ಸತ್ಯ ಘಟನೆ ಆಧಾರಿತ  ಹೊಸಬರ  ಚಿತ್ರ 1979 

Ravi Talawar
ಸತ್ಯ ಘಟನೆ ಆಧಾರಿತ  ಹೊಸಬರ  ಚಿತ್ರ 1979 
WhatsApp Group Join Now
Telegram Group Join Now
      ಹೊಸ ಪ್ರತಿಭೆಗಳೇ ಸೇರಿ ಸಿದ್ದಪಡಿಸಿರುವ ‘1979’ ಚಿತ್ರದ ಪೋಸ್ಟರ್‌ನ  ಆ ದಿನಗಳು ಖ್ಯಾತಿಯ ಚೇತನ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
     ಕ್ರೀಡಾಪಟು, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಬಿ.ಎಂ.ಶ್ರೀನಿವಾಸ್, ಬೀರಮಾನಹಳ್ಳಿ ಇವರು ಅಪ್ಪನ ಸ್ಮರಣಾರ್ಥ ಮನಂ ಮೂವೀ ಮೇಕರ‍್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಪುಷ್ಪರಾಜ್. ಎಲ್ಲೂ ಕೇಳಿರದ ಕಥೆ ಎಂದು ಇಂಗ್ಲೀಷ್‌ದಲ್ಲಿ ಅಡಿಬರಹ ಇರಲಿದೆ.
     ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜ್ಜು, ಪ್ರಾಣ್ವಿ, ಸುಜಿತ್, ಅಮೃತ ಇವರುಗಳು ಯೌವ್ವನ ಹಾಗೂ ಮುಪ್ಪಿನವರೆಗೂ ನಟನೆ ಮಾಡಿರುವ ಅನುಭವಗಳನ್ನು ಹಂಚಿಕೊಂಡರು. ಉಳಿದಂತೆ ದುರ್ಗಾ, ಪ್ರೀತಿ, ತಕ್ಷಾರಾಮ್, ನಿರಂಜನ್, ಧನುಷ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಂಗೀತ ಜಸ್ವಂತ್ ಪಸುಪುಲೇಟಿ, ಛಾಯಗ್ರಹಣ ಚಲಾಕಿ ಚರಣ್, ಸಂಕಲನ ವಸಂತ್, ಕಲರಿಸ್ಟ್ ದೀಪಕ್ ಕೊಂಡೂರು. ಕೋಲಾರ, ತೇರಳ್ಳಿ, ಯರಗೋಳ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
     ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು “1904 ರಿಂದ 1979ರ ವರೆಗೆ ವೆಸ್ಟ್‌ಬೆಂಗಾಲ್‌ದಲ್ಲಿ ನಡೆದಂತ ಸತ್ಯ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಸೃಷ್ಟಿಸಿದ  ಕಾಲ್ಪನಿಕ ಕಥೆಯಲ್ಲಿ (ಫಿಕ್ಷನಲ್ ಸ್ಟೋರಿ ಬೇಸಡ್ ಆನ್ ಟ್ರೂ ಈವೆಂಟ್ಸ್) ಒಂದಷ್ಟು ಅಂಶಗಳನ್ನು ಕಮರ್ಷಿಯಲ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಪಿರಿಯಾಡಿಕ್ ಡ್ರಾಮಾ ಕಥೆಯಲ್ಲಿ ಕೆಲವು ಪಾತ್ರಗಳನ್ನು ಸೃಷ್ಟಿಸಲಾಗಿದೆ. ನಿರಾಶ್ರಿತ ಒಂದು ಸಮುದಾಯದವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಹೋರಾಟ ಮಾಡುತ್ತಾರೆ. ಅಲ್ಲಿನ ದಬ್ಬಾಳಿಕೆ ವಿರುದ್ದ ಕ್ರಾಂತಿ ಹೇಗೆ ಶುರುವಾಗುತ್ತದೆ ಎಂಬುದನ್ನು ಹೇಳಲಾಗಿದೆ” ಎಂದು ಪುಷ್ಪರಾಜ್ ಮಾಹಿತಿ ಬಿಚ್ಚಿಟ್ಟರು.
      ಆ ದಿನಗಳು ಚೇತನ್ ಮಾತನಾಡುತ್ತಾ “ಹೊಸಬರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆಂದು ಗೊತ್ತಿತ್ತು. ಆದರೆ ಇಷ್ಟು ಪ್ರತಿಭಾವಂತರು ಎಂಬುದು ತುಣುಕುಗಳನ್ನು ನೋಡಿದಾಗ ತಿಳಿಯಿತು. ಇವರ ವಿಭಿನ್ನ ಪ್ರಯೋಗ ಕನ್ನಡ ಚಿತ್ರರಂಗಕ್ಕೆ ಹೊಸತನ ನೀಡಿದೆ. ನಿರಾಶ್ರಿತರ ಕಥೆಗಳು ಕನ್ನಡದಲ್ಲಿ ಹೆಚ್ಚು ಬಂದಿಲ್ಲದಿರಬಹುದು. ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿಶ್ವದಾದ್ಯಂತ ಪ್ರಸರಿಸುತ್ತಿದೆ. ಅದರಲ್ಲೂ ಪ್ಯಾನ್ ಇಂಡಿಯಾ ಕಥೆಗಳನ್ನು ಕರ್ನಾಟಕಕ್ಕೆ ತಂದು, ಇತಿಹಾಸದಲ್ಲಿ ಮುಚ್ಚಿ ಹಾಕಿರುವ ವಿಷಯಗಳನ್ನು ಜನತೆಗೆ ಪರಿಚಯಿಸುವ ಶ್ರಮ ನಿಜಕ್ಕೂ ಶ್ಲಾಘನೀಯವಾಗಿದೆ. ಕನ್ನಡ ಚಿತ್ರರಂಗವು ಕಂಟೆಂಟ್‌ನಿಂದ ಬೆಳೀತಾ ಇದೆ. ನಿಮ್ಮಗೆಲ್ಲರಿಗೂ ಮಂಗಳವಾಗಲಿ” ಎಂದು ಹಾರೈಸಿದರು.
WhatsApp Group Join Now
Telegram Group Join Now
Share This Article