ಬಳ್ಳಾರಿ, ಫೆ.19:..ವಿದ್ಯಾರ್ಥಿ ಯುವಜನರು ಸೋಶಿಯಲ್ ಮೀಡಿಯಾದ ವ್ಯಾಮೋಹಕ್ಕೆ ಬಲಿಯಾಗದೇ ಓದಿನತ್ತ ಗಮನ ಹರಿಸಿ ಪೋಷಕರ ಕನಸುಗಳನ್ನು ಈಡೇರಿಸಬೇಕು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಸರ್ಕಾರಿ ಬಾಲಕಿಯರ ಪದವಿಪೂರ್ವ ಪ್ರೌಢಶಾಲೆಯ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಸಾಂಘಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯದು ಕೆಟ್ಟದ್ದೂ ಎರಡೂ ಇವೆ, ಜ್ಞಾನ ಸಂಪಾದನೆಗೆ ಬಳಸಿಕೊಳ್ಳಿ, ಆದರೆ ಓದುವ, ಒಂದು ನಿರ್ದಿಷ್ಟ ಗುರಿ ತಲುಪುವ ಈ ವಯಸ್ಸಿನಲ್ಲಿ ಶಿಕ್ಷಕರ, ಗುರು ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ ಎಂದರು.
ನೀವು ಹೊರ ಜಿಲ್ಲೆಗಳಿಗೆ ವ್ಯಾಸಂಗಕ್ಕೆ ಹೋದಾಗ ನಮ್ಮ ಬಳ್ಳಾರಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಬೇಕು, ಆ ರೀತಿ ನಗರವನ್ನು ಅಭಿವೃದ್ಧಿಪಡಿಸುವೆ ಎಂದ ಅವರು, ನಿಮ್ಮ ಪ್ರೀತಿ ಆಶೀರ್ವಾದದಿಂದ ನಾನು ಶಾಸಕನಾಗಿರುವೆ, ನಿಮ್ಮ ಪ್ರೀತಿ ಆಶೀರ್ವಾದ ಇದ್ದರೆ ಮುಂಬರುವ 40 ವರ್ಷಗಳ ಕಾಲ ನಾನು ಶಾಸಕನಾಗಿ ನಿಮ್ಮ ಸೇವೆ ಮಾಡುವೆ, ನೀವು ನನ್ನ ಬೆಂಬಲಕ್ಕಿದ್ದರೆ ಯಾರೇ ಆಗಲಿ- ಯಾವ ಶಕ್ತಿಯೇ ಆಗಲಿ ಅಡ್ಡ ಬಂದರೂ ನಾನು ನಿಲ್ಲಲ್ಲ ಎಂದರು.
ಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ 1200 ಕೋಟಿ ರೂ.ಗಳ ಯೋಜನೆ ರೂಪಿಸಿರುವೆ, ನಗರದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾದರೆ ಇಲ್ಲಿಗೆ ಐಟಿ-ಬಿಟಿ ಕಂಪೆನಿಗಳನ್ನು ಆಕರ್ಷಿಸಬಹುದು, ಆಗ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಸುಲಭ ಎಂದರು.
ನಗರ ವ್ಯಾಪ್ತಿಯ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ನಾನು ಕಂಕಣ ಬದ್ಧನಾಗಿರುವೆ, ನಮ್ಮ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಐಎಎಸ್-ಐಪಿಎಸ್’ನಂತಹ ಉನ್ನತ ಹುದ್ದೆಗಳನ್ನು ಪಡೆಯುವ ಮೂಲಕ ಬಳ್ಳಾರಿಯ ವಿದ್ಯಾರ್ಥಿಗಳೆಂದರೆ ಬುದ್ಧಿವಂತರು ಎಂಬ ಹೆಸರು ತರಬೇಕು ಎಂದರು.
ಇದೇ ಸಂದರ್ಭ ಇಂದು ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಸರ್ಕಾರಿ ಬಾಲಕಿಯರ ಪದವಿಪೂರ್ವ ಹಾಗೂ ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗಿಯಾದೆ. ಇದಕ್ಕೂ ಮುನ್ನ 1.24 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ 7 ಕೊಠಡಿಗಳು, 2 ಲ್ಯಾಬೊರೇಟರಿಗಳನ್ನು ಉದ್ಘಾಟಿಸಿದರು. ಶುದ್ಧ ಕುಡಿಯುವ ನೀರಿನ ಘಟಕ (ಆರ್.ಓ ಪ್ಲಾಂಟ್) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ಮಿಂಚು ಶ್ರೀನಿವಾಸ, ಜಬ್ಬಾರ್, ಕುಬೇರಾ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಸುಬ್ಬರಾಯುಡು, ಮೊಹಮ್ಮದ ಭಾಯ್, ಭಂಭಂ ದಾದಾಭಾಯ್, ಬಿಆರೆಲ್ ಸೀನಾ, ಶಿವರಾಜ್, ವೀರಶೈವ ಲಿಂಗಾಯತ ಮಹಾಸಭಾದ ಚಾನಾಳ್ ಶೇಖರ್, ಪ್ರಾಂಶುಪಾಲೆ ಸುಲೇಖಾ, ಕಾಲೇಜು ಅಭಿವೃದ್ಧಿ ಸಮಿತಿಯ ಶಮೀಮ್ ಜೊಹರಾ, ಅಭಿನಯ ಅಭಿಲಾಶ್, ತ್ರಿವೇಣಿ, ಭೋದಕ-ಭೋದಕೇತರ ಸಿಬ್ಬಂದಿ ಮತ್ತಿತರರು ಹಾಜರಿದ್ದರು.


