ಚಿಕ್ಕಮಗಳೂರು, ನವೆಂಬರ್ 24: ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲು ವಿಶೇಷ ತಂಡವನ್ನು ರಚಿಸುವಂತೆ ಸೂಚನೆ ನೀಡಿದ್ದಾರೆ. ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು, ಕಾಡಿಗೆ ಬಿಡಲು ಯಾವುದೇ ಖಾಸಗಿ ಸಂಸ್ಥೆಗಳ ಮೊರೆ ಹೋಗದೆ ಅರಣ್ಯ ಇಲಾಖೆಯ ವಿಭಾಗದ 5 ಸಿಬ್ಬಂದಿಗೆ ತರಬೇತಿ ನೀಡುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಉಡುಪಿ ಭಾಗದಲ್ಲಿ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಂಡು ಬರುತ್ತಿವೆ. ಜನವಸತಿ ಪ್ರದೇಶ ಸೇರಿದಂತೆ ಮನೆಯೊಳಗೆ, ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗನಿಂದ ಸಾರ್ವಜನಿಕರಲ್ಲಿ ಭಯ ಮೂಡುತ್ತಿದೆ. ಇದಕ್ಕೆ ಪರಿಹಾರವಾಗಿ ಉರಗ ತಜ್ಞರು ಮತ್ತು ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸುವ ಅಗತ್ಯವಿಲ್ಲವೆಂದು ಹೇಳಿರುವ ಈಶ್ವರ್ ಖಂಡ್ರೆ, ಕಾಳಿಂಗ ಸರ್ಪವನ್ನು ಹಿಡಿಯಲು ಮತ್ತು ಸುರಕ್ಷಿತವಾಗಿ ಕಾಡಿಗೆ ಬಿಡಲು ನಮ್ಮದೇ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಒಬ್ಬ ಪ್ರಾದೇಶಿಕ ಅರಣ್ಯಾಧಿಕಾರಿಯೊಂದಿಗೆ ತರಬೇತಿ ಪಡೆತ 5 ಜನರ ತಂಡವನ್ನು ನೇಮಿಸಬೇಕು. ಈಗಾಗಲೆ ರಚಿಸಿರುವ ETF(Elephant task Force) ಮತ್ತು LTF (Leopard Task Force) ನಂತೆಯೇ ಕಾಳಿಂಗ ಸರ್ಪವನ್ನು ಹಿಡಿಯಲೂ ಒಂದು ತಂಡ ರಚಿಸುವುದರಿಂದ ಸರ್ಪಗಳ ಸೆರೆ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ವನ್ನೂ ತಪ್ಪಿಸಬಹುದಾಗಿದೆ ಎಂದು ಹೇಳೀದ್ದಾರೆ.


