ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರನ್ನು ತಲುಪಿರುವ ‘ಮಾಂಕ್ ದಿ ಯಂಗ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
ನಟ ಕೃಷ್ಣ ಅಜಯ್ ರಾವ್, ನಿರ್ದೇಶಕ ಸಿಂಪಲ್ ಸುನಿ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ನಟ ಬಬ್ಲು ಪೃಥ್ವಿರಾಜ್, ನಟ ನಿಶ್ಚಿತ್ ಸೇರಿದಂತೆ ಮುಂತಾದವರು ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
“ಟ್ರೇಲರ್ ನೋಡಿದಾಗ ಹೊಸತಂಡದ ಚಿತ್ರ ಎಂದು ಹೇಳಲಾಗುವುದಿಲ್ಲ. ಅಷ್ಟು ಚೆನ್ನಾಗಿದೆ. ಚಿತ್ರ ಕೂಡ ಉತ್ತಮವಾಗಿ ಬಂದಿರುತ್ತದೆ ಎಂಬುದು ಟ್ರೇಲರ್ ನಲ್ಲೆ ತಿಳಿಯುತ್ತಿದೆ. ಚಿತ್ರ ಯಶಸ್ವಿಯಾಗಲಿ” ಎಂದು ಅಜಯ್ ರಾವ್ ಹಾರೈಸಿದರು.
“ಇಡೀ ತಂಡದ ಶ್ರಮದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರ ನಿಮಗೆ ಬೇಸರ ತರಿಸದೆ, ನಿಮ್ಮನ್ನು ಎರಡು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುತ್ತದೆ. ಅಂತಹ ಉತ್ತಮ ಕಥಾಹಂದರ ಹೊಂದಿದೆ ‘ಮಾಂಕ್ ದಿ ಯಂಗ್” ಎಂದರು ನಟ ಸರೋವರ್.
“ನಾವು ನಾಲ್ಕು ಜನ ನಿರ್ಮಾಪಕರು ಒಂದೊಂದು ರಾಜ್ಯದವರು. ಹಾಗಾಗಿ ಇದು ನಿಜವಾಗಲೂ ಪ್ಯಾನ್ ಇಂಡಿಯಾ ಚಿತ್ರ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಫೆಬ್ರವರಿ 28 ರಂದು ನಮ್ಮ ಚಿತ್ರ ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ” ಎಂದರು ನಿರ್ಮಾಪಕರಾದ ಕರ್ನಲ್ ರಾಜೇಂದ್ರನ್, ಗೋಪಿಚಂದ್, ಲಾಲ್ ಚಂದ್ ಖತಾರ್ ಹಾಗೂ ವಿನಯ್ ಬಾಬು ರೆಡ್ಡಿ ಶೆಟ್ಟಿಹಳ್ಳ.
“ಪ್ರಪಂಚದಲ್ಲಿ ಜನ ಪಾಸಿಟಿವ್ ಗಿಂತ ನೆಗೆಟಿವ್ ಅನ್ನು ಹೆಚ್ಚು ಬೇಗ ನಂಬುತ್ತಾರೆ. ಆದರೆ ಪಾಸಿಟಿವ್ ಏನು ಎಂಬುದು ನಿಧಾನಕ್ಕೆ ಎಲ್ಲರಿಗೂ ತಿಳಿಯುತ್ತದೆ. ಈ ಅಂಶವನ್ನಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಸಿಜೆ ವರ್ಕ್ ಗೆ ಹೆಚ್ಚು ಒತ್ತು ನೀಡಲಾಗಿದೆ “ಎಂದು ನಿರ್ದೇಶಕ ಮಾಸ್ಚಿತ್ ಸೂರ್ಯ ತಿಳಿಸಿದರು.
ನಾಯಕಿ ಸೌಂದರ್ಯ ಗೌಡ, ಛಾಯಾಗ್ರಾಹಕ ಕಾರ್ತಿಕ್ ಶರ್ಮ, ಸಂಗೀತ ನಿರ್ದೇಶಕ ಸ್ವಾಮಿನಾಥನ್, ನಟ ಬಬ್ಲು ಪೃಥ್ವಿರಾಜ್, ಉಷಾ ಭಂಡಾರಿ, ನಟ ಪ್ರಣಯ್ ಮೂರ್ತಿ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ‘ಮಾಂಕ್ ದಿ ಯಂಗ್’ ಬಗ್ಗೆ ಮಾತನಾಡಿದರು.