ನವದೆಹಲಿ, ಏಪ್ರಿಲ್ 03: ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಗೆ ಅಂಗೀಕಾರ ದೊರೆಯಿತು. ಇಂದು ರಾಜ್ಯಸಭೆ(Rajya Sabha)ಯಲ್ಲಿ ಮಸೂದೆ ಮಂಡನೆಯಾಗಲಿದೆ. ಮಸೂದೆಯ ಪರವಾಗಿ 288 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 232 ಮತಗಳು ಚಲಾವಣೆಯಾದವು. ಸದನವು ವಿರೋಧ ಪಕ್ಷದ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತದ ಮೂಲಕ ತಿರಸ್ಕರಿಸಿತು. ವಿರೋಧ ಪಕ್ಷದ ಸಂಸದ ಎನ್.ಕೆ. ಪ್ರೇಮಚಂದ್ರನ್ ಅವರ ತಿದ್ದುಪಡಿ ಪ್ರಸ್ತಾವನೆಯ ಮೇಲೆ ಬೆಳಗಿನ ಜಾವ 1.15 ಕ್ಕೆ ಮತದಾನ ನಡೆಯಿತು.
ಬುಧವಾರ ಮಧ್ಯಾಹ್ನ ರಿಜಿಜು ಮಸೂದೆಯನ್ನು ಮಂಡಿಸುವ ಮೂಲಕ ಚರ್ಚೆಯನ್ನು ಪ್ರಾರಂಭಿಸಿದರು. ಮಸೂದೆಯ ಉದ್ದೇಶ ಯಾವುದೇ ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದಲ್ಲ, ಬದಲಾಗಿ ವಕ್ಫ್ ಆಸ್ತಿಗಳನ್ನು ನಿರ್ವಹಿಸುವುದು ಎಂದು ಅವರು ಹೇಳಿದರು. ಹಳೆಯ ಕಾನೂನಿನ ಅತ್ಯಂತ ವಿವಾದಾತ್ಮಕ ಸೆಕ್ಷನ್ 40 ಅನ್ನು ಉಲ್ಲೇಖಿಸಿದ ರಿಜಿಜು, ಈ ಕಠಿಣ ನಿಬಂಧನೆಯ ಅಡಿಯಲ್ಲಿ, ವಕ್ಫ್ ಮಂಡಳಿಯು ಯಾವುದೇ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಬಹುದು ಎಂದು ಹೇಳಿದರು.
ನ್ಯಾಯಮಂಡಳಿ ಮಾತ್ರ ಅದನ್ನು ರದ್ದುಗೊಳಿಸಬಹುದು ಅಥವಾ ಮಾರ್ಪಡಿಸಬಹುದು. ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಅದನ್ನು ತೆಗೆದುಹಾಕಲಾಗಿದೆ. ಮುಸ್ಲಿಂ ಸಮುದಾಯದ ಯಾವುದೇ ಭೂಮಿಯನ್ನು ಕಸಿದುಕೊಳ್ಳುವುದಿಲ್ಲ. ವಿರೋಧ ಪಕ್ಷವು ದಾರಿತಪ್ಪಿಸುತ್ತಿದೆ ಎಂದು ಹೇಳಿದ್ದರು.