಾರ್, ಮಂಡಲ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಕೋಣಿ, ಅಜೀತ ಪಾಟೀಲ್ ಸೇರಿದಂತೆ ಅನೇಕ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


