ಬಳ್ಳಾರಿ. ನ. 19::.. ಡಿಸೆಂಬರ್ ಮೂರರಂದು ಸರ್ಕಾರದಿಂದ ಆಚರಿಸಲು ಉದ್ದೇಶಿಸಿರುವ ವಿಕಲ ಚೇತನರ ದಿನಾಚರಣೆಯನ್ನು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವತಿಯಿಂದ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ , ರಂಗಪ್ಪ ದಾಸರ ತಿಳಿಸಿದರು.
ಅವರು ಇಂದು ನಗರದ ಪತ್ರಿಕ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಹಲವಾರು ವರ್ಷಗಳಿಂದ ಪಿಂಚಣಿ ಹೆಚ್ಚಿಸುವುದು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಒದಗಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಅಂದು ನಮ್ಮ ಜೊತೆ ಮಾತನಾಡಿದ ಅಧಿಕಾರಿಗಳು ನಿಮ್ಮ ಜೊತೆ ಮಾತುಕತೆಗೆ ಮುಖ್ಯಮಂತ್ರಿಗಳು ದಿನಾಂಕವನ್ನು ನಿಗದಿಪಡಿಸುತ್ತಾರೆ ಆ ಮಾತುಕತೆಯಲ್ಲಿ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಆಶ್ವಾಸನೆಯನ್ನು ನೀಡಿದ್ದರು. ಈ ಆಶ್ವಾಸನೆಯ ನೀಡಿ ಸುಮಾರು ತಿಂಗಳ ಕಳೆದರೂ ಅಧಿಕಾರಿಗಳು ಯಾವುದೇ ಮಾತುಕತೆಯನ್ನು ನಡೆಸಿಲ್ಲ ಮತ್ತು ವಿಕಲಚೇತನರ ಬಗ್ಗೆ ಯಾವುದೇ ವಿಶೇಷವಾದ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿರುವುದಿಲ್ಲ ಎಂದ ಅವರು, ಆಂಧ್ರ ಪ್ರದೇಶ ಈಗಾಗಲೇ 6,000 ರೂಪಾಯಿಗಳನ್ನು ಪಿಂಚಣಿ ನೀಡುತ್ತಿದೆ, ತೆಲಂಗಾಣದಲ್ಲಿ 4000 ನೀಡಲಾಗುತ್ತಿದೆ ಹರಿಯಾಣ ದೆಹಲಿ ಮತ್ತು ಪಂಜಾಬ್ಗಳಲ್ಲಿ ನಾಲ್ಕು ಸಾವಿರ ರೂಪಾಯಿಗಳನ್ನು ಮಾಶಾಸನವಾಗಿ ನೀಡಲಾಗುತ್ತಿದೆ ಜೊತೆಗೆ ತುಟ್ಟಿಬತ್ತೆಯ ಹೆಚ್ಚಳಕ್ಕೆ ಅನುಗುಣವಾಗಿ ವಾರ್ಷಿಕ 15% ಹೆಚ್ಚಳದ ನಿರ್ಧಾರವನ್ನು ಶಾಸನಸಭೆಯಲ್ಲಿ ಅಂಗೀಕರಿಸಲಾಗಿದೆ ಅದೇ ಪ್ರಕಾರವಾಗಿ ರಾಜ್ಯದಲ್ಲಿಯೂ ಸಹ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪದಾಧಿಕಾರಿಗಳಾದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ ಜಿಲ್ಲಾಧ್ಯಕ್ಷ ಎನ್ ಕುಮಾರ್ ಹಾಗೂ ವರಲಕ್ಷ್ಮಿ ಏರಿಸ್ವಾಮಿ ಬಂಗಾರಪ್ಪ ಸೇರಿದಂತೆ ಇತರರಿದ್ದರು.


