ಬೆಂಗಳೂರು, ಅಕ್ಟೋಬರ್ 6: ಕರ್ನಾಟಕ ಜಾತಿ ಗಣತಿ ಸಮೀಕ್ಷೆಗೆ ನಾಳೆ ಕೊನೆಯ ದಿನವಾಗಿದ್ದು, ಅವಧಿ ವಿಸ್ತರಣೆ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ ಸುಳಿವು ನೀಡಿದ್ದಾರೆ. ಮುಖ್ಯಮಂತ್ರಿಗಳು ಕೊಪ್ಪಳದಿಂದ ಮರಳಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಸಮೀಕ್ಷೆಯ ಪ್ರಗತಿ ಶೇ 70-80 ರಷ್ಟಾಗಿದೆ. ತಾಂತ್ರಿಕ ಹಾಗೂ ಗಣತಿದಾರರ ಗೊಂದಲಗಳಿಂದ ಸ್ವಲ್ಪ ವಿಳಂಬ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ವಿವಿಧ ರಾಜಕೀಯ ನಾಯಕರು ಜಾತಿ ಗಣತಿ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ವಿ ಸೋಮಣ್ಣನವರು ಸಮೀಕ್ಷೆಯ ಅವಶ್ಯಕತೆ ಬಗ್ಗೆ ಪ್ರಶ್ನಿಸಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಇತರರು ಪ್ರಶ್ನೆಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸರ್ಕಾರವು ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ, ಹಿಂದಿನ ಸಮೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ. ಅಭಿಪ್ರಾಯಗಳು ಎಲ್ಲರಿಗೂ ಇರುತ್ತವೆ. ಒಂದಿಬ್ಬರ ಅಭಿಪ್ರಾಯ ಕೇಳಿಕೊಂಡು ಏನೂ ಮಾಡಲಾಗದು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.


