ಬಳ್ಳಾರಿ.ಮಾ 30.. : ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನೇತ್ರ ಕಲಾ ಸಂಘದಿಂದ ನಿನ್ನೆ ಸಂಜೆ ನಗರದ ಕನ್ನಡ ಭವನದಲ್ಲಿ ರಂಗ ಪುರಸ್ಕಾರ ಸಮಾರಂಭ ಜರುಗಿತು. ಮಯೂರ ಕಲಾ ಸಂಘದ ಕಲಾವಿದ ಬಸವರಾಜ್ ಜೋಳದರಾಶಿ, ಪ್ರಸಾದನದ ಜೀರ್ ಹಾಲೇಶಪ್ಪ, ತೊಗಲುಗೊಂಬೆ ಕಲಾವಿದೆ ಹುಲಿಗೆಮ್ಮ ಅವರಿಗೆ ರಂಗ ಪುರಸ್ಕಾರ ನೀಡಿ ಗೌರವಿಸಲಾಯ್ತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ರಂಗ ಕಲಾವಿದೆ ಡಾ.ಎ ವರಲಕ್ಷ್ಮಿ ಅವರು ನಾಡಿನ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳಸಬೇಕಿದೆಂದರು. ರಂಗ ಕಲಾವಿದೆ ವೀಣಾ ಆದೋನಿ ಅವರು, ಮುಖಕ್ಕೆ ಬಣ್ಣ ಹಚ್ಚುವವರಿಗೆಲ್ಲ ರಂಗ ಭೂಮಿ ದಿನಾಚರಣೆ ಸಂಭ್ರಮದ ದಿನ ಎಂದು ರಕ್ತರಾತ್ರಿಯ ನಾಟಕದ ಭಾನುಮತಿ ಪಾತ್ರದ ಸಂಭಾಷಣೆ ಹೇಳಿ, ರಂಗಗೀತೆ ಹಾಡಿ ನೆರೆದವರ ಗಮನ ಸೆಳೆದರು.
ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಇವರು ಮಾತನಾಡಿ, ನೇತ್ರ ಕಲಾ ಸಂಘ ಕಳೆದ 15 ವರ್ಷಗಳಿಂದ ರಂಗ ಸೇವೆ ಮಾಡುತ್ತಾ ಬಂದಿರುವುದನ್ನು ಸ್ಮರಿಸಿದರು.
ನಿವೃತ್ತ ಶಿಕ್ಷಕ, ಕಲಾವಿದ ಕೆ.ಎಂ. ಸಿದ್ದಲಿಂಗಯ್ಯಸ್ವಾಮಿ ಅಧ್ಯಕ್ಷತೆವಹಿಸಿ, ಮಕ್ಕಳಿರುವಾಗಲೇ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಲು ಪೋಷಕರು ಮುಂದಾಗಬೇಕೆಂದರು.
ಬಯಲಾಟಕಲೆಯ ನೆಲೆಯ ಬಗ್ಗೆ ಉಪನ್ಯಾಸ ನೀಡಿದ ಹೆಚ್.ತಿಪ್ಪೇಸ್ವಾಮಿ ಮುದ್ದಟನೂರು, ರಾಜ್ಯದ 23 ಜಿಲ್ಲೆಗಳಲ್ಲಿ ಬಯಲಾಟ ಕಲಿಕೆ, ಪ್ರದರ್ಶನ ಇದೆ. ಆದರೆ ಕೇವಲ ನಾಲ್ಕು ಜಿಲ್ಲೆಗಳಲ್ಲಿನ ಯಕ್ಷಗಾನ ವಿಶ್ವ ಮಟ್ಟಕ್ಕೆ ಬೆಳೆಯಲು ಅದಕ್ಕೆ ಅವುಗಳ ವೀಕ್ಷಕರು ನೀಡಿದ ಪ್ರೋತ್ಸಾಹ ಮುಖ್ಯವಾಯಿತು. ಅದರಂತೆ ಬಯಲಾಟಕ್ಕೂ ಹೆಚ್ಚಿನ ಪ್ರೋತ್ಸಾಹದ ಅಗತ್ಯತೆ ಬಗ್ಗೆ ತಿಳಿಸಿ. ಬಯಲಾಟದಲ್ಲಿನ ಶಬ್ದಗಳು ಸಿಂಹಧ್ವನಿ ಇದ್ದಂತೆ. ಅನಕ್ಷರಸ್ಥರೂ ಹೇಳಿದರೂ ಅವುಗಳಲ್ಲಿನ ಗಾಂಭೀರ್ಯತೆ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುತ್ತದೆ. ವಿವಾಹ ಮೊದಲಾದ ಸಮಾರಂಭಗಳಲ್ಲಿ ಆರ್ಕೆಸ್ಟ್ರ ಬದಲಾಗಿ ಬಯಲಾಟ ಪ್ರದರ್ಶನ ಹಮ್ಮಿಕೊಳ್ಳುವಂತಾಗಬೇಕು. ಬಯಲಾಟದಲ್ಲಿ ಇಂದಿಗೂ ಆಂಗ್ಲ ಪದದ ಬಳಕೆ ಆಗಿಲ್ಲ. ವಿವಿಧ ಕ್ಷೇತ್ರದ ಉದ್ಯೋಗಿಗಳು ಇದನ್ನು ಕಲಿತು ಪ್ರದರ್ಶನ ನೀಡುವ ಕೆಲಸ ಆಗಬೇಕು. ಬಯಲಾಟದ ರಂಗಗೀತೆಗಳ ಸಂಗ್ರಹ ಕಾರ್ಯ ಆಗಬೇಕಿದೆಂದರು.


