ಬಳ್ಳಾರಿ,ಆ.28 ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ಆಚರಿಸುತ್ತಿರುವ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ, ಆಗಸ್ಟ್ 29 ರಿಂದ 31 ರವರೆಗೆ ಬಂಡೀಪುರದಿಂದ ಬೀದರ್ ವರೆಗೆ 3 ದಿನಗಳ ಬೈಕ್ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮದ್ಯಪಾನ ಮತ್ತು ಮಾದಕ ವಸ್ತುಗಳ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ರಾಜ್ಯ ಸರ್ಕಾರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನರಾಜ್ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಣ್ಯ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಮತ್ತು ಎನ್.ಸಿ.ಸಿ. ಸಹಯೋಗದೊಂದಿಗೆ ಜಾಥಾ ಆಯೋಜಿಸಲಾಗುತ್ತಿದೆ.
ಸಾರ್ವಜನಿಕರಿಂದ ಆಯ್ಕೆಯಾದ 20 ಬೈಕ್ ಸವಾರರು ಭಾಗವಹಿಸಲಿದ್ದಾರೆ. ಈ ಜಾಥಾ ಕಾರ್ಯಕ್ರಮವು ಮಾರ್ಗದುದ್ದಕ್ಕೂ ರಾಜ್ಯದ ಪ್ರಮುಖ ಜಿಲ್ಲೆಗಳ ಮೂಲಕ ಸಾಗುತ್ತಾ ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಿದೆ.
ಈ ಬೃಹತ್ ಅಭಿಯಾನವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನರಾಜ್ ಸಿಂಗ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿ (ಅರಣ್ಯ) ಮನೋಜಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಆರ್.ರವಿಶಂಕರ್, ಬಂಡೀಪುರ ಹುಲಿ ಮೀಸಲು ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಸ್.ಪ್ರಭಾಕರನ್, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಹಾಗೂ ಇತರ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ರೂಪಿಸಿದ್ದಾರೆ.
ದೇಶಾದ್ಯಂತ 1 ಲಕ್ಷ ಕಿಲೋಮೀಟರ್ ಗಳಿಗೂ ಹೆಚ್ಚು ಪ್ರಯಾಣವನ್ನು ಸೈಕ್ಲಿಂಗ್ನಲ್ಲಿ ಕ್ರಮಿಸಿ ಅಪ್ರತಿಮ ಸಾಧನೆ ಮಾಡಿರುವ ರೈಡರ್ ನಂದಿನಿ ಮಿಥುನ್ ಈ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದು ವಿಶೇಷವಾಗಿದೆ. ಅವರು ತಮ್ಮ ಅಸಾಧಾರಣ ಅನುಭವಗಳು ಮತ್ತು ಬದ್ಧತೆಯಿಂದ ಸಾಮಾಜಿಕ ಉದ್ದೇಶಗಳ ಕಡೆಗೆ ಯುವಕರನ್ನು ಪ್ರೇರೇಪಿಸಲಿದ್ದಾರೆ.
ಈ ಗಣ್ಯರು ಶಾಲೆಗಳು, ಕಾಲೇಜುಗಳು, ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಭಾಗವಹಿಸಿ, ಯುವಜನತೆಗೆ ಉದ್ದೇಶಿತ ಜಾಗೃತಿ ಭಾಷಣಗಳು ಮತ್ತು ಸಂದೇಶಗಳನ್ನು ನೀಡಲಿದ್ದಾರೆ.
ಕರ್ನಾಟಕ ಸರ್ಕಾರವು ಈ ಜಾಥಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಮಾದಕ ದ್ರವ್ಯ ಮುಕ್ತ ಹಾಗೂ ಆರೋಗ್ಯಕರ ಸಮಾಜವನ್ನು ಸೃಷ್ಟಿಸುವ ಪ್ರಯತ್ನವಾಗಿ ಹಮ್ಮಿಕೊಳ್ಳುತ್ತಿದೆ.