ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶನದ, ‘ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ನಟಿಸುತ್ತಿದ್ದಾರೆ.
ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ‘ಮಹಾನ್’ ತಂಡಕ್ಕೆ ರಾಧಿಕಾ ನಾರಾಯಣ್ ಅವರನ್ನು ಸ್ವಾಗತಿಸಿದೆ.
ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ ‘ಮಹಾನ್’ ರೈತರ ಕುರಿತಾದ ಚಿತ್ರ.
“ಈ ಚಿತ್ರದಲ್ಲಿ ನಟಿಸಲು ನನಗೆ ಬಹಳ ಸಂತೋಷವಾಗಿದೆ. ಪಿ.ಸಿ.ಶೇಖರ್ ಅವರ ನಿರ್ದೇಶನದಲ್ಲಿ ನನಗೆ ನಟಿಸಬೇಕೆಂಬ ಆಸೆಯಿತ್ತು. ಆದರೆ ಇಷ್ಟು ದಿನ ಸಾಧ್ಯವಾಗಿರಲಿಲ್ಲ ಈಗ ಅವರ ‘ಮಹಾನ್’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಸಮಾಜಿಕ ಕಳಕಳಿ ಹೊಂದಿರುವ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಬಹಳ ಖುಷಿ. ಇನ್ನೂ ನಿರ್ದೇಶಕರು ಇದೊಂದು ರೈತರ ಕುರಿತಾದ ಚಿತ್ರ ಎಂದು ಹೇಳಿದ ತಕ್ಷಣ ನನಗೆ ಕಥೆ ಬಹಳ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ಹಳ್ಳಿಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ ರಾಧಿಕಾ ನಾರಾಯಣ್.
“ಈ ಹಿಂದೆ ರಾಧಿಕಾ ನಾರಾಯಣ್ ಅವರ ಜೊತೆಗೆ ಎರಡು ಮೂರು ಕಥೆಗಳನ್ನು ಚರ್ಚಿಸಿದ್ದರೂ ಆಗಿರಲಿಲ್ಲ. ಈಗ ನನ್ನ ನಿರ್ದೇಶನದ ‘ಮಹಾನ್’ ಚಿತ್ರದಲ್ಲಿ ರಾಧಿಕಾ ನಾರಾಯಣ್ ಅವರು ನಟಿಸುತ್ತಿರುವುದು ಬಹಳ ಸಂತೋಷವಾಗಿದೆ. ಅವರ ಪಾತ್ರ ಕೂಡ ವಿಭಿನ್ನವಾಗಿರಲಿದೆ” ಎನ್ನುತ್ತಾರೆ ನಿರ್ದೇಶಕ ಪಿ.ಸಿ.ಶೇಖರ್.
“ರಂಗಿತರಂಗ’ ಸೇರಿದಂತೆ ಕನ್ನಡದ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ರಾಧಿಕಾ ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವುದು ಸಂತಸ ತಂದಿದೆ” ಎಂದು ನಿರ್ಮಾಪಕ ಪ್ರಕಾಶ್ ಬುದ್ದೂರು ತಿಳಿಸಿದ್ದಾರೆ.