ಹುಕ್ಕೇರಿ: ಸಹಕಾರಿ ತತ್ವದಡಿ ವಿದ್ಯುತ್ ಸರಬರಾಜು ಮಾಡುತ್ತಿರುವ ದೇಶದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಗುರುವಾರ ಸಂಸ್ಥೆಯ ಗ್ರಾಹಕ-ಸದಸ್ಯರ ಅಹವಾಲು ಆಲಿಸಿದರು.
ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಗ್ರಾಹಕ-ಸದಸ್ಯರ ಕುಂದುಕೊರತೆಗಳನ್ನು ಸಮಚಿತ್ತದಿಂದ ಆಲಿಸಿದ ಸಚಿವ ಜಾರಕಿಹೊಳಿ ಅವರು, ಕೂಡಲೇ ಈ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ತೋಟದ ಮನೆಗಳಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಹಲವು ಕ್ರಮ ವಹಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆ, ಗ್ರಾಹಕರ ದಿನಬಳಕೆಗೆ ಅನುಕೂಲವಾಗಿದೆ. ವಿದ್ಯುತ್ ಸಂಘದಿಂದ ಉತ್ತಮ ಆಡಳಿತ ನೀಡುವ ಉದ್ದೇಶ ಹೊಂದಲಾಗಿದೆ. ಹಾಗಾಗಿ ಬರುವ ಚುನಾವಣೆಯಲ್ಲಿ ತಮ್ಮ ಗುಂಪಿಗೆ ಮತ ನೀಡುವ ಮೂಲಕ ಸಹಕಾರಿ ಸಂಸ್ಥೆಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಹಿರಣ್ಯಕೇಶಿ ಮತ್ತು ವಿದ್ಯುತ್ ಸಂಘದ ನಿರ್ದೇಶಕರಿಗೆ ತಡವಾಗಿ ಜ್ಞಾನೋದಯವಾದಂತಾಗಿದೆ. ಅನೇಕ ದಶಕಗಳ ದಬ್ಬಾಳಿಕೆ, ದೌರ್ಜನ್ಯದಿಂದ ಇದೀಗ ಹೊರ ಬಂದಿರುವ ನಿರ್ದೇಶಕರು ಇದೀಗ ಎಚ್ಚರಿಕೆ ಹೆಜ್ಜೆ ಇಡಬೇಕು. ತಾಲೂಕಿನ ಜನರಲ್ಲಿ ಅರಿವು ಮೂಡಿಸಿ ವಿದ್ಯುತ್ ಸಂಘದ ಹಾನಿಗೆ ಕಾರಣವಾದ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಸಚಿವರು ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಯ ಕಾರ್ಯದರ್ಶಿಗಳ ಸಭೆ ನಡೆಸಿದರು. ಹಿರಣ್ಯಕೇಶಿ ಕಾರ್ಖಾನೆ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ, ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕ ಬಸವರಾಜ ಮರಡಿ. ವಿದ್ಯುತ್ ಸಂಸ್ಥೆಯ ಅಧ್ಯಕ್ಷ ಜಯಗೌಡ ಪಾಟೀಲ, ನಿರ್ದೇಶಕರಾದ ರವೀಂದ್ರ ಹಿಡಕಲ್, ಶಶಿರಾಜ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ, ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಶಾನೂಲ್ ತಹಶೀಲ್ದಾರ, ಸಚಿವರ ಆಪ್ತ ಸಹಾಯಕರಾದ ಪಾಂಡುರಂಗ ಮನ್ನಿಕೇರಿ, ಅರವಿಂದ ಕಾರ್ಚಿ, ಕಿರಣ ರಜಪೂತ, ದಯಾನಂದ ಪಾಟೀಲ, ಮುಖಂಡರಾದ ರಿಷಭ್ ಪಾಟೀಲ, ಮಹಾಂತೇಶ ಮಗದುಮ್ಮ, ಮೌನೇಶ ಪೋತದಾರ, ಸಂತೋಷ ಮುಡಸಿ, ರಾಜು ಸಿದ್ನಾಳ, ಬಸವರಾಜ ಕೋಳಿ, ಮಲ್ಲಿಕಾರ್ಜುನ ರಾಶಿಂಗೆ, ಬಸವರಾಜ ದೊಡಮನಿ, ಮಹೇಶ ಹಟ್ಟಿಹೊಳಿ, ಅಕ್ಷಯ ವೀರಮುಖ, ಲಕ್ಷ್ಮಣ ಹೂಲಿ, ಕೆಂಪಣ್ಣಾ ಶಿರಹಟ್ಟಿ, ಕೆ.ವೆಂಕಟೇಶ, ಭೀಮಸೇನ ಬಾಗಿ, ವೀರುಪಾಕ್ಷಿ ಮರೆನ್ನವರ, ಭೀಮಗೌಡ ಅಮ್ಮಣಗಿ, ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪುರೆ, ವ್ಯವಸ್ಥಾಪಕ ದುರದುಂಡಿ ನಾಯಿಕ ಮತ್ತಿತರರು ಉಪಸ್ಥಿತರಿದ್ದರು.