ಬಳ್ಳಾರಿ, ಜ.21.: ನಗರದ ಡಾ. ರಾಜ್ಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ನಲ್ಲಿ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಆಚರಣೆಯು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಭಾಗವಹಿಸಿದ್ದ ಗಣ್ಯಮಾನ್ಯರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಶಾಲೆಯ ಪ್ರಾಂಶುಪಾಲರಾದ ಜೆ.ಅನೀಲ್ ಕುಮಾರ್ರವರು ಶಾಲೆಯ ವಾರ್ಷಿಕ ವರದಿಯನ್ನು ಮಂಡಿಸುತ್ತಾ ಶಾಲೆಯ 20 ವರ್ಷಗಳ ಸಾಧನೆಗಳನ್ನು ವಿವರಿಸುತ್ತಾ ಸತತವಾಗಿ 15 ವರ್ಷಗಳಿಂದ 10ನೇ ತರಗತಿಯ ಪರೀಕ್ಷೆಯಲ್ಲಿ 100% ಫಲಿತಾಂಶ ಬರುತ್ತಿರುವುದನ್ನು ತಿಳಿಸಿದರು ಹಾಗೂ ಶಾಲೆಯ ಹಳೆಯ ವಿಧ್ಯಾರ್ಥಿಗಳು ವಿವಿಧ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಸಮಾಜ ಸೇವೆ ಮಾಡುತ್ತಾ ಉಜ್ವಲ ಭವಿಷ್ಯ ರೂಪಿಸಿಕೊಂಡಿರುದನ್ನು ಅಭಿನಂದಿಸಿದರು
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಪ್ರೊ. ಟಿ.ಎನ್.ನಾಗಭೂಷಣರವರು ಹಾಗೂ ಡಾ. ಯೋಗಾನಂದ ರೆಡ್ಡಿರವರಿಗೆ ಸನ್ಮಾನಿಸಲಾಯಿತು. ನೆರೆದಿರುವ ಎಲ್ಲಾ ಪೋಷಕರನ್ನು, ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರೊ.ಟಿ.ಎನ್.ನಾಗಭೂಷಣರವರು ಕೌಶಲ್ಯಾಧಾರಿತ ಶಿಕ್ಷಣ ಮಹತ್ವ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ನಿಜವಾದ ಜ್ಞಾನವನ್ನು ಪಡೆಯಬಹುದು ಎಂದು ತಿಳಿಸಿದರು ಹಾಗೂ ಡಾ. ಯೋಗಾನಂದ ರೆಡ್ಡಿರವರು ಮಾತನಾಡುತ್ತಾ ಬಳ್ಳಾರಿಯಲ್ಲಿ ಬಸವರಾಜೇಶ್ವರಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ, ವಿಧ್ಯಾರ್ಥಿಗಳು ಆರೋಗ್ಯ ಸಹಿತ ಆದರ್ಶ ಜೀವನ ನಡೆಸಬೇಕೆಂದು ತಿಳಿಸಿದರು. ಟಿ.ಇ.ಹೆಚ್.ಆರ್.ಡಿ.ಟ್ರಸ್ಟಿಗಳಾದ ಡಾ. ಯಶವಂತ್ ಭೂಪಾಲ್ರವರು ವಿದ್ಯಯ ಮಹತ್ವವನ್ನು ಹಾಗೂ ವಿಧ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯ ಪ್ರತಿಭೆಯನ್ನು ಅರಿತು ಆದರ್ಶ ಜೀವನ ನಡೆಸಬೇಕೆಂದು ತಿಳಿಸಿದರು.
ನಂತರ ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ ಹಾಗೂ ಬಿಪಿಎಸ್ಸಿ ಶಾಲೆಯ ಅಧ್ಯಕ್ಷರಾದ ಡಾ. ಎಸ್.ಜೆ.ವಿ.ಮಹಿಪಾಲ್ರವರು ಮಾತನಾಡುತ್ತಾ ಬಳ್ಳಾರಿಯಲ್ಲಿ ಆಂಗ್ಲ ಮಾಧ್ಯಮದ ಐಸಿಎಸ್ಸಿ ಪಠ್ಯಕ್ರಮ ಓದಲು ಮೊದಲು ವಿಧ್ಯಾರ್ಥಿಗಳು ಪರಸ್ಥಳಕ್ಕೆ ಹೋಗಿ ಪಡುತ್ತಿರುವ ಕಷ್ಟವನ್ನು ಅರಿತು ತಮ್ಮ ತಾಯಿಯವರು ತೆಗೆದುಕೊಂಡ ಧೃಡನಿರ್ಧಾರದಿಂದ ಬಳ್ಳಾರಿಯಲ್ಲಿ ಐಸಿಎಸ್ಸಿ ಪಠ್ಯಕ್ರಮದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ ನಿರ್ಮಾಣವಾಗಿರುವ ಕುರಿತು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸುತ್ತಾ ವಿಧ್ಯಾರ್ಥಿಗಳಿಗೆ ಶುಭವನ್ನು ಕೋರಿದರು.
ನಂತರ 2024-25 ಸಾಲಿನ 10 ನೇ ತರಗತಿಯಲ್ಲಿ ಅತೀ ಹೆಚ್ಚು ಶೇಕಡವಾರು 95%, ಅಂಕಗಳನ್ನು ಗಳಿಸಿದ ವಿದ್ಯಾರ್ಥಿಯಾದ ಕುಮಾರ ಯಶವಂತ್.ಎಮ್ಗೆ ಅಕಾಡೆಮಿಕ್ ಎಕ್ಸೆಲೆನ್ಸ್ ಪಾರಿತೋಷಕವನ್ನು ಮುಖ್ಯ ಅತಿಥಿಗಳಾದ ಪ್ರೊ..ಟಿ.ಎನ್.ನಾಗಭೂಷಣರವರು ವಿತರಿಸಿದರು. ಕಳೆದ ವರ್ಷದ ಶಾಲೆಯ ವಾರ್ಷಿಕ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ತರಗತಿವಾರು ವಿಧ್ಯಾರ್ಥಿಗಳಿಗೆ ಕೂಡ ಪಾರಿತೋಷಕವನ್ನು ವಿತರಿಸಲಾಯಿತು. ತದನಂತರ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾದವು.
ಈ ವಾರ್ಷಿಕೋತ್ಸವದಲ್ಲಿ ‘ದಶವಾತಾರ’ ಎಂಬ ವಿಷಯದ ಅಧಾರದ ಮೇಲೆ ಭಗವಂತನ ಹತ್ತು ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಗೌತಮ ಬುದ್ಧ ಹಾಗೂ ಕಲ್ಕಿ ಒಳಗೊಂಡ ಅಧ್ಭುತ ನೃತ್ಯವನ್ನು ಪ್ರದರ್ಶಿಸಿದರು. ಈ ಬಾರಿ ವಿಶೇಷವಾಗಿ ಕನ್ನಡದ ಚಲನಚಿತ್ರ ರಂಗದ ಹಳೆಯ ಚಲನಚಿತ್ರಗೀತೆಗಳಿಗೆ ಮಕ್ಕಳು ತಮ್ಮ ಹಾವ ಭಾವದ ಮೂಲಕ ನೃತ್ಯವನ್ನು ಪ್ರದರ್ಶಿಸಿ ನೆರೆದ ಪೋಷಕರ ಮನಸೆಳೆದರು. ಕೊನೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಶಿಲ್ಪಾರವರು ವಂದನಾರ್ಪಣೆಯನ್ನು ನೆರವೇರಿಸಿದರು.


