ಚಿತ್ತಾಪುರದಲ್ಲಿ ನ.2ರಂದು RSS​ ಪಥಸಂಚಲನಕ್ಕಾಗಿ ಡಿಸಿಗೆ ಹೊಸ ಅರ್ಜಿ

Ravi Talawar
ಚಿತ್ತಾಪುರದಲ್ಲಿ ನ.2ರಂದು RSS​ ಪಥಸಂಚಲನಕ್ಕಾಗಿ ಡಿಸಿಗೆ ಹೊಸ ಅರ್ಜಿ
WhatsApp Group Join Now
Telegram Group Join Now

ಕಲಬುರಗಿ, ಅಕ್ಟೋಬರ್​ 20: ನ.2ರಂದು ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ನಡೆಸಲು ಅನುಮತಿ ವಿಚಾರವಾಗಿ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠದ ಸೂಚನೆಯಂತೆ ಹೊಸ ಅರ್ಜಿಯನ್ನ ಆರೆಸ್ಸೆಸ್​ ಮುಖಂಡರು ಸಲ್ಲಿಕೆ ಮಾಡಿದ್ದಾರೆ. ಮನವಿ ಪತ್ರ ಖುದ್ದಾಗಿ ನೀಡಲು ಜಿಲ್ಲಾಧಿಕಾರಿ ಕಚೇರಿ ಮತ್ತು ಅವರ ಸರ್ಕಾರಿ ನಿವಾಸಕ್ಕೆ RSS​ ಮುಖಂಡರು ತೆರಳಿದ್ದರು. ಆದರೆ ಡಿಸಿ ಸಿಗದ ಹಿನ್ನೆಲೆ ಸರ್ಕಾರಿ ನಿವಾಸದ ಸಿಬ್ಬಂದಿಯಿಂದ  ಜಿಲ್ಲಾಧಿಕಾರಿ ಆಪ್ತ ಸಹಾಯಕರಿಗೆ ಫೋನ್​ ಮಾಡಿಸಲಾಗಿದೆ. ಆಗ ಆಪ್ತ ಸಹಾಯಕ ಫೋನ್​​ ಕರೆ ಸ್ವಿಕರಿಸದ ಹಿನ್ನಲೆ ಜಿಲ್ಲಾಧಿಕಾರಿಯವರ ಅಧಿಕೃತ ಎರಡು ಇ-ಮೇಲ್​ ಗಳಿಗೆ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಕೋರಿ ಅರ್ಜಿ ರವಾನೆ ಮಾಡಲಾಗಿದೆ. ಜೊತೆಗೆ ಡಿಸಿ ಅವರ ಸರ್ಕಾರಿ ದೂರವಾಣಿ ಸಂಖ್ಯೆಗೆಗೂ ವಾಟ್ಸಾಪ್​​ ಮೂಲಕ ಅರ್ಜಿ ಕಳುಹಿಸಲಾಗಿದೆ.

ಚಿತ್ತಾಪುರದಲ್ಲಿ ನಡೆಯಬೇಕಿದ್ದ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್​ ನಾಗಯ್ಯ ಹಿರೇಮಠ ಆದೇಶ ಹೊರಡಿಸಿದ್ದರು. ಇದನ್ನ ಕಾರ್ಯಕರ್ತರು ಕೋರ್ಟ್​ ಮೊರೆ ಹೋಗಿದ್ದು, ಕಲಬುರಗಿ ಹೈಕೋರ್ಟ್ ಪೀಠಕ್ಕೆ ಜಿಲ್ಲಾ ಪ್ರಮುಖರಾದ ಅಶೋಕ್ ಪಾಟೀಲ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿತ್ತು. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಕೋರ್ಟ್​ ನ ಈ ಆದೇಶದ ಅನ್ವಯ ಈಗ ಮತ್ತೆ ಹೊಸ ಅರ್ಜಿ ಸಲ್ಲಿಕೆ ಮಾಡಲಾಗಿದೆ.

 

WhatsApp Group Join Now
Telegram Group Join Now
Share This Article