ನವದೆಹಲಿ: ಹಮ್ದರ್ದ್ ಸಂಸ್ಥೆಯ ವಿರುದ್ಧ ಆಕ್ಷೇಪಾರ್ಹ, ನಿಂದನಾತ್ಮಕ ಹೇಳಿಕೆ ನೀಡುವುದಿಲ್ಲ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಅಂಥ ಯಾವುದೇ ಪೋಸ್ಟ್ ಹಾಕುವುದಿಲ್ಲ, ಈ ರೀತಿ ಪುನಾರವರ್ತನೆ ಮಾಡುವುದಿಲ್ಲ ಎಂದು ಯೋಗಗುರು ರಾಮ್ದೇವ್ ಶುಕ್ರವಾರ ದೆಹಲಿ ಹೈಕೋರ್ಟ್ಗೆ ಭರವಸೆ ನೀಡಿದ್ದಾರೆ.
ನ್ಯಾಯಮೂರ್ತಿ ಅಮೃತ್ ಬನ್ಸಾಲ್ ಅವರು, ಈ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ರಾಮ್ದೇವ್ ಪರ ವಕೀಲರಿಗೆ ತಿಳಿಸಿದರು. ಇದಕ್ಕೂ ಮೊದಲು ಮೇ 1ರಂದು ಅವರು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ವಿವಾದಾತ್ಮಕ ಅಂಶವನ್ನು ಅಳಿಸಿಹಾಕುವಂತೆ ಸೂಚಿಸಿ ಅರ್ಜಿಯ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿದರು.
ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ರಾಮ್ದೇವ್ ಮತ್ತು ಅವರ ಪತಂಜಲಿ ಸಂಸ್ಥೆಯ ವಿರುದ್ಧ ಹಮ್ದರ್ದ್ ನ್ಯಾಷನಲ್ ಫೌಂಡೇಷನ್ ಆಫ್ ಇಂಡಿಯಾ ಕೋರ್ಟ್ ಮೇಟ್ಟಿಲೇರಿದೆ.
ಪತಂಜಲಿಯ ‘ಗುಲಾಬ್ ಶರ್ಬತ್’ ಜಾಹೀರಾತಿನಲ್ಲಿ, ಹಮ್ದರ್ದ್ ರೂಹ್ ಅಫ್ಜಾದಿಂದ ಸಂಪಾದಿಸಿದ ಹಣದಲ್ಲಿ ಮದರಸಾ ಮತ್ತು ಮಸೀದಿಗಳನ್ನು ನಿರ್ಮಿಸಲಾಗುತ್ತಿದೆ ಎಂಬುದಾಗಿ ಆರೋಪಿಸಲಾಗಿದೆ ಎಂದು ಹರ್ಮದ್ ಸಂಸ್ಥೆ ಆರೋಪಿಸಿದೆ. ರಾಮದೇವ್ ಅವರ ವಕೀಲರು ತಮ್ಮ ಕಕ್ಷಿದಾರರಿಗೆ “ನ್ಯಾಯಾಲಯದ ಬಗ್ಗೆ ಅಪಾರ ಗೌರವವಿದೆ” ಮತ್ತು ಅದರ ನಿರ್ದೇಶನಗಳನ್ನು ಪಾಲಿಸಲಾಗುವುದು ಎಂದು ತಿಳಿಸಿದರು.