ಧಾರವಾಡ : ಛಲ, ದೃಢಸಂಕಲ್ಪದ ಪ್ರತೀಕ ಭಗೀರಥ. ತಮ್ಮ ಸಾಧನೆಯ ಮೂಲಕ ಗಂಗಾ ನದಿಯ ದಿಕ್ಕನ್ನು ಬದಲಿಸಿ ಜನರಿಗೆ ಸಾಧನೆಯ ದಾರಿಯನ್ನು ತೋರಿಸಿಕೊಟ್ಟವರು, ಅಂಥವರ ಜಯಂತಿ ಆಚರಿಸುತ್ತಿರುವುದು ನಮ್ಮ ಪುಣ್ಯ ಎಂದು ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ ಅವರು ಹೇಳಿದರು.
ನಗರದ ಆಲೂರು ವೆಂಕಟರಾವ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಮಹರ್ಷಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಗಂಗಾ ನದಿಯ ದಿಕ್ಕನ್ನೆ ಬದಲಿಸಿದ ಮಹಾನ್ ವ್ಯಕ್ತಿ ಮಹರ್ಷಿ ಭಗೀರಥರು. ತಮ್ಮ ಸಾಧನೆಯ ಮೂಲಕ ಎಲ್ಲ ಮನಕುಲಕ್ಕೆ ಸಹಾಯ ಮಾಡಿದ್ದಾರೆ ಎಂದರು.
ಭಗೀರಥರನ್ನು ಕಠಿಣ ಪರಿಶ್ರಮ, ದೃಡತೆಗೆ ಹೊಲಿಸಲಾಗುತ್ತದೆ. ಅವರ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ. ಅವರಂತೆ ಸಾಮಾಜಿಕ ನಿಷ್ಠೆ, ಸಮಾಜಮುಖಿ ಕಾರ್ಯಗಳನ್ನು ಅಳವಡಿಸಬೇಕೆಂದು ಶಾಸಕ ಅರವಿಂದ ಬೆಲ್ಲದ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಾನಪದ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ವೆಂಕನಗೌಡ ಪಾಟೀಲ ಅವರು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಕ್ಲಾಸಿಕ್ ಶಿಕ್ಷಣ ಸಂಸ್ಥೆ ಚೇರಮನ್ ಲಕ್ಷ್ಮಣ ಉಪ್ಪಾರ, ಉತ್ಸವ ಸಮಿತಿಯ ಅಧ್ಯಕ್ಷ ಸತೀಶ ಮುರಗೋಡ, ಯುವಕ ಸಂಘದ ಅಧ್ಯಕ್ಷ ಮಹಾಂತೇಶ ಯಡ್ರಾವಿ, ಹಿರಿಯ ಮುಖಂಡ ಎಸ್. ಜಿ. ಸವಟಗಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಭಾಗ್ಯಶ್ರೀ ಹೂಗಾರ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆರತಿ ದೇವಶಿಖಾಮಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸಮಾಜದ ಬಾಂಧವರು ಹಾಗೂ ಉಪ್ಪಾರ ಸಮಾಜದವರೂ, ಸಾರ್ವಜನಿಕರು ಭಾಗವಹಿಸಿದ್ದರು.