ಬಳ್ಳಾರಿ, ಮಾ.20..: ರಮೇಶಗೌಡ ಪಾಟೀಲ್ ಅವರ ರಂಗಭೂಮಿ ಸೇವೆ ಅವಿಸ್ಮರಣೀಯ ಎಂದು ರಾಘವ ಕಲಾ ಮಂದಿರದ ಅಧ್ಯಕ್ಷರು ಹಾಗೂ ಖ್ಯಾತ ನ್ಯಾಯವಾದಿಗಳಾದ ಕೋಟೇಶ್ವರ ರಾವ್ ಅಭಿಪ್ರಾಯಪಟ್ಟರು.
ಜಿಲ್ಲಾ ಕ.ಸಾ.ಪ ಹಾಗೂ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಸಂಯುಕ್ತವಾಗಿ ನಿನ್ನೆ ಸಂಜೆ ಕನ್ನಡ ಭವನದಲ್ಲಿ ಆಯೋಜಿಸಿದ್ದ ರಮೇಶಗೌಡ ಪಾಟೀಲ್ ಸಂಸ್ಮರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕನ್ನಡ ಮತ್ತು ತೆಲುಗು ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಮೇಶ್ ಗೌಡ ಪಾಟೀಲ್ ರಂಗಭೂಮಿಗೆ ಮಹತ್ವದ ಕೊಡುಗೆಯನ್ನು ನೀಡಿದ್ದರೆಂದು ಕೋಟೇಶ್ವರಾವ್ ತಿಳಿಸಿದರು.
ಕನ್ನಡ ಸಂಸ್ಕೃತಿ ಇಲಾಖೆಯ ಮಾಜಿ ಉಪನಿರ್ದೇಶಕ ಚೋರನೂರು ಟಿ ಕೊಟ್ರಪ್ಪ ರಮೇಶಗೌಡ ಪಾಟೀಲರು ರಂಗಭೂಮಿ ಸೇರಿದಂತೆ ವಿವಿಧ ಸಾಹಿತ್ಯಕ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದರೆಂದು ತಿಳಿಸಿದರು.
ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಟಿ ಹೆಚ್ ಎಂ ಬಸವರಾಜ್ ಅವರು ಪಾಟೀಲರ ರಂಗಸೇವೆ ಮತ್ತು ಸಾಮಾಜಿಕ ಸೇವೆಯನ್ನು ಸ್ಮರಿಸಿದರು.
ಹಿರಿಯ ರಂಗ ಕಲಾವಿದೆ ಅದವಾನಿ ವೀಣಾ ಅವರು ಮಾತನಾಡಿ ಪಾಟೀಲರೊಂದಿಗೆ ವಿವಿಧ ಪಾತ್ರಗಳಲ್ಲಿ ತಾವು ಅಭಿನಯಿಸಿದ ಅನೇಕ ಸನ್ನಿವೇಶಗಳನ್ನು ನೆನಪಿಸಿಕೊಂಡರು.
ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಎಲ್ಲನಗೌಡ ಶಂಕರ ಬಂಡೆ, ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಹುಸೇನ್ ಸಾಬ್, ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್, ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ತಾಲೂಕು ಕಸಾಪ ಅಧ್ಯಕ್ಷ ಕೆ ವಿ ನಾಗರೆಡ್ಡಿ, ಮತ್ತಿತರರು ರಮೇಶಗೌಡ ಪಾಟೀಲರ ರಂಗಭೂಮಿಯ ಸೇವೆಯನ್ನು ಕುರಿತು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಆಲಾಪ್ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ರಮಣಪ್ಪ ಭಜಂತ್ರಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು, ಕವಿ ವೀರೇಂದ್ರ ರವಿಹಾಳ್, ಬಸವರಾಜ ಬಿಸಿಲಹಳ್ಳಿ, ಗಾಯಕ ಜಡೇಶ ಎಮ್ಮಿಗನೂರು, ತೊಗಲುಗೊಂಬೆ ಕಲಾವಿದ ಸುಬ್ಬಣ್ಣ, ಬಸವರಾಜ್, ಮೌನೇಶ್ ಆಚಾರಿ ಮತ್ತಿತರರು ಉಪಸ್ಥಿತರಿದ್ದರು.
ರಂಗ ಕಲಾವಿದ ಆರ್.ಪಿ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.


