ಬಳ್ಳಾರಿ: ಮಾ.28.: ಬಸವ ಪೂರ್ವ ಯುಗವು ಸಾಂಸ್ಕೃತಿಕ, ಧಾರ್ಮಿಕವಾಗಿ ವೈವಿಧ್ಯಮಯವಾಗಿದ್ದರೂ ಸಾಮಾಜಿಕ ಅಸಮಾನತೆಯಿಂದ ಕೂಡಿದ ಕಾಲವಾಗಿತ್ತು.ಆ ಕಾಲದ ಶಿವಶರಣರಿಂದ ರಚನೆಯಾದ ಸಾಹಿತ್ಯದಿಂದ ವಚನ ಸಾಹಿತ್ಯಕ್ಕೆ ಸ್ವಷ್ಟ ರೂಪ ಸಿಗಲು ಸಾಧ್ಯವಾಯಿತು .ದೊರಕಿರುವ ವಚನಕಾರರ ವಚನಗಳಲ್ಲಿ ಪ್ರಭುತ್ವದ ನಿರಾಕರಣೆ,ವೈಚಾರಿಕ ಮನೋಭಾವ,ಆಳವಾದ ಸಾಮಾಜಿಕ ಚಿಂತನೆಯ ತುಡಿತಗಳಿವೆ.ಆದ್ಯ ವಚನಕಾರ ಜೇಡರ ದಾಸಿಮಯ್ಯ,ಕೊಂಡ ಗುಳಿ ಕೇಶಿರಾಜ,ಶಂಕರ ದಾಸಿಮಯ್ಯ,ಡೋಹರ ಕಕ್ಕಯ್ಯ,ಮಾದಾರ ಚನ್ನಯ್ಯ,ಕೆಂಭಾವಿ ಭೋಗಣ್ಣ,ತೆಲುಗು ಜೊಮ್ಮಣ್ಣ,ನಿಜಗುಣದೇವ,ಚಂದಿಮರಸ, ಸಕಲೇಶ ಮಾದರಸ ಮುಂತಾದ ಶಿವಶರಣರು ಚಲನಶೀಲ ಸಮಾಜದ ನಿರ್ಮಾಣ, ದಮನಿತರನು ಮೇಲೆತ್ತಲು ಶ್ರಮಿಸಿ ,ಜೀವನ ಮೌಲ್ಯಗಳನು ನವೀಕರಿಸುವ ಕಾರ್ಯ ಕೈಕೊಂಡರೆಂದು ಮೋಕಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಂ.ಸೋಮಶೇಖರ ಅಭಿಪ್ರಾಯಪಟ್ಟರು.
ಅವರು ಕೌಲ್ ಬಜಾರಿನ ರಾಯಲ್ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ‘ ಜೋಳದರಾಶಿ ದೊಡ್ಡನಗೌಡರ ದತ್ತಿ,ಜೋಳದರಾಶಿ ಚನ್ನವೀರನಗೌಡರ ದತ್ತಿ ಹಾಗೂ ಪ್ರೊ.ಕೆ.ಬಿ.ಹನುಮಂತರಾಯರ ದತ್ತಿ ಕಾರ್ಯಕ್ರಮದಲ್ಲಿ ‘ ಬಸವ ಪೂರ್ವ ಯುಗದ ಶಿವಶರಣರು ‘ ಎಂಬ ವಿಷಯದ ಕುರಿತು ಮಾತನಾಡಿದರು.
ಬಸವ ಪೂರ್ವ ಕಾಲಕ್ಕೂ ಬಸವಣ್ಣನವರ ಕಾಲದ ಸಾಮಾಜಿಕ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ.ವಚನವೆಂದರೆ ಸಂಸ್ಕೃತಿ,ವಿಜ್ಞಾನ, ಸಾಹಿತ್ಯ ಮತ್ತು ಚಳವಳಿಯ ಅರ್ಥಗಳ ಜೊತೆಗೆ ಅನೇಕ ಆಶಯಗಳನ್ನು ಹೊಂದಿದೆ.ಜನ ಸಾಮಾನ್ಯರಿಗಾಗಿ ಸಾಮಾನ್ಯರು ರಚಿಸಿದ್ದು ವಚನ ಸಾಹಿತ್ಯ.ಅದು ತನ್ನ ಭಾಷೆ ಮತ್ತು ವಸ್ತುವಿನಿಂದ ಗಮನ ಸೆಳೆದು ನಡುಗನ್ನಡದಿಂದ ದೇಶೀಯತೆಗೆ ಸಾಗಿ ಸಮ ಸಮಾಜ ಕಟ್ಟುವ ಹಂಬಲ ಹೊಂದಿತ್ತು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಇತಿಹಾಸ ಸಂಶೋಧಕ ಡಾ.ಸಿ.ಎಂ.ವೀರಭದ್ರಯ್ಯ ಮಾತನಾಡಿ,ವಚನ ಯುಗದ ಪೂರ್ವದಲ್ಲಿಯೇ ತಮಿಳುನಾಡಿನಲ್ಲಿ ತಿರುಮೂಲರು,ಅರವತ್ಮೂರು ಜನ ಪುರಾತನರು,ನಯನ್ಮಾರರು,ಸುಂದರರು ಶಿವನನ್ನು ಆರಾಧಿಸುವ ಶರಣರಾಗಿದ್ದರು.ನಂದಿಗ್ರಾಮ,ಬಳ್ಳಿಗಾ ವೆ,ಐಹೊಳೆ,ಆಂಧ್ರ,ತೆಲಂಗಾಣ ಸೇರಿದಂತೆ ದೊರೆತ ಶಾಸನಗಳಲ್ಲಿ ಶಿವಭಕ್ತ,ಮಹೇಶ್ವರ,ಪರಮಮಹೇಶ್ವರ ಎಂಬ ಉಲ್ಲೇಖಗಳಿವೆ.ಶೈವ ಪಂಥದ ಪಾಶುಪಾತರು,ಕಾಳಾಮುಖರು,ಕಾಪಾಲಿಕರು, ಲಕುಲೀಶ,ನಾಥ ಪಂಥ ಹೀಗೆ ದಕ್ಷಿಣ ಭಾರತದಲ್ಲಿ ಶೈವ ಸಿದ್ಧಾಂತದ ಪಾರಮ್ಯವಿತ್ತು ಎಂದು ಹೇಳಿದರು.
ರಾಯಲ್ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಫರ್ಜಾನಾ ಬೇಗಂ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಕೆ.ಪಂಪನಗೌಡ,ನವ ಕರ್ನಾಟಕ ಯುವಶಕ್ತಿ ರಾಜ್ಯ ಕಾರ್ಯಾಧ್ಯಕ್ಷ ಸಿದ್ಮಲ್ ಮಂಜುನಾಥ,ಜಿ.ಗುರುಲಿಂಗಪ್ಪ,ಜೆ.ಎಂ. ಶಿವರುದ್ರಯ್ಯ ಉಪನ್ಯಾಸಕರಾದ ಎ.ಮಲ್ಲಿಕಾರ್ಜುನ,ಶಶಿಧರ,ರವಿಶರ್ಮ ಉಪಸ್ಥಿತರಿದ್ದರು.
ರಂಗ ಕಲಾವಿದ ಎಂ.ದಕ್ಷಿಣಾಮೂರ್ತಿ ಗೀತ ಗಾಯನ ಪ್ರಸ್ತುತಪಡಿಸಿದರು.
ಪ್ರಶಿಕ್ಷಣಾರ್ಥಿ ಸುಮಿತ್ರಾ ನಿರೂಪಿಸಿದರು.ಸವಿತಾ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ದತ್ತಿದಾನಿಗಳನ್ನು ಗೌರವಿಸಿ ಸನ್ಮಾನಿಲಾಯಿತು.


