ಅಥಣಿ: ತಾಲ್ಲೂಕು ಆಡಳಿತದಿಂದ ತಹಶೀಲ್ದಾರ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಅಂಗವಾಗಿ ಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜುಗಳ ಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಸಿದ್ರಾಯ ಭೋಸಗಿ , ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು. ಆಗಸ್ಟ್ 15ರಂದು ಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಎಲ್ಲ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದು ನಮ್ಮ ರಾಷ್ಟ್ರೀಯ ಹಬ್ಬವಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಆಚರಿಸಿ ಯಶಸ್ವಿಗೊಳಿಸೋಣ” ಎಂದು ಕರೆ ನೀಡಿದರು.
ಈ ವೇಳೆ ಪ್ರಕಾಶ್ ಅಂಬೇಡ್ಕರ್ ಬ್ರಿಗೇಡ್ನ ತಾಲ್ಲೂಕು ಅಧ್ಯಕ್ಷ ಮಾಂತೆಶ ಬಾಡಗಿ ಮಾತನಾಡಿ ಪ್ರತಿ ವರ್ಷ ಭೋಜರಾಜ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಈ ಕ್ರೀಡಾಂಗಣವು ಸಾರ್ವಜನಿಕರ ಆಟದ ಮೈದಾನವಾಗಿದ್ದು, ಅದನ್ನು ಸಾರ್ವಜನಿಕ ಮೈದಾನ ಎಂದು ಘೋಷಿಸಿ, ಅದರ ಸುತ್ತ ಹಾಕಿರುವ ಬೇಲಿಯನ್ನು ತೆಗೆದು ಮಕ್ಕಳಿಗೆ ಆಟವಾಡಲು ಹಾಗೂ ವಾಯು ವಿಹಾರಕ್ಕೆ ಅವಕಾಶ ಮಾಡಿಕೊಡಬೇಕು. ಅಲ್ಲದೆ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವಗಳನ್ನು ಪದವಿ ಕಾಲೇಜು ಅಥವಾ ಎಸ್.ಎಸ್.ಎಂ.ಎಸ್. ಕಾಲೇಜು ಮೈದಾನದಲ್ಲಿ ಆಚರಿಸಿದರೆ ಸೂಕ್ತ ವಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ.ಸಂತೋಷ್ ಹಳ್ಳೂರ, ಪಿಎಸ್ ಆಯ್ ಗಿರಿಮಲ್ಲಪ್ಪ ಉಪ್ಪಾರ, ವೆಂಕಟೇಶ ಕುಲಕರ್ಣಿ, ಎಂ. ಆರ್. ಮುಂಜೆ,ಮಲ್ಲಿಕಾರ್ಜುನ ನಾಮದಾರ, ನಿಂಗಣ್ಣ ಬಿರಾದರ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಹಾಗೂ ಸಂಘ ಸಂಸ್ಥೆಯವರು ಪಾಲ್ಗೊಂಡಿದ್ದರು.