ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರ್ಪಳಿ ನಿರ್ಮಿಸಿ ಪ್ರತಿಭಟಿಸಿ ಸರ್ಕಾರಕ್ಕೆ ಮನವಿ
ಅಥಣಿ: ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಸತ್ತ ವ್ಯಕ್ತಿಗೆ ಚಿಕಿತ್ಸೆ ಒತ್ತಾಯಿಸಿ ವೈದ್ಯಕೀಯ ಸಿಬ್ಬಂದಿಗಳಿಗೆ ಅವಾಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಲ್ಲದೆ, ಆಸ್ಪತ್ರೆಯ ಪೀಠೋಪಕರಣಗಳನ್ನು ದೋಸ ಮಾಡಿದ ಘಟನೆಯನ್ನು ಖಂಡಿಸಿ, ಆರೋಪಿಗಳಿಗೆ ಕಾನೂನು ರೀತಿ ಶಿಸ್ತು ಕ್ರಮಕ್ಕೆ ಅಗ್ರಹಿಸಿ ಅಥಣಿಯ ಭಾರತೀಯ ವೈದ್ಯಕೀಯ ಸಂಘ(ಐ ಎಂ ಎ), ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಂ, ನರ್ಸಿಂಗ್ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಮತ್ತು ಸಂಘಟನೆಯ ಪ್ರಮುಖರ ನೇತೃತ್ವದಲ್ಲಿ ಮಂಗಳವಾರ ಕೆಲ ಹೊತ್ತು ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬುಧವಾರ ಪೇಟೆಯಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿದ ವೈದ್ಯರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರ್ಪಳಿ ನಿರ್ಮಿಸಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ಈ ವೇಳೆ ಪಟ್ಟಣದ ಹಿರಿಯ ವೈದ್ಯ ಡಾ. ಎ. ಎ ಪಾಂಗಿ ಮಾತನಾಡಿ ಪಟ್ಟಣದ ಗುಂಜಿಗಾವಿ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಪೊಲೀಸ್ ಅಧಿಕಾರಿಗಳು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ಕಾನೂನು ರೀತಿ ಕಠಿಣ ಶಿಕ್ಷೆ ವಿಧಿಸಬೇಕು. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ಡಾ. ಮಲ್ಲಿಕಾರ್ಜುನ ಹಂಜಿ ಮಾತನಾಡಿ ರೋಗಿಗಳಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಕರ್ತವ್ಯವಾಗಿದೆ. ಆದರೆ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೇ ಪ್ರಕರಣಗಳು ನಡೆದರೆ ಆತಂಕದಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಅಥಣಿಯಲ್ಲಿ ನಡೆದಿರುವ ಈ ಘಟನೆ ಖಂಡನೀಯ, ಸರ್ಕಾರ ಮತ್ತು ತಾಲೂಕ ಆಡಳಿತ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು. ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳು ನಿಲ್ಲಬೇಕು ಎಂದರು.
ಈ ವೇಳೆ ಡಾ.ಅವಿನಾಶ ನಾಯಿಕ, ಡಾ.ರಾಮ ಕುಲಕರ್ಣಿ, ಡಾ. ಆನಂದ ಗುಂಜಿಗಾವಿ, ಐಎಂಎ ಅಧ್ಯಕ್ಷ ಡಾ. ಸ್ಮಿತಾ ಚೌಗಲಾ ಮಾತನಾಡಿ ಅಥಣಿ ಪಟ್ಟಣದ ಗುಂಜಿಗಾವಿ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೇಯನ್ನು ಖಂಡಿಸಿದರು. ನಾವು ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆ ಮಾಡುವ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿಲ್ಲ, ಕೆಲಸ ಮಾಡುವ ವೈದ್ಯರಿಗೆ ಗೌರವ ನೀಡಬೇಕು, ಪ್ರತಿಯೊಬ್ಬರೂ ಕಾನೂನು ಪಾಲಿಸಬೇಕು, ಆಸ್ಪತ್ರೆಗಳಲ್ಲಿ ಭಯ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದರು.
ನಂತರ ತಹಸಿಲ್ದಾರ ಸಿದ್ದರಾಯ ಬೋಸಗಿ, ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದರು.
ಈ ಸಂದರ್ಭದಲ್ಲಿ ಡಾ. ಸಿ. ಎ. ಶಂಕ್ರಟ್ಟಿ, ಡಾ. ಮಹೇಶ್ ಕಾಪ್ಸೆ, ಡಾ. ಆನಂದ ಕುಲಕರ್ಣಿ, ಡಾ. ಜಿಎಸ್ ಪಾಟೀಲ, ಡಾ. ಮುರುಗೇಶ ಅವಟಿ, ಡಾ. ರಮೇಶ್ ಗುಳ್ಳ, ಡಾ. ರಾಹುಲ್ ಬೋಸಲೆ, ಡಾ. ವಿಜಯ ಚೈನಿ, ಡಾ.ರವಿ ಪಾಂಗಿ, ಡಾ. ವಿಶ್ವನಾಥ ಕುಲಕರ್ಣಿ, ಡಾ. ಸಚಿನ್ ಮೀರಜ, ಡಾ. ರಮೇಶ್ ಕಾರೆ, ಡಾ. ನಂದೀಶ್ ತೇರದಾಳ, ಡಾ. ರವಿ ಚೌಗಲಾ, ಡಾ. ಸಂಗಮೇಶ್ ಮಮದಾಪುರ, ಡಾ. ಚಿದಾನಂದ ಮೇತ್ರಿ, ಡಾ. ಪ್ರಕಾಶ್ ಕುಮಠಳ್ಳಿ, ಸೇರಿದಂತೆ ಇತರ ವೈದ್ಯರು, ಔಷಧಿ ವ್ಯಾಪಾರಸ್ಥರು, ಆಸ್ಪತ್ರೆಗೆ ಸಿಬ್ಬಂದಿ, ಅಂಬುಲೆನ್ಸ್, ನರ್ಸಿಂಗ್, ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


