ಬೆಂಗಳೂರು, ಅಕ್ಟೋಬರ್ 9: ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಬರುತ್ತಿದೆ. ಈ ವರ್ಷ 70ನೇ ಕನ್ನಡ ರಾಜ್ಯೋತ್ಸವ ಆಚರಿಸಲ್ಪಡುತ್ತಿದ್ದು 70 ಮಂದಿ ಅರ್ಹ ಸಾಧಕರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಅಚ್ಚರಿಯ ವಿಚಾರವೆಂದರೆ, ಇದೇ ಮೊದಲ ಬಾರಿಗೆ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಘೋಷಣೆ ಮಾಡಿದ್ದಾರೆ.
70 ಮಂದಿ ಅರ್ಹ ಗಣ್ಯರಿಗೆ ಈ ವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಆಯ್ಕೆ ಸಮಿತಿಯು ಅರ್ಹರ ಪಟ್ಟಿ ಸಿದ್ಧಪಡಿಸಲಿದೆ. ಈಗಾಗಲೇ ಇಲಾಖೆಗೆ ಸಲ್ಲಿಕೆಯಾಗಿರುವ ಸ್ವಯಂ ಅರ್ಜಿಗಳ ಬಗ್ಗೆ ನಿರ್ಧಾರವನ್ನು ಆಯ್ಕೆ ಸಮಿತಿಯೇ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು 5 ಲಕ್ಷ ರೂ. ನಗದು ಬಹುಮಾನ, 25 ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣೆಗೆಗಳನ್ನು ಒಳಗೊಂಡಿರಲಿದೆ.