ಧಾರವಾಡ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ದಾಖಲಿಸಿದ ಅನುದಾನಿತ ಪ್ರೌಢಶಾಲೆಗಳು ಹಾಗೂ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವ ಕುರಿತ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದವರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಸರ್ಕಾರ ಅನುದಾನಿತ ಶಾಲೆ ಹಾಗೂ ಶಿಕ್ಷಕರ ಮೇಲೆ ಮಲತಾಯಿ ಧೋರಣೆ ತೋರುತ್ತಿದೆ. ಶಿಕ್ಷಕರು, ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೆ, ಇಂತಹ ಆದೇಶ ಹೊರಡಿಸುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು.
2015 ರಿಂದ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ವಹಿಸಿಲ್ಲ. 2020 ರವರೆಗೆ ವರೆಗೆ ಖಾಲಿಯಾದ ಹುದ್ದೆ ತುಂಬಲು ಹೊರಡಿಸಿರುವ ಆದೇಶದ ನಿಯಮವನ್ನು ಸಡಲಿಸಿ ಜಾರಿಗೊಳಿಸಬೇಕು. 5 ಮತ್ತು 8 ನೇ ತರಗತಿಯಲ್ಲಿ ಅನುತೀರ್ಣ ನಿಯಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಿಬಿಎಸ್ಇ ಮಾದರಿಯಲ್ಲಿ ಉತೀರ್ಣತೆಯಲ್ಲಿ ಆಂತರಿಕ ಅಂಕಗಳನ್ನು ಸಂಯೋಜಿಸುವುದು ಹಾಗೂ ಪಿಯುಸಿ ಮಾದರಿಯಲ್ಲಿ ಮೂರು ಪರೀಕ್ಷೆಗಳ ಫಲಿತಾಂಶವನ್ನು ಸಂಯೋಜಿಸಿ ಶಾಲಾ ಫಲಿತಾಂಶ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರನ್ನು ಕಲಿಸುವ ಕೆಲಸಕ್ಕೆ ಮಾತ್ರ ಬಳಿಸಿಕೊಳ್ಳಬೇಕು ಇತರ ಕಾರ್ಯಗಳಿಗೆ ಬಳಿಸಿಕೊಳ್ಳುವುದನ್ನು ಕೈಬಿಡಬೇಕು. ಶಿಕ್ಷಕರ ಹುದ್ದೆಗಳ ಕೊರತೆಯಿಂದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೂರಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್, ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಸ್. ಹುದ್ದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎನ್.ಸವಣೂರ, ಎನ್.ಎಸ್. ಗೋವಿಂದರಡ್ಡಿ, ಎಂ.ಜಿ.ಕೊಡ್ಲಿ, ಸಂಗಮೇಶ ಹಡಪದ, ಐ.ಬಿ.ಮರ್ಜೆಡಿ, ವೆಂಕಣ್ಣ ಕೋರಡ್ಡಿ, ಶಿವಪ್ರಕಾಶ ಬೋಂಗಾಳೆ, ಉದಯ ಅಬ್ಬಾಯಿ,, ಆರ್.ಎಫ್. ಮೂಲಿಮನಿ, ಮಹಮ್ಮದ್ ಗೌಸ್ ಪೀರಣ್ಣನವರ, ರವಿ ಕೊಣ್ಣೂರ, ಮಂಜುನಾಥ ಕೊಡ್ಲಿ,ಮಡಿವಾಳಿ ಕರಿಸುಬ್ಬನವರ ಪಾಲ್ಗೊಂಡಿದ್ದರು.