ಬಳ್ಳಾರಿ, ಏಪ್ರಿಲ್ 04.: ನಗರದ ಕೋಟೆ ಪ್ರದೇಶದಲ್ಲಿರುವ ಆಲ್ ಸೌಲ್ಸ್ ತೆಲುಗು ಚರ್ಚಿನಲ್ಲಿ ಗುಡ್ ಫ್ರೈಡೇ ಅಂಗವಾಗಿ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ಸಂದೇಶ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.
ಈ ಸಂದರ್ಭದಲ್ಲಿ ರೆವರೆಂಡ್ ಐಕ್ಯಾಥ ರಾವ್ ಮತ್ತು ರೆವರೆಂಡ್ ಅಫ್ಸಾಲಮ್ ಬಂಡಿ ಅವರು ಭಕ್ತಾದಿಗಳಿಗೆ ಯೇಸು ಕ್ರಿಸ್ತನ ತ್ಯಾಗ, ಪ್ರೀತಿ ಹಾಗೂ ಕ್ಷಮೆಯ ಸಂದೇಶವನ್ನು ವಿವರಿಸಿದರು. ಯೇಸು ಕ್ರಿಸ್ತನು ಮಾನವಕೋಟಿಯ ಪಾಪಗಳಿಗಾಗಿ ಶಿಲುಬೆಯಲ್ಲಿ ಪ್ರಾಣತ್ಯಾಗ ಮಾಡಿದ ದಿನವೇ ಗುಡ್ ಫ್ರೈಡೇ ಎಂದು ಅವರು ತಿಳಿಸಿದರು.
ಗುಡ್ ಫ್ರೈಡೇ ಕ್ರೈಸ್ತ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದ್ದು, ಈ ದಿನವನ್ನು ದುಃಖದ ದಿನವಾಗಿ ಆಚರಿಸಿದರೂ, ಮಾನವೀಯ ಮೌಲ್ಯಗಳನ್ನು ಸಾರುವ ಮಹತ್ವದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದ ಅಂಗವಾಗಿ
ಚರ್ಚಿನಲ್ಲಿ ವಿಶೇಷ ಪ್ರಾರ್ಥನೆಗಳು, ಉಪವಾಸ ಆಚರಣೆಗಳು ಹಾಗೂ ಶಿಲುಬೆಯ ಆರಾಧನೆ ನಡೆಯಿತು. ಕೆಲ ಭಕ್ತರು ಯೇಸು ಕ್ರಿಸ್ತನ ಶಿಲುಬೆಯ ಮಾರ್ಗವನ್ನು ಸ್ಮರಿಸುವ ‘ವೇ ಆಫ್ ದ ಕ್ರಾಸ್’ ಆಚರಣೆಗೂ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧಾರ್ಮಿಕ ಮುಖಂಡರು, “ಪ್ರೇಮಿಸಿ, ಕ್ಷಮಿಸಿ, ಸಹಿಸಿ” ಎಂಬ ಯೇಸು ಕ್ರಿಸ್ತನ ಸಂದೇಶವು ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದ್ದು, ದ್ವೇಷದ ಬದಲು ಪ್ರೀತಿ ಮತ್ತು ಹಿಂಸೆಯ ಬದಲು ಕ್ಷಮೆಯನ್ನು ಆಯ್ಕೆ ಮಾಡಿಕೊಂಡು ಯಾವುದೇ ಸಂದರ್ಭದಲ್ಲಿಯೂ ಸಹ ಸಹನೆಯನ್ನು ಕಳೆದುಕೊಳ್ಳಬೇಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ರೈಸ್ತ ಸಮಾಜದ ಹಲವಾರು ಭಕ್ತರು ಭಾಗವಹಿಸಿ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು.


