ನವದೆಹಲಿ, ಆಗಸ್ಟ್ 11: ಅನುಮತಿ ಇಲ್ಲದೆ ಸಂಸತ್ ಭವನದಿಂದ ಕೇಂದ್ರ ಚುನಾವಣಾ ಆಯೋಗದವರೆಗೆ ಮೆರವಣಿಗೆ ಹೊರಟಿದ್ದ ಸಂಸದ ರಾಹುಲ್ ಗಾಂಧಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR) ವಿರುದ್ಧ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸದರ ಮೆರವಣಿಗೆ ನಡೆಯುತ್ತಿದೆ. ಸತ್ಯ ದೇಶದ ಮುಂದೆ ಇದೆ, ಈ ಹೋರಾಟ ರಾಜಕೀಯವಲ್ಲ,ಈ ಹೋರಾಟ ಸಂವಿಧಾನವನ್ನು ಉಳಿಸುವ ಹೋರಾಟ. ಈ ಹೋರಾಟ ಒಬ್ಬ ವ್ಯಕ್ತಿ, ಒಂದು ಮತಕ್ಕಾಗಿ ನಮಗೆ ಸ್ವಚ್ಛ, ಶುದ್ಧ ಮತದಾರರ ಪಟ್ಟಿ ಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಮತ ಕಳ್ಳತನದ ವಿರುದ್ಧ ಧ್ವನಿ ಎತ್ತುವುದು ಈ ಜಾಥಾದ ಉದ್ದೇಶವಾಗಿದೆ. ಎಸ್ಐಆರ್ ಸೋಗಿನಲ್ಲಿ ಬಿಹಾರದಲ್ಲಿ ಲಕ್ಷಾಂತರ ಮತದಾರರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವಾಗಿದೆ ಎಂದು ವಿರೋಧ ಪಕ್ಷ ಆರೋಪಿಸಿದೆ.