*ಸುಳೇಭಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ*
*ಚುನಾವಣೆ ಸಂದರ್ಭದಲ್ಲಿ ಬಂದು ಹೋಗುವವರ ಬಗ್ಗೆ ಎಚ್ಚರವಿರಲಿ*
ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಹಾತ್ಮರ ಮೂರ್ತಿಗಳನ್ನು ಸ್ಥಾಪಿಸುವುದು ರಾಜಕೀಯ ಉದ್ದೇಶಕ್ಕಲ್ಲ, ಜನರನ್ನು ಖುಷಿಪಡಿಸಲೂ ಅಲ್ಲ. ಅವರ ಸಾಧನೆ ಹೋರಾಟ, ನಮ್ಮ ಮಕ್ಕಳಿಗೆ ಸ್ಫೂರ್ತಿಯಾಗಲಿ, ಈ ದೇಶದ ಸಂಸ್ಕೃತಿ ಉಳಿಯಲಿ ಎಂಬ ಕಾರಣಕ್ಕೆ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಸುಳೇಭಾವಿ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ವಂತ ಹಣದಿಂದ ಪ್ರತಿಷ್ಠಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿಯನ್ನು ಭಾನುವಾರ ಸಂಜೆ ಅನಾವರಣಗೊಳಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಸಿಗಲಿ ಎಂಬುದೇ ನಮ್ಮ ಉದ್ದೇಶ. ಛತ್ರಪತಿ ಶಿವಾಜಿ, ಕಿತ್ತೂರು ಚೆನ್ನಮ್ಮ, ಜಗಜ್ಯೋತಿ ಬಸವೇಶ್ವರ, ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾತ್ಮರ ಜೀವನ ಆದರ್ಶವನ್ನು ನಮ್ಮ ಮಕ್ಕಳು ಮೈಗೂಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆ ನಮ್ಮ ಮಕ್ಕಳಿಗೆ ಸ್ಫೂರ್ತಿ ತುಂಬಲಿ ಎನ್ನುವ ಕಾರಣಕ್ಕೆ ಅಂತವರ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಚುನಾವಣೆ 6 ತಿಂಗಳಿರುವಾಗ ಕೆಲವರು ಬಂದು ರಾಜಕಾರಣ ಮಾಡುತ್ತಾರೆ, ಹೋಗುತ್ತಾರೆ. ಆದರೆ ಈ ನಿಮ್ಮ ಲಕ್ಷ್ಮೀ ಹೆಬ್ಬಾಳಕರ ಚುನಾವಣೆಗಾಗಿ ಕೆಲಸ ಮಾಡುವವಳಲ್ಲ. ದಿನದ 24 ಗಂಟೆಗೆ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗಾಗಿಯೇ ಚಿಂತಿಸುತ್ತೇನೆ. ಬೇರೆಯವರು ಜಾತಿಗಳ ಮಧ್ಯೆ ಬೆಂಕಿ ಹಚ್ಚುತ್ತಾರೆ. ಚುನಾವಣೆ ಮುಗಿದ ಬಳಿಕ ನಾಪತ್ತೆಯಾಗುತ್ತಾರೆ. ಆದರೆ ನಾನು ಸುಳೇಭಾವಿ ಗ್ರಾಮದ ಮನೆ ಮಗಳಾಗಿ ನನ್ನೂರು ಎಂದು ಅನುದಾನ ತಂದು ಗ್ರಾಮದ ಅಭಿವೃದ್ಧಿ ಮಾಡಿದ್ದೇನೆ. ಊರು ಸುಧಾರಿಸಲು ಪಣ ತೊಟ್ಡಿದ್ದೇನೆ. ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ. ಸದಾ ಕಾಲ ನನ್ನದು ಅಭಿವೃದ್ಧಿ, ಅಭಿವೃದ್ಧಿ ಎಂದು ಹೇಳಿದರು.
ಅಷ್ಟು ದೊಡ್ಡ ಅಪಘಾತವಾದರೂ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿ ನನ್ನನ್ನು ನಿಮ್ಮ ಸೇವೆ ಮಾಡಲು ಬದುಕಿಸಿದ್ದಾಳೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ಸಾಮಾಜಿಕ ಕಾಳಜಿ, ಬದ್ಧತೆ ಇಟ್ಟುಕೊಂಡು ಧರ್ಮದಿಂದ ಕೆಲಸ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ನನ್ನ ಜೀವನ ಕೇವಲ ಸಂಘರ್ಷ. ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ, ಕೆಟ್ಟದ್ದು ಮಾಡಿಲ್ಲ. ನಾನು ರಾಜ್ಯಕ್ಕೆ ಮಂತ್ರಿ ಆಗಿದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮಗಳಾಗಿ ಕೆಲಸ ಮಾಡುತ್ತಿದ್ದೇನೆ. ಇಡೀ ರಾಜ್ಯದಲ್ಲಿ ಈ ಕ್ಷೇತ್ರ ಗುರುತಿಸುವಂತೆ ಮಾಡಿದ್ದೇನೆ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲಿ ಮೂರು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಿದ್ದೇನೆ. ಹಿಂಡಲಗಾ, ಹಿರೇಬಾಗೇವಾಡಿ, ಬೆನಕನಹಳ್ಳಿ ಗ್ರಾಮಗಳನ್ನು ಮೇಲ್ದರ್ಜೆಗೇರಿಸಿದ್ದು, ಪಟ್ಟಣ ಪಂಚಾಯಿತಿಗಳಾಗಿವೆ. ಪ್ರತಿ ವರ್ಷ 10ರಿಂದ 15 ಕೋಟಿ ರೂ. ವಿಶೇಷ ಅನುದಾನ ಬಂದು ಇಡೀ ಗ್ರಾಮವೇ ಅಭಿವೃದ್ಧಿ ಆಗಲಿದೆ. ಗ್ರಾಮಗಳ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.
ಈ ಗ್ರಾಮ ಹಿಂದೆ ಹೇಗಿತ್ತು, ಇಂದು ಹೇಗಿದೆ ಗಮನಿಸಿ. ನಿಮ್ಮೆಲ್ಲರ ಸಹಕಾರ ಬೇಕು. ನಿಮ್ಮ ಆಜ್ಞೆ ಪಾಲಿಸುತ್ತೇನೆ. ಕೆಲಸ ಮಾಡುವಲ್ಲಿ ನಾನು ಹಠವಾದಿ, ನೂರು ಕೆಲಸ ಹೇಳಿದರೂ ಮಾಡುತ್ತೇನೆ. ನನಗೆ ಜಾತಿ ಧರ್ಮ ಇಲ್ಲ, ಎಲ್ಲರ ಕೆಲಸವನ್ನೂ ಮಾಡುತ್ತಿದ್ದೇನೆ. ಆದರೆ ಸದಾ ನಿಮ್ಮ ಆಶಿರ್ವಾದ ಇರಲಿ. ಕೊನೆಯ ಕ್ಷಣದಲ್ಲಿ ಬರುವವರ ಬಗ್ಗೆ ಜಾಗ್ರತರಾಗಿರಿ ಎಂದು ಸಚಿವರು ವಿನಂತಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಇದೊಂದು ಐತಿಹಾಸಿಕ ದಿನ, ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನ. ಸಮಸ್ತ ಗ್ರಾಮಸ್ಥರು ಶಿವಾಜಿ ಮೂರ್ತಿ ಸ್ಥಾಪನೆಗೆ ಸಹಕಾರ ನೀಡಿದ್ದಾರೆ. ಶಿವಾಜಿ ಮಹಾರಾಜರ ಶೌರ್ಯ, ಪರಾಕ್ರಮವು ವೈರಿಗಳ ಎದೆ ನಡುಗಿಸುವಂಥದ್ದು. ಪರಾಕ್ರಮ ಮೆರೆದು ಭಾರತ ದೇಶವನ್ನು ಸುರಕ್ಷಿತವಾಗಿ ಇಟ್ಟವರು. ಯುವಕರಲ್ಲಿ ಜಾಗೃತಿ ಮೂಡಿಸಲು, ತ್ಯಾಗ, ಶ್ರಮ ಜೀವಂತವಾಗಿ ಇಡಲು ಮಹಾನ್ ಪುರುಷರ ಮೂರ್ತಿ ಸ್ಥಾಪನೆ ಮಾಡುತ್ತಿದ್ದೇವೆ ಎಂದರು.
ಶಿವಾಜಿ, ಬಸವಣ್ಣ, ರಾಯಣ್ಣ, ಚನ್ನಮ್ಮ, ವಾಲ್ಮೀಕಿ, ಅಂಬೇಡ್ಕರರ ಸ್ಮಾರಕಗಳನ್ನು ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯೋಣ ಎಂದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರದು ದೊಡ್ಡ ಮನಸ್ಸು. ಸರ್ಕಾರದ ಅನುದಾನ ಹಾಕಲು ಅವಕಾಶವಿಲ್ಲದಿದ್ದರೂ ಇಲ್ಲಿನ ಜನರ ಜೊತೆಗಿನ ಸಂಬಂಧದಿಂದಾಗಿ ಸ್ವಂತ ಹಣ ಹಾಕಿ ಶಿವಾಜಿ ಪುತ್ಥಳಿ ಸ್ಥಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಹೇಳಿದರು.
ರಾಷ್ಟ್ರದ ನಿರ್ಮಾಣಕ್ಕಾಗಿ, ದೇಶದ ಸಂಸ್ಕೃತಿ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರು ಶಿವಾಜಿ ಮಹಾರಾಜರು. ಕಷ್ಟಗಳು ಎದುರಾದರೂ ಧೃತಿಗೆಡದೆ ಪರಾಕ್ರಮ ಮೆರೆದರು. ದೇಶದ ರಕ್ಷಣೆ ಮಾಡಿದರು. ಇಂತಹ ಮಹಾನ್ ಪುರುಷರ ಮೂರ್ತಿ ಸ್ಥಾಪಿಸುವ ಮೂಲಕ ಇಂದಿನ ಪೀಳಿಗೆಯವರಿಗೆ ಅವರ ಕೊಡುಗೆ, ಸಾಧನೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಚನ್ನರಾಜ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮುಖಂಡರಾದ ಬಸನಗೌಡ ಹುಂಕ್ರಿಪಾಟೀಲ, ನಾಗೇಶ ದೇಸಾಯಿ, ಶಂಕರಗೌಡ ಪಾಟೀಲ, , ಬಸವರಾಜ ಮ್ಯಾಗೋಟಿ, ಮಾತನಾಡಿದರು. ವೇದಮೂರ್ತಿ ಶ್ರೀಶೈಲ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ದೇವಣ್ಣ ಬಂಗೇನ್ನವರ, ಗ್ರಾಪಂ ಅಧ್ಯಕ್ಷೆ ಪಕೀರವ್ವ ಅಮರಾಪುರ, ನಿಲೇಶ ಚಂದಗಡಕರ, ಸುರೇಶ ಕಟಬುಗೋಳ, ಮಹೇಶ ಸುಗಣೆನ್ನವರ, ಸಂಭಾಜಿ ಯಮೋಜಿ, ವಿಠ್ಠಲ ಕಲಾದಗಿ, ಲಕ್ಷ್ಮಣ ಮಂಡು, ಶಿವಾಜಿ ಹುಂಕ್ರಿಪಾಟೀಲ, ಮಹೇಶ ಸುಗಣೆನ್ನವರ, ಜೀವನಪ್ಪ ಶಿಂಧೆ, ಅಶೋಕ ಯರಝರವಿ, ಯಮನಪ್ಪ ಕಲಾಬಾರ, ರುದ್ರಪ್ಪ ಅಮರಾಪುರ ಸೇರಿದಂತೆ ಇತರರು ಇದ್ದರು. ಭೈರೋಬಾ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮ್ಯಾಗೋಟಿ ಸ್ವಾಗತಿಸಿದರು.