ಬೈಲಹೊಂಗಲ, ಸವದತ್ತಿ ತಾಲೂಕುಗಳಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಕ್ರಮವಹಿಸಿ: ಸಂಸದ ಜಗದೀಶ ಶೆಟ್ಟರ್

Hasiru Kranti
ಬೈಲಹೊಂಗಲ, ಸವದತ್ತಿ ತಾಲೂಕುಗಳಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಕ್ರಮವಹಿಸಿ: ಸಂಸದ ಜಗದೀಶ ಶೆಟ್ಟರ್
WhatsApp Group Join Now
Telegram Group Join Now

ಬೆಳಗಾವಿ: ಬೈಲಹೊಂಗಲ ಮತ್ತು ಸವದತ್ತಿ ತಾಲೂಕುಗಳಲ್ಲಿ ಕೋಲ್ಡ್ ಸ್ಟೋರೇಜ್ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನಬಾರ್ಡ್ ಅಧಿಕಾರಿಗಳು ಪರಿಶೀಲಿಸಿ ಕ್ರಮವಹಿಸಬೇಕು ಎಂದು ಸಂಸದರಾದ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ 2025–26ನೇ ಸಾಲಿನ ಮೂರನೇ ತ್ರೈಮಾಸಿಕ ಡಿಸಿಸಿ–ಡಿ.ಎಲ್.ಆರ್.ಸಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೈಲಹೊಂಗಲ ಮತ್ತು ಸವದತ್ತಿ ತಾಲೂಕುಗಳಲ್ಲಿ ಈ ಬಗ್ಗೆ ರೈತರಿಂದ ಬೇಡಿಕೆ ಇದ್ದು, ಇದರಿಂದ ರೈತರು ಬೆಳೆಯುವ ತರಕಾರಿ, ಹಣ್ಣುಗಳು ಹಾಗೂ ಬೆಳೆಗಳಿಗೆ ಅನುಕೂಲವಾಗಲಿದೆ ಎಂದರು. ಬೆಳಗಾವಿ ನಗರದ ಎಪಿಎಂಸಿ ಆವರಣದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾಗಿರುವ ಕೋಲ್ಡ್ ಸ್ಟೋರೇಜ್ ನಿಂದ ಉಂಟಾಗಿರುವ ಅನುಕೂಲಗಳ ಬಗ್ಗೆ ಮಾಹಿತಿ ಪಡೆದು, ಸೂಕ್ತವಾಗಿ ನಿರ್ವಹಿಸುವಂತೆ ಸೂಚಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಿ:
ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ತರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತಿದ್ದು, ಇದರಿಂದ ಅನೇಕ ವ್ಯಾಪಾರಸ್ತರು ಪ್ರಯೋಜನ ಪಡೆದಿದ್ದಾರೆ. ಹೀಗಾಗಿ, ಅಗತ್ಯವಿರುವ ವ್ಯಾಪಾರಿಗಳಿಗೆ ಈ ಯೋಜನೆಯಡಿ ಸಾಲ ದೊರಕಿಸಿಕೊಡಿ. ಜೊತೆಗೆ ಪಿಎಂ ವಿಶ್ವಕರ್ಮ, ಪಿಎಂ ಇಜಿಪಿ, ಎನ್.ಎಲ್.ಎಮ್., ಎಸ್.ಎಚ್.ಜಿ. ಯೋಜನೆಯಡಿ ಕೂಡ ಅರ್ಹರಿಗೆ ಸೌಲಭ್ಯಗಳನ್ನು ಒದಗಿಸಿ ಎಂದು ಸೂಚನೆ ನೀಡಿದರು.

ಇತ್ತೀಚೆಗೆ ಎಟಿಎಂ ದರೋಡೆ ಹಾಗೂ ಗ್ರಾಹಕರಿಗೆ ಅಪರಿಚಿತರಿಂದ ತೊಂದರೆಯಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿರುವುದರಿಂದ ಬ್ಯಾಂಕುಗಳು ಸಂಬಂಧಿಸಿದ ಎಟಿಎಮ್ ಕೇಂದ್ರಗಳಲ್ಲಿ ಸೆಕ್ಯುರಿಟಿ ಗಾರ್ಡ್ ಗಳನ್ನು ನಿಯೋಜಿಸಬೇಕು. ಗ್ರಾಹಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ಬಿ.ಸಿ. ಸಖಿಗಳನ್ನು ನಿಯೋಜಿಸಿ:
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಜಿಲ್ಲೆಯ 500 ಗ್ರಾ,ಮ ಪಂಚಾಯತಿಗಳಲ್ಲಿ ಪ್ರಸ್ತುತ 74 ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಬಿ.ಸಿ. ಸಖಿಗಳು (ಬ್ಯುಸಿನೆಸ್ ಕರೆಸ್ಪಂಡೆಂಟ್) ಇದ್ದು, ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಎನ್.ಆರ್.ಎಲ್.ಎಮ್. ಯೋಜನೆಯಡಿ ಬ್ಯಾಂಕುಗಳು ಬಿ.ಸಿ. ಸಖಿಗಳನ್ನು ನಿಯೋಜಿಸಬೇಕು ಎಂದು ಸೂಚನೆ ನೀಡಿದರು.

ಬ್ಯಾಂಕಿಂಗ್ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಎಲ್ಲಾ ಸದಸ್ಯ ಬ್ಯಾಂಕುಗಳ ಶಾಖೆಗಳ ತೆರೆಯುವಿಕೆಗೆ ಸಂಬಂಧಪಟ್ಟ ಅರ್ಜಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಜೊತೆಗೆ ಬಾಕಿ ಇರುವ ಎಲ್ಲಾ ಪ್ರಾಯೋಜಿತ ಯೋಜನೆಗಳ ಅರ್ಜಿಗಳನ್ನು ಕೂಡ ತ್ವರಿತವಾಗಿ ಪ್ರಕ್ರಿಯೆಗೊಳಿಸಿ ಪೂರೈಸಬೇಕು ಎಂದು ನಿರ್ದೇಶನ ನೀಡಿದರು.

ಕನ್ನಡ ಬಳಸಿ:
ಜಿಪಂ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಅವರು ಮಾತನಾಡಿ, ಜನಸುರಕ್ಷಾ ಯೋಜನೆಯಡಿ ಪಿ.ಎಂ.ಜೆ.ಜೆ.ಬಿ.ವೈ. ಹಾಗೂ ಪಿ.ಎಂ.ಎಸ್.ಬಿ.ವೈ. ಯಡಿ ಹೆಚ್ಚಿನ ಜನರ ನೋಂದಣಿ ಮಾಡಿಸಬೇಕು. ನೋಂದಣಿ ಅಭಿಯಾನಕ್ಕೆ ಸಹಕಾರ ನೀಡುವಂತೆ ಗ್ರಾಮ ಪಂಚಾಯತಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು. ಜೊತೆಗೆ ಎಲ್ಲ ಬ್ಯಾಂಕುಗಳಲ್ಲಿನ ಸಿಬ್ಬಂದಿ ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು ಎಂದು ಸೂಚಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಘೋಡಕೆ, ಭಾರತೀಯ ರಿಸರ್ವ್ ಬ್ಯಾಂಕ್ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಭಾಕರನ್, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಮತಿ ಶ್ರೀವಿದ್ಯಾ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಅಭಿನವ್ ಯಾದವ್, ಎಲ್ಲ ಬ್ಯಾಂಕುಗಳ ಹಾಗೂ ಅನುಷ್ಟಾನ ಇಲಾಖೆಗಳ ಪ್ರತಿನಿಧಿಗಳು ಹಾಜರಿದ್ದರು.

WhatsApp Group Join Now
Telegram Group Join Now
Share This Article