ಬೆಂಗಳೂರು, ಆಗಸ್ಟ್ 18: ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ಗೆ ಇಂದು ಇಡಿ ಶಾಕ್ ನೀಡಿದ್ದು, ಶಿವಶಂಕರಪ್ಪನಿವಾಸ ಸೇರಿ ಒಟ್ಟು 13 ಕಡೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗುತ್ತಿದೆ. ಕೆಪಿಎಸ್ಸಿ ಕಚೇರಿ ಮೇಲೂ, ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದವರ ಮನೆಗಳ ಮೇಲೂ ರೇಡ್ ನಡೆದಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮತ್ತು ಕಲಬುರಗಿ ಜಿಲ್ಲೆ ಆಳಂದದಲ್ಲಿರುವ ಶಿವಶಂಕರಪ್ಪ ಅವರ ನಿವಾಸದ ಮೇಲೂ ಮನಿಲ್ಯಾಂಡ್ರಿಂಗ್ ಆಗಿರುವ ಬಗ್ಗೆ ಅನುಮಾನ ಹಿನ್ನೆಲೆ ದಾಳಿ ಮಾಡಲಾಗಿದೆ.
ಇಡಿ ಅಧಿಕಾರಿಗಳಿಂದು KPSC ಕಚೇರಿ ಸೇರಿ, ಕರ್ನಾಟಕ, ಗುಜರಾತ್ನ ಅಹಮದಾಬಾದ್ ಸೇರಿ 21ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಪ್ಲಾಟ್ ಮೇಲೂ ದಾಳಿ ನಡೆಸಲಾಗಿದ್ದು, KPSC ಸದಸ್ಯೆ ಶಾಂತಾ ಹೊಸಮನಿ ಮನೆ ಮೇಲೂ ದಾಳಿ ನಡೆದಿದೆ. ಇದೇ ವೇಳೆ ಮಧ್ಯವರ್ತಿಗಳಿಗೂ ಶಾಕ್ ನೀಡಿದ್ದಾರೆ, ಅಷ್ಟೇ ಅಲ್ಲದೆ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದವರ ಮನೆಗಳ ಮೇಲೂ ದಾಳಿ ನಡೆದಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ಇಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಾರವಾರ, ಕಲಬುರಗಿ, ಬೆಳಗಾವಿ ಸೇರಿದಂತೆ ಅಹಮದಾಬಾದ್ನಲ್ಲಿಯೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಅಭ್ಯರ್ಥಿಗಳಿಂದ 70-80 ಲಕ್ಷ ಲಂಚ ಪಡೆದಿರೋ ಆರೋಪ ಕೇಳಿಬಂದಿತ್ತು. ಮಧ್ಯವರ್ತಿಗಳ ಲಂಚದ ಬೇಡಿಕೆ ಕುರಿತು 4 FIR ಕೂಡ ದಾಖಲಾಗಿದ್ದು, ಲಂಚದ ಬೇಡಿಕೆಯ ಆಡಿಯೋ ಸಾಕ್ಷ್ಯ ಇಡಿಗೂ ಸಲ್ಲಿಕೆಯಾಗಿತ್ತು. ಹೀಗಾಗಿ ನೇಮಕಾತಿ ಅಕ್ರಮದ ಹಣದ ಜಾಡು ಹಿಡಿದು ಬೃಹತ್ ಶೋಧಕ್ಕೆ ಮುಂದಾಗಿರುವ ಇಡಿ, ದಾಖಲೆ, ಡಿಜಿಟಲ್ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದೆ ಎನ್ನಲಾಗುತ್ತಿದೆ.
ಪಶು ವೈದ್ಯರ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪ ಹಿನ್ನೆಲೆ ಶಿವಶಂಕರಪ್ಪರನ್ನು ಜು.13ರಂದು ರಾಜ್ಯಪಾಲರು ಅಮಾನತು ಮಾಡಿದ್ದರು. ಇದಾದ ಬಳಿಕ ಪ್ರಕರಣದ ಬಗ್ಗೆ ತನಿಖೆಯನ್ನು ಸಿಐಡಿ ಟೀಂ ನಡೆಸುತ್ತಿದೆಯಾದರೂ, ಅಕ್ರಮದ ಹಣ ಬೇರೆ ಕಡೆಗೆ ವರ್ಗಾವಣೆ ಶಂಕೆ ಹಿನ್ನೆಲೆ ಇಡಿ ದಾಳಿ ನಡೆದಿದೆ. ನಾಲ್ಕು ವಾಹನಗಳಲ್ಲಿ ವಿಧಾನಸೌಧ ಬಳಿಯ ಕೆಪಿಎಸ್ಸಿ ಕೇಂದ್ರ ಕಚೇರಿಗೆ 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. 2019ರ ಸೆಪ್ಟೆಂಬರ್ 3ರಂದು ಕೆಪಿಎಸ್ಸಿ ಸದಸ್ಯರಾಗಿ ನೇಮಕವಾಗಿದ್ದ ಶಿವಶಂಕರಪ್ಪ, 2021ರ ಏಪ್ರಿಲ್ 3ರಂದು ಕೆಪಿಎಸ್ಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಏಪ್ರಿಲ್ 4ರಂದು ಅಧಿಕೃತ ಆದೇಶವಾಗಿತ್ತು. ಅಂದಿನಿಂದ 2026ರ ಜು.13ರ ವರೆಗೆ ಅವರೇ ಅಧ್ಯಕ್ಷರಾಗಿದ್ದರು.