ವಿಶ್ವ ಔಷಧ ತಜ್ಞರ ದಿನಾಚರಣೆ-ಹಿರಿಯ ಔಷಧ ತಜ್ಞರಿಗೆ ಸನ್ಮಾನ ಔಷಧ ವ್ಯಾಪಾರಿಗಳ ಸೇವೆ ಅನುಪಮವಾದದ್ದು : ರಘುನಾಥ ರೆಡ್ಡಿ

Ravi Talawar
ವಿಶ್ವ ಔಷಧ ತಜ್ಞರ ದಿನಾಚರಣೆ-ಹಿರಿಯ ಔಷಧ ತಜ್ಞರಿಗೆ ಸನ್ಮಾನ ಔಷಧ ವ್ಯಾಪಾರಿಗಳ ಸೇವೆ ಅನುಪಮವಾದದ್ದು : ರಘುನಾಥ ರೆಡ್ಡಿ
WhatsApp Group Join Now
Telegram Group Join Now
ಗದಗ, ಸೆ. ೨೫ : ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಮೂಲಕ ಜನಮುಖಿಯಾಗಿ ಕಾರ್ಯ ಮಾಡುತ್ತಿರುವ ಔಷಧ ವ್ಯಾಪಾರಿಗಳ ಸೇವೆ ಅನುಪಮವಾದದ್ದು ಎಂದು ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಘುನಾಥ ರೆಡ್ಡಿ  ಹೇಳಿದರು.
ಅವರು ಗುರುವಾರ ಎಸ್.ಬಿ.ಎಸ್ ಗಾರ್ಡನ್‌ದಲ್ಲಿ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘ ಬೆಂಗಳೂರು, ಗದಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಎರ್ಪಡಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ಹಾಗೂ ನಿರಂತರ ಕಲಿಕಾ ಕಾರ್ಯಕ್ರಮ ಮತ್ತು ಹಿರಿಯ ಔಷಧ ತಜ್ಞರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಔಷಧ ತಜ್ಞರಿಗೆ ಮುಖ್ಯವಾಗಿ ತಾಳ್ಮೆ, ಸಹನೆ, ಮಾನವೀಯತೆ ಹಾಗೂ ಸಹಕಾರ ಮನೋಭಾವ ಇರುವದು ಅವಶ್ಯ ಇಂತಹ ಗುಣಗಳುಳ್ಳ ವ್ಯಕ್ತಿ ಖ್ಯಾತಿಯನ್ನು ಮತ್ತು ಸಂತೃಪ್ತಿಯನ್ನು ಹೊಂದಬಲ್ಲನು ಎಂದರು.
ಮುಖ್ಯ ಅತಿಥಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಮಾತನಾಡಿ ಔಷಧ ತಜ್ಞರು ಜನಸಾಮಾನ್ಯರ ದೃಷ್ಠಿಯಲ್ಲಿ ವೈದ್ಯರಾಗಿದ್ದಾರೆ ಆರೋಗ್ಯದ ಸಣ್ಣ ಪುಟ್ಟ ಸಮಸ್ಯೆಗಳಿಗೆ ಔಷಧ ನೀಡಿ ಜನರ ಆರೋಗ್ಯ ಕಾಪಾಡುತ್ತಾರೆ ಆದಾಗ್ಯೂ ತಜ್ಞ ವೈದ್ಯರ ಸಲಹೆ ಅಗತ್ಯ ಎಂದರು.
ಮುಖ್ಯ ಅತಿಥಿ ಹುಬ್ಬಳ್ಳಿಯ ಪ್ರಾದೇಶಿಕ ಕಚೇರಿಯ ಉಪಔಷಧ ನಿಯಂತ್ರಕ ಬಸವರಾಜ ಆಸಂಗಿ ಮಾತನಾಡಿ ಫಾರ್ಮಾಸಿಸ್ಟ ಕಾರ್ಯ ಶ್ಲ್ಯಾಘನೀಯವಾದದ್ದು ೨೪ ಗಂಟೆಯೂ ನಿರಂತರವಾಗಿ ಸೇವೆ ಮಾಡುತ್ತ ಜನರ ಆರೋಗ್ಯ, ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿರುವದು ಅಭಿನಂದನೀಯ ಎಂದರು.
ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವ್ಹಿ.ಕೆ.ಜೀವನ್ ಮಾತನಾಡಿ ಆಧುನಿಕ ಇಂದಿನ ದಿನಗಳು ಸ್ಪರ್ಧಾತ್ಮಕತೆಯ ದಿನಗಳಾಗಿದ್ದು ಫಾರ್ಮಾಸಿಸ್ಟಗಳು ತಮ್ಮ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ನೀಡುವ ಮೂಲಕ ತಮ್ಮ ವೃತ್ತಿಯನ್ನು ಇನ್ನಷ್ಟು ಅಭಿವೃದ್ಧಿ ಮಾಡಿಕೊಳ್ಳಲು ಅವಕಾಶಗಳಿವೆ ಎಂದರು.
ಗದಗ ಜಿಲ್ಲೆಯಲ್ಲಿ ಔಷಧ ವ್ಯಾಪಾರಿಗಳ ಸಂಘಟನೆ ಉತ್ತಮವಾಗಿ ಬೆಳೆದು ಬಂದಿದ್ದು ಗದುಗಿನಲ್ಲಿ ಉದ್ದೇಶಿತ ’ಔಷಧ ಭವನ’ ನಿರ್ಮಾಣಕ್ಕೆ ರಾಜ್ಯ ಸಂಘಟನೆಯಿಂದ ೩ ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲು ಅವಕಾಶವಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿರಿ ಶೀಘ್ರದಲ್ಲಿ ಔಷಧ ಭವನ ನಿರ್ಮಿಸಲು ಪದಾಧಿಕಾರಿಗಳು ಮುಂದಾಗಲಿ ಎಂದರು. ಇನ್ನೋರ್ವ ಮುಖ್ಯ ಅತಿಥಿ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ ಅಧ್ಯಕ್ಷ ತಾತನಗೌಡ ಪಾಟೀಲ ಸಂದರ್ಭೋಚಿತವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗದಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಮನಗೌಡ ದಾನಪ್ಪಗೌಡ್ರ    ಗದುಗಿನಲ್ಲಿ ಔಷಧ ಭವನ ನಿರ್ಮಾಣಕ್ಕೆ ಭೂಮಿಯನ್ನು ಗುರುತಿಸಲಾಗಿದ್ದು ದಾನಿಗಳ ಸಹಕಾರದೊಂದಿಗೆ ಈ ಕಾರ್ಯ ಪೂರ್ಣಗೊಳಿಸುವದಾಗಿ ಹೇಳಿದರು.ಔಷಧ ವ್ಯಾಪಾರಿಗಳು ಹಲವಾರು ಸಮಸ್ಯೆಗಳ ಮಧ್ಯದಲ್ಲಿಯೂ ಸೇವೆ ಒದಗಿಸುತ್ತ ಜನಮುಖಿ ಹಾಗೂ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರಲಿರುವ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಪಡಿಸಲಾಗುವದು ಎಂದರು.
ಸಾನಿಧ್ಯ ವಹಿಸಿದ್ದ ಶಿರೋಳ, ಭೈರನಹಟ್ಟಿಯ ತೋಂಟದಾರ್ಯ ಶಾಖಾ ಮಠದ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ ಜನಸಾಮಾನ್ಯರ ದೃಷ್ಠಿಯಲ್ಲಿ ಔಷಧ ವ್ಯಾಪಾರಿಗಳೇ ವೈದ್ಯರು. ನಿತ್ಯದ ಕಾಯಕದಿಂದ ನೈಪುಣ್ಯತೆ ಬೆಳೆಸಿಕೊಂಡಿದ್ದಾರೆ. ಮುಷ್ಕರ ಏನೇ ನಡೆದರೂ ಸೇವೆ ಅಗತ್ಯ ಸೇವೆಯಾಗಿ ಔಷಧ ಅಂಗಡಿ ತೆರೆದುಕೊಂಡು ಜನತೆಗೆ ಸೇವೆ ಒದಗಿಸುತ್ತಿರುವದು ಶ್ಲ್ಯಾಘನೀಯ ಎಂದರು.
ಅತಿಥಿಗಳಾಗಿ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಗದಗ ಜಿಲ್ಲಾ ಪ್ರತಿನಿಧಿ ಮಾಲತೇಶ ರಮಾಣಿ, ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘ ಸದಸ್ಯ ಮಹಾದೇವಗೌಡ ಲಿಂಗನಗೌಡ್ರ ವಿಶೇಷ ಆಹ್ವಾನಿತರಾಗಿ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಬಿ.ಮಂಜುನಾಥ ರೆಡ್ಡಿ ಆಗಮಿಸಿದ್ದರು.
ಗಣ್ಯರನ್ನು ಹಾಗೂ ಹಿರಿಯ ಔಷಧ ತಜ್ಞರಾದ ಶ್ರೀಮತಿ ರಾಧಾ ದೀಪಾಲಿ, ಹನಮಂತಗೌಡ ಪಾಟೀಲ, ಮಲ್ಲಪ್ಪ ಕಾಬಳ್ಳಿ, ನಿಂಗಪ್ಪ ದೇಸಾಯಿ, ರಾಜಣ್ಣ ತ್ರಿಮಲ್ಲೆ, ಈರಣ್ಣ ಕಪ್ಪರಶೆಟ್ಟಿ, ಪಂಚಾಕ್ಷರಪ್ಪ ಅಂಗಡಿ, ರವೀಂದ್ರನಾಥ ಆನೇಗುಂದಿ, ರಮಜಾನ್‌ಸಾಹೇಬ ನದಾಫ, ಸುನೀಲ ಪತ್ತೇಪೂರ,. ಭೀಮರೆಡ್ಡೆಪ್ಪ ಪರಡ್ಡಿ, ಮಲ್ಲಿಕಾರ್ಜುನ ನರೇಗಲ್ಲ, ಸುರೇಶ ನವಲಿ, ವೀರಭದ್ರಪ್ಪ ಪಾಗಿ, ಸಂಗಪ್ಪ ಹೂಗಾರ, ಜಗನ್ನಾಥ ಅಳವಂಡಿ, ಶ್ರೀಮತಿ ಅನುಷಾ ಕುಲಕರ್ಣಿ, ಪವನ ನರಗುಂದ, ತೋಟಪ್ಪ ಹಾವೇರಿ, ಬಸಯ್ಯ ಮಠಪತಿ, ಶಿವರುದ್ರಪ್ಪ ಮಲ್ಲಾಡದ ದಂಪತಿ ಸಮೇತ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ರಾಧಾ ದೀಪಾಲಿ ಮಾತನಾಡಿದರು.
ಮಹೇಶ ಕುಂದ್ರಾಳಹಿರೇಮಠ, ಬಸವರಾಜ ದೊಡ್ಡಮನಿ ಹಾಗೂ ಖಾಜೇಸಾಬ ಬೂದಿಹಾಳ ಪ್ರಾರ್ಥಿಸಿದರು, ನಾಗೇಶ ಹುಬ್ಬಳ್ಳಿ ಸ್ವಾಗತಿಸಿದರು, ಮಹಾಂತೇಶ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ಬಾಹುಬಲಿ ಜೈನರ್ ನಿರೂಪಿಸಿದರು ಕೊನೆಗೆ ಕಾರ್ಯದರ್ಶಿ ಜ್ಞಾನೇಶ್ವರ ಖೋಕಲೆ ವಂದಿಸಿದರು. ಸಮಾರಂಭದಲ್ಲಿ ಗದಗ ಜಿಲ್ಲೆಯ ಎಲ್ಲ ತಾಲೂಕಗಳ ಔಷಧ ವ್ಯಾಪಾರಿಗಳು ಪಾಲ್ಗೋಂಡಿದ್ದರು.
WhatsApp Group Join Now
Telegram Group Join Now
Share This Article