ಬೆಳಗಾವಿ: ಇಲ್ಲಿನ ಶಿವಬಸವನಗರ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ ೨೮೭ನೇ ಶಿವಾನುಭವ ಹಾಗೂ ಡಾ. ಬಸವರಾಜ ಜಗಜಂಪಿ ಅವರ ಅಭಿನಂದನ ಸಮಾರಂಭವು ಇದೇ ಜೂನ್ ೯ರಂದು ಸೋಮವಾರ, ಸಾಯಂಕಾಲ ೬ ಗಂಟೆಗೆ ಜರುಗುವುದು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜ್ಯ ಶ್ರೀ ಮ.ನಿ.ಪ್ರ. ಗುರುಸಿದ್ಧ ಮಹಾಸ್ವಾಮಿಗಳು ವಹಿಸಲಿದ್ದು, ಘೋಡಗೇರಿ ಶಿವಾನಂದಮಠದ ಪೂಜ್ಯ ಶ್ರೀ ಮಲ್ಲಯ್ಯ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಡಾ. ರಾಮಕೃಷ್ಣ ಮರಾಠ ಅವರು ಅಭಿನಂದನ ನುಡಿಗಳನ್ನು ಆಡುವರು. ಡಾ. ಬಸವರಾಜ ಜಗಜಂಪಿ ಅವರಿಗೆ ಅಭಿನಂದನೆ ಮತ್ತು ಅವರ ಅಭಿನಂದನ ಗ್ರಂಥ ಪರಿಣತಮತಿ ಲೋಕಾರ್ಪಣೆಯಾಗುವುದು.
ಇದೇ ಸಂದರ್ಭದಲ್ಲಿ ಡಾ. ಮಹೇಶ ಗುರನಗೌಡರ ಮತ್ತು ಪ್ರಕಾಶ ಗಿರಿಮಲ್ಲನವರ ಅವರ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ಶ್ರೀ ಕಾರಂಜಿಮಠದ ಕುಮಾರೇಶ್ವರ ಸಂಗೀತ ಪಾಠಶಾಲೆಯ ಮಕ್ಕಳಿಂದ ಪ್ರಾರ್ಥನೆ ಜರುಗುವುದು ಎಂದು ಶ್ರೀಮಠದದಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.