ಬಳ್ಳಾರಿ: 09. ಯೌವ್ವನದ ಜೀವನೋತ್ಸಾಹ ನಿರಂತರವಾಗಿರಲಿ ಎಂದು ಹ್ಯಾಲಿಸ್ ಬ್ಲೂ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಕೆ.ಎಂ. ಶಿವಮೂರ್ತಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವೇಕ ಪುಸ್ತಕ ಪ್ರಕಾಶನ ಹಮ್ಮಿಕೊಂಡಿದ್ದ ಎಸ್.ಆರ್. ಶರಣ ಕುಮಾರ್ ಅವರ ಪ್ರಥಮ ಹನಿಗವನ ಸಂಕಲನ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಈ ಕೃತಿಯ ಎಲ್ಲಾ ಹನಿಗವನಗಳು ಓದುಗರ ಮನೋಭೂಮಿಕೆಗೆ ತಕ್ಕಂತೆ ಅವರವರ ಯುವಾವಸ್ಥೆಯ ಮನೋಭಾವನೆಗಳನ್ನು ಮತ್ತೆ ಮತ್ತೆ ನೆನಪಿಗೆ ತಂದು ಅಪರಿಮಿತ ಆನಂದವನ್ನು ಉಂಟುಮಾಡುತ್ತವೆ ಎಂದರು.
ವಿಧಾನಪರಿಷತ್ ಸದಸ್ಯ ವೈ.ಯಂ ಸತೀಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಕೃತಿ ಪರಿಚಯ ಮಾಡುತ್ತಾ, ಎಸ್ ಆರ್ ಶರಣ ಕುಮಾರ್ ಅವರು ‘ನಿನ್ನ ನೆನಪಲಿ’ ಹನಿಗವನ ಸಂಕಲನದಮೂಲಕ ಕನ್ನಡ ಕಾವ್ಯ ಲೋಕಕ್ಕೆ ಪ್ರಥಮ ಕೃತಿಯನ್ನು ಲೋಕಾರ್ಪಣೆ ಮಾಡುತ್ತಿರುವುದು ಶ್ಲಾಘನೀಯ. ಈ ಕೃತಿಯ ಕವನಗಳು ಪ್ರತಿಯೊಬ್ಬ ಓದುಗನಿಗೂ ಅವರವರ ಯೌವ್ವನ ಕಾಲಘಟ್ಟದ ಮಧುರ ನೆನಪಗಳನ್ನು ಸವಿಯಲು ಸಹಕಾರಿಯಾಗಿವೆ, ಶರಣ್ ಕುಮಾರ್ ಅವರು ತಮ್ಮ ಕವನಗಳು ಒಂದು ಕಾಲಘಟ್ಟಕ್ಕೆ ಮಾತ್ರ ಸಲ್ಲದೆ ಎಲ್ಲಾ ಕಾಲಕ್ಕೂ ಸಲ್ಲುವಂತೆ ಕಾವ್ಯದಲ್ಲಿ ಚಿರಂತನತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಜಂಟಿ ಕಾರ್ಯದರ್ಶಿ ಮೇಲ್ಸೀಮೆ ಪಂಪನಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ನಿನ್ನ ನೆನಪಲಿ ಕೃತಿಯು ಓದುಗರಲ್ಲಿ ಮಧುರ ಭಾವನೆಗಳನ್ನು ಹುಟ್ಟು ಹಾಕುತ್ತವೆ ಎಂದರು.
ಕವಿ ಎಸ್ .ಆರ್. ಶರಣ ಕುಮಾರ್ ಮಾತನಾಡಿ, ಹನಿಗವನಗಳ ಮೂಲಕ ಕನ್ನಡ ಕಾವ್ಯ ಲೋಕದಲ್ಲಿ ಪ್ರಥಮ ಹೆಜ್ಜೆ ಇಡುತ್ತಿರುವ ತಮಗೆ ಬಾಲ್ಯ ಮತ್ತು ಯೌವನ ಕಾಲದ ಮಧುರ ನೆನಪುಗಳು ಮತ್ತೆ ಮತ್ತೆ ಕಾಡುತ್ತಿದ್ದವು ಅವುಗಳನ್ನು ಕೃತಿ ರೂಪಕ್ಕೆ ತರುವಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ವಿವೇಕ ಪುಸ್ತಕದ ಎಸ್.ಆರ್. ರಾಜೇಶ್ವರಿ, ಎಸ್ ಆರ್ ಸಿದ್ದರಾಮನಗೌಡ, ಎಸ್ ಆರ್ ಚಂದ್ರಶೇಖರ ಪಾಟೀಲ, ಎಸ್ ಆರ್ . , ಮಾಜಿ ಮಹಾಪೌರರಾದ ಇಬ್ರಾಹಿಂ ಬಾಬು, ಬಸವರಾಜ ಗದಗಿನ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಸಾಪ ಗೌರವ ಕಾರ್ಯದರ್ಶಿ ಡಾ. ಕೆ ಶಿವಲಿಂಗಪ್ಪ ಹಂದಿಹಾಳು ಪ್ರಾಸ್ತಾವಿಕ ನುಡಿಗಳನ್ನಾಡಿದರು, ಎರೇಗೌಡ ಪ್ರಾರ್ಥನೆ ಸಲ್ಲಿಸಿದರು. ಡಾ ಭ್ರಮರಾಂಭ ಯಾಟಿ ಕಾರ್ಯಕ್ರಮ ನಿರೂಪಿಸಿದರು.


