ಬೈಲಹೊಂಗಲ-ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ಆರಾಧನೆಯಿಂದ ಭಕ್ತರ ಸಕಲ ಇಷ್ಟಾರ್ಥಗಳು,ಸಂಕಲ್ಪ ಪೂರ್ಣಗೊಳ್ಳುವುದು ನೂರಕ್ಕೆ ನೂರರಷ್ಟು ಸಿದ್ಧವೆಂದು ಧಾರ್ಮಿಕ ದತ್ತಿ ಪರಿಷತ್ ಮುಜರಾಯಿ ಇಲಾಖೆ ಸದಸ್ಯರಾದ ಡಾ.ಮಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳು ನುಡಿದರು.
ಪಟ್ಟಣದ ಬಸ್ ನಿಲ್ದಾಣದ ಹಿಂದುಗಡೆಯ ಕುಲಕರ್ಣಿ ಗಲ್ಲಿಯ ಹುಡೇದ ಬಾವಿ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ತಾಯಿ ಚಾಮುಂಡೇಶ್ವರಿ ದೇವಸ್ಥಾನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ ಇಂದಿನ ಮೊಬೈಲ ಯುಗದಲ್ಲಿ ಯುವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಿಸುವ ಭರದಲ್ಲಿ ನಮ್ಮ ಸನಾತನ
ಧರ್ಮದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಆದರೆ ಕುಲಕರ್ಣಿ ಗಲ್ಲಿಯ ಯುವಕರ ತಂಡವೊಂದು ಸಮಾನ ಮನಸ್ಕರಾಗಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ ನಿರ್ಮಿಸುವುದರ ಮೂಲಕ ಧರ್ಮ ಜಾಗೃತಿಯ ಕಡೆಗೆ ಗಮನ ಹರಿಸಿದ್ದು ವಿಶೇಷ.
ನವರಾತ್ರಿ ಪವಿತ್ರ ಸಂದರ್ಭದಲ್ಲಿ ಭಕ್ತರಿಂದ ದೇವಾಲಯ ನಿರ್ಮಿಸಿಕೊಂಡು ಈ ಭಾಗದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರವಾಗಿಸಲು ಸಂಕಲ್ಪ ಮಾಡಿರುವ ಮುನ್ಸೂಚನೆ ನೀಡಿದ್ದಾಳೆ.ತಾಯಿ ಚಾಮುಂಡೇಶ್ವರಿಯನ್ನು ನಿರ್ಮಲ ಭಕ್ತಿಯಿಂದ ಆರಾಧಿಸುವ ಮೂಲಕ ಭಕ್ತರು ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗುವಂತೆ ತಿಳಿಸಿದರು.
ಸಾನಿಧ್ಯ ವಹಿಸಿದ್ದ ವೇ. ಮೂ. ಮಹಾಂತಯ್ಯ ತೆಗ್ಗಿನಮಠ ಶಾಸ್ತ್ರಿಗಳು ಮಾತನಾಡಿ ಸನಾತನ ಹಿಂದೂ ಧರ್ಮದಲ್ಲಿ ನವರಾತ್ರಿ ದಿನಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.ಪುರಾಣದಲ್ಲಿ ಹೇಳುವ ಹಾಗೆ ದೇವತೆಗಳ ಕೋರಿಕೆಯಂತೆ ಮಹಿಷಾಸುರನನ್ನು ತಾಯಿ ಚಾಮುಂಡೇಶ್ವರಿಯು ಸಂಹರಿಸಿ ದೇವತೆಗಳಿಗೆ ಅನುಗ್ರಹಿದ ಹಾಗೆ ನವರಾತ್ರಿಯಲ್ಲಿ ಅಮ್ಮನವರ ಆರಾಧನೆಯಿಂದ ನಮ್ಮ ಕಷ್ಟಗಳು ಮಂಜಿನಂತೆ ಕರಗುವುದು ನಿಶ್ಚಿತ.
ಚಾಮುಂಡೇಶ್ವರಿ ಅಮ್ಮನವರು ಈ ಭಾಗದಲ್ಲಿ ನೆಲೆನಿಂತಿರುವುದು ಈ ಭಾಗದ ಭಕ್ತರ ಪೂರ್ವಜನ್ಮದ ಪುಣ್ಯದ ಫಲವೆಂದು ನುಡಿದರು. ವೇ.ಮೂ.ಸಂಜಯ ಪತ್ರಿಮಠ ಶಾಸ್ತ್ರಿಗಳು ಅಮ್ಮನವರ ಗದ್ದುಗೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ,ವಿವಿಧ ಪುಷ್ಪಗಳಿಂದ ಅಲಂಕರಿಸಿ ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಪೂಜಾ ಕೈoಕರ್ಯ ನೆರವೇರಿಸಿದರು.
ಇದೇ ವೇಳೆ ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬೆಂಗಳೂರಿನ ಶನೇಚ್ಚ್ಚರ ಮಂದಿರದ ಅರ್ಚಕರಾದ ಬಸವರಾಜ ಹಿರೇಮಠ ಶಾಸ್ತ್ರೀಗಳು,ಹಿರಿಯರಾದ ಬಾಳಪ್ಪ ಕುರುಬರ,ಮುಖಂಡರಾದ ಸಿದ್ದು ಕಣಬರಗಿ,ಸಂಗಮೇಶ ಹುಲಗನ್ನವರ,ಬಸವರಾಜ ಮಾಟೊಳ್ಳಿ,ಶಿವು ಜೋಳದ,ಕಿರಣ ಶಿರವಂತಿ,ಶ್ರೀಶೈಲ ಶಿಲ್ಲೇದಾರ, ಸಿದ್ದು ಶಿರವಂತಿ,ಭೀಮಸೇನ ಕಂಬಾರ,ಕಿರಣ ಚಪಳಿ ಸೇರಿದಂತೆ ಚಾಮುಂಡೇಶ್ವರಿ ದೇವಸ್ಥಾನದ ಕಮಿಟಿ ಸದಸ್ಯರು, ಸದ್ಭಕ್ತರು ಇದ್ದರು.