ಜಮಖಂಡಿ; ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ನಿಜಸುಖಿ ಹಡಪದ ಅಪ್ಪಣ್ಣ ಸಮಾಜಕ್ಕೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ಮುಖ್ಯಂತ್ರಿ ಸಿದ್ಧರಾಮಯ್ಯ ಅವರು ನಿಜವಾದ ಅಹಿಂದ ನಾಯಕರೆನಿಸಿದ್ದಾರೆ. ಹಿಂದುಳಿದ ಜನಾಂಗದ ಮೇಲೆ ಅಪಾರ ಪ್ರೀತಿ ಹೊಂದಿರುವ ಅವರ ಕಾಳಜಿ ಗೊತ್ತಾಗುತ್ತದೆ. ಬರೀ ನಿಗಮ ಸ್ಥಾಪನೆ ಮಾಡಿ ಬಿಡುವ ಬದಲು ನಿಗಮಕ್ಕೆ ನೂರು ಕೋಟಿ ರುಗಳ ಅನುದಾನ ಮೀಸಲಿಡಬೇಕು,ಕೂಡಲೇ ಅಧ್ಯಕ್ಷರ ನೇಮಕಾತಿ ಮಾಡಬೇಕು ಎಂದು ಸಮಾಜದ ತಾಲೂಕು ಅಧ್ಯಕ್ಷ ರಮೇಶ ನಾವ್ಹಿ ಮನವಿ ಮಾಡಿದರು.
ಮಂಗಳವಾರ ನಗರದ ನಿರೀಕ್ಷಣಾ ಮಂದಿರ ರಮಾ ನಿವಾಸದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಗರದ ಒಬ್ಬರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು, ಎಲ್ಲಾ ರೀತಿಯಿಂದಲೂ ಹಿಂದುಳಿದಿರುವ ಸಮಾಜವನ್ನು ಗುರುತಿಸಿದ್ದಕ್ಕೆ ಸಮಾಜದ ವತಿಯಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಮಾಜಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಇದಕ್ಕಾಗಿ ಶ್ರಮಿಸಿದ ಎಲ್ಲ ಮಂತ್ರಿಗಳು ಶಾಸಕರಿಗೆ ಧನ್ಯವಾದಗಳನ್ನು ಸಮಾಜದ ವತಿಯಿಂಧ ಅರ್ಪಿಸುತ್ತೇವೆ ಎಂದು ಹೇಳಿದರು.
ಶಿವಲಿಂಗ ನಾವ್ಹಿ ಅವರು ಮಾತನಾಡಿ 12ನೇ ಶತಮಾನದಲ್ಲಿ ಅಪ್ಪಣ್ಣ ನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಗಳಾಗಿದ್ದರು. ಅವರು ಪ್ರತಿನಿಧಿಸುವ ಸಮಾಜ ರಾಜಕೀಯವಾಗಿ ಹಿಂದುಳಿದಿದೆ. 2023ರಲ್ಲಿ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೇವಲ ಅಭಿವೃದ್ಧಿ ನಿಗಮ ಸ್ಥಾಪಿಸುವ ಭರವಸೆ ನೀಡಿದ್ದರು ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಥಾಪನೆ ಮಾಡಿದ್ದು ಸಂತಸ ತಂದಿದೆ ಎಂದು ತಿಳಿಸಿದರು. ಶಿವಾನಂದ ಕೊಲೂರ ಮಾತನಾಡಿ ಎಸ್ಸಿ, ಎಸ್ಟಿ ಸಮಾಜಗಳಿಗೆ ಭೂಮಿ ಖರೀದಿಸಲು ಅನುಕೂಲ ಮಾಡಿಕೊಡುವಂತೆ ಹಡಪದ ಅಪ್ಪಣ್ಣ ಸಮಾಜಕ್ಕೂ ಭೂಮಿ ಖರಿದಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಉಫಾಧ್ಯಕ್ಷ ಶಿವಾನಂದ ಕೊಲಾರ, ಕಾರ್ಯದರ್ಶಿ ಮಹಾದೇವ ಜಂಬಗಿ, ಖಜಾಂಚಿ ಸುಭಾಷ ನಾವ್ಹಿ ಮಾತನಾಡಿದರು. ಚೆನಬಸಪ್ಪ ನಾವ್ಹಿ, ಅಯ್ಯಪ್ಪ ಹಡಪದ, ಸಿದ್ದು ಜಂಬಗಿ, ಹೊಳೆಬಸವ ನಾವ್ಹಿ, ಸುರೇಶ ಕೋಲಾರ, ಹಣಮಂತ ಕೊಲಾರ, ನಾಗಪ್ಪ ನಾವ್ಹಿ, ರವಿ ಹಡಪದ, ರಾಘವೇಂದ್ರ ನಾವ್ಹಿ, ಆಕಾಶ ಕೋಲಾರ, ಬಸು ನಾವ್ಹಿ, ಮಹೇಶ ನಾವಿ, ಶ್ರೀಶೈಲ ಬೂದಿಹಾಳ, ಸಂತೋಷ ಹಡಪದ ಕುಮಾರ ಹೊನವಾಡ ಮುಂತಾದವರಿದ್ದರು.


