ಬೆಂಗಳೂರು: ಆಗಸ್ಟ್ 11ರಿಂದ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಅಧಿವೇಶನಕ್ಕೂ ಮುನ್ನವೇ ಎಂಎಲ್ಸಿ ನಿಗಮ-ಮಂಡಳಿ ನೇಮಕಾತಿಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಈಗಾಗಲೇ ಹಲವು ಬಾರಿ ನವದೆಹಲಿಗೆ ಭೇಟಿ ನೀಡಿ, ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲೇ ನೇಮಕಾತಿಗಳನ್ನು ಮಾಡುತ್ತಾರೆಂಬ ವಿಶ್ವಾಸದಲ್ಲಿ ಆಕಾಂಕ್ಷಿಗಳಿದ್ದಾರೆ.
ಕಳೆದ ಆರು ವಾರಗಳಲ್ಲಿ, ಸಿದ್ದರಾಮಯ್ಯ ಅವರು ಎರಡು ಬಾರಿ ನವದೆಹಲಿಗೆ ಭೇಟಿ ನೀಡಿದ್ದು, ಜುಲೈ 25 ರಂದು ರಾಷ್ಟ್ರ ರಾಜಧಾನಿಗೆ ಮತ್ತೆ ಭೇಟಿ ನೀಡಲಿದ್ದಾರೆ. ಆದರೆ, ಶಿವಕುಮಾರ್ ಅವರಿಗೆ ಇದು ಐದನೇ ಭೇಟಿಯಾಗಲಿದೆ.
ಕುತೂಹಲಕಾರಿಯಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಇದೇ ಅವಧಿಯಲ್ಲಿ ನಾಲ್ಕು ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದರು.
ದೆಹಲಿ ಭೇಟಿಯ ಸಮಯದಲ್ಲಿ, ಸಿಎಂ ಮತ್ತು ಡಿಸಿಎಂ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ಕೇಂದ್ರ ಸಚಿವರೊಂದಿಗೆ ಸಭೆ ನಡೆಸಿದರು, ಇದೇ ವೇಳೆ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿದ್ದರು.
ನಿಗಮ-ಮಂಡಳಿ ಹಾಗೂ ನಾಲ್ಕು ಎಂಎಲ್ಸಿ ಸ್ಥಾನಗಳ ಮೇಲೆ ಪ್ರಭಾವ ಬೀರಲು ಇಬ್ಬರೂ ನಾಯಕರು ಪ್ರಯತ್ನಿಸುತ್ತಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.