ಬಳ್ಳಾರಿ,ಮಾ.25
ಇಂದಿನ ಯುವಕರು ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್ ಹಟ್ಟಪ್ಪ ಅವರು ಹೇಳಿದರು.
ಕೇಂದ್ರ ಸರ್ಕಾರದ ಮೇರಾ ಯುವ ಭಾರತ ಬಳ್ಳಾರಿ ಹಾಗೂ ಬಿಡಿಡಿಎಸ್ ಸಹಯೋಗದಲ್ಲಿ ಬಿಡಿಡಿಎಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆ ಕೌಶಲ್ಯ ಚಟುವಟಿಕೆಗಳನ್ನು ಅಳವಡಿಸಿಕೊಂಡಾಗ ಮಾತ್ರ ದೇಶಕ್ಕೆ ಅಮೂಲ್ಯವಾದ ತಮ್ಮ ಕೊಡುಗೆ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮೇರಾ ಯುವ ಭಾರತ ಕೇಂದ್ರದ ಯುವ ಅಧಿಕಾರಿ ಬುಕ್ಕ ಸಂಜೀವ್ ಅವರು ಮಾತನಾಡಿ, ಭಾರತದಲ್ಲಿ ಪ್ರತಿ 50 ಕಿಲೋಮೀಟರ್ ಗೆ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಬದಲಾವಣೆ ಕಾಣಬಹುದು. ಈಗಿನ ಯುವಕರಿಗೆ ಇವುಗಳ ಪರಿಚಯ ಉತ್ತಮ ಮನೋಭಾವನೆ ಬೆಳೆಸಿಕೊಳ್ಳಲು ಸಹಕಾರಿ ಎಂದು ತಿಳಿಸಿದರು.
ಸಿಇಡಿಒಕೆ ವಿನೋದ್ ಕುಮಾರ್ ಅವರು ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲಿರುವ ವಿಶೇಷತೆಗಳ ಕುರಿತು ವಿವರಣೆ ನೀಡಿದರು.
ಎಸ್ಜಿಆರ್ಸಿಎಂ ಕಾಲೇಜಿನ ಪ್ರಾಂಶುಪಾಲ ಡಿ.ರಾಮಕೃಷ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಳ್ಳಾರಿಯ ಸಂಸ್ಕೃತಿ, ಬಿಸಿಲಿನ ಗಮ್ಮತ್ತು ಹಾಗೂ ಇಲ್ಲಿನ ಆಹಾರ ಪದ್ಧತಿ ಬಗ್ಗೆ ತಿಳಿಸಿಕೊಟ್ಟರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮರಿ ಗಾದಿಲಿಂಗಪ್ಪ ಅವರು ಮಾತನಾಡಿ, ಯುವ ಜನತೆ ದೇಶದ ಶಕ್ತಿ ಎಂದು ಹೇಳುವ ಮೂಲಕ ಅಂತರ ಜಿಲ್ಲಾ ಯುವ ವಿನಿಮಯದ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಟಿ.ಎನ್ ಮಾರುತಿ ಪ್ರಸನ್ನ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಯುವಕರು ಕೌಶಲ್ಯಕ್ಕೆ ಒತ್ತು ನೀಡಿ: ಪಿ.ಎಸ್.ಹಟ್ಟಪ್ಪ


