ಹಸಿರು ಕ್ರಾಂತಿ ವರದಿ , ಜಮಖಂಡಿ;ನಗರದ ಅಭಿವೃದ್ಧಿ ಹಾಗೂ ಇಲ್ಲಿ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರ ದಿಂದ ಎಲ್ಲಾ ರೀತಿಯ ಸಹಕಾರ ಮಾಡುವದಾಗಿ ಮಾಜಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದರು. ಸೋಮವಾರ ನಗರಸಭೆಯ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ನಮ್ಮದೇ ಸರ್ಕಾರ ಇರುವದ ರಿಂದ ನಗರಕ್ಕೆ ಬೇಕಾಗುವ ಮೂಲ ಭೂತ ಸೌಲಭ್ಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಬೇಕಾಗುವ ಅನುದಾನವನ್ನು ಸರ್ಕಾರ ದಿಂದ ತರಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ತಿಳಿಸಿದರು. ನಗರದ ಅಭಿವೃದ್ಧಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಜರುಗಿಸಲಾಗುವದು, ನಗರಸಭೆಯ ಸಂಪನ್ಮೂಲ ಹಾಗೂ ಸರ್ಕಾರ ದಿಂದ ಬೇಕಾಗುವ ಹೆಚ್ಚುವರಿ ಅನುದಾನ ತರಿಸಿಕೊಂಡು ನಗರದ ಅಭಿವೃದ್ಧಿಗೆ ಕ್ರಮ ಜರುಗಿಸಲಾಗುವದು ಎಂದು ಹೇಳಿದರು.
ಉಳಿದಿರುವ ನಾಲ್ಕು ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಹಿರಿಯ ಸದಸ್ಯ ಈಶ್ವರ ವಾಳೆಣ್ಣವರ ಪದಗ್ರಹಣ ಮಾಡಿದರು. ನಗರಕ್ಕೆ ಕುಡಿಯುವ ನೀರು ಸರಬರಾಜು, ಸ್ವಚ್ಛತೆ ಹಾಗೂ ಬೀದಿದೀಪಗಳ ಅಳವಡಿಕೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಲು ಪ್ರಥಮ ಆಧ್ಯತೆ ನೀಡುವದಾಗಿ ತಿಳಿಸಿದರು. ತಮ್ಮನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಸರ್ವ ಸದಸ್ಯರಿಗೆ ಹಾಗೂ ಕಾಂಗ್ರೆಸ್ನ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದ ಅವರು ಕಡಿಮೆ ಸಮಯ ವಿದ್ದರೂ ಉತ್ತಮ ಕೆಲಸಗಳನ್ನು ಮಾಡುತ್ತೇನೆ ಸಾರ್ವಜನಿಕರಿಗೆ ನಗರಸಭೆಯಿಂದ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಮುಖಂಡರಾದ ಬಸವರಾಜ ನ್ಯಾಮಗೌಡ, ಮಹೇಶ ಕೋಳಿ, ಬಸವರಾಜ ಸಿಂಧೂರ, ಅರ್ಜುನ ದಳವಾಯಿ, ಪೌರಾಯುಕ್ತ ಜ್ಯೋತಿಗಿರೀಶ, ನಗರಸಭೆಯ ಸದಸ್ಯರು, ಸಿಬ್ಬಂದಿಗಳು ಇದ್ದರು.